ಅತ್ಯಾಚಾರದ ಬಳಿಕ ಸಂತ್ರಸ್ತೆಯನ್ನು ಕೊಲ್ಲದೇ ಜೀವ ಉಳಿಸಿದ್ದಾನೆ ಎಂದು ಆರೋಪಿಯ ಶಿಕ್ಷೆ ಕಡಿತಗೊಳಿಸಿದ ಕೋರ್ಟ್

ಅತ್ಯಾಚಾರ ಮಾಡಿ ನಂತರ ಸಂತ್ರಸ್ತೆಯನ್ನು ಕೊಲ್ಲದೇ ಜೀವಂತವಾಗಿ ಉಳಿಸಿ ದಯೆ ತೋರಿದ್ದಾನೆ ಎಂಬ ಹಿನ್ನೆಲೆಯಲ್ಲಿ ಇತ್ತೀಚೆಗೆ ಅತ್ಯಾಚಾರ ಅಪರಾಧಿಯೋರ್ವನಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು 20 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಇಳಿಸಿದೆ ಕೋರ್ಟು.

ಮಧ್ಯಪ್ರದೇಶ ಹೈಕೋರ್ಟಿನ ಇಂದೋರ್ ಪೀಠದ ನ್ಯಾಯಮೂರ್ತಿಗಳಾದ ಸುಬೋಧ್ ಅಭ್ಯಂಕರ್ ಮತ್ತು ಸತ್ಯೇಂದ್ರ ಕುಮಾರ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠವು ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಿ ತೀರ್ಪು ನೀಡಿದೆ. ಆರೋಪಿಯ ಮೇಲ್ಮನವಿಯನ್ನು ಭಾಗಶಃ ಅನುಮತಿಸಿದೆ ಕೋರ್ಟು.

‘ ಈತನಿಗೆ ಮಹಿಳೆಯರ ಘನತೆಯ ಬಗ್ಗೆ ಗೌರವವಿಲ್ಲ ಎಂದು ತೋರಿಸುತ್ತದೆ. ಅಲ್ಲದೆ ಎಳೆಯ 4 ವರ್ಷ ವಯಸ್ಸಿನ ಹೆಣ್ಣುಮಗುವಿನ ಮೇಲೆ ಪೈಶಾಚಿಕ ಕೃತ್ಯ ಎಸಗಿರುವುದು ರಾಕ್ಷಸ ಮನಸ್ಥಿತಿಯನ್ನು ತೋರಿಸುತ್ತದೆ. ಆದರೂ ಜೀವಾವಧಿ ಶಿಕ್ಷೆಗೆ ಈ ಪ್ರಕರಣ ಅರ್ಹವಲ್ಲ. ಸಂತ್ರಸ್ತೆಯನ್ನು ಜೀವಂತ ಬಿಟ್ಟು ಕಳಿಸಿ ಆತ ದಯೆ ತೋರಿದ್ದಾನೆ. ಆ ಕಾರಣಕ್ಕೆ ಜೀವಾವಧಿ ಶಿಕ್ಷೆಯನ್ನು 20 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಇಳಿಸಬಹುದು ‘ ಎಂದು ಕೋರ್ಟು ಹೇಳಿದೆ.

ಈ ಪ್ರಕರಣದಲ್ಲಿ ಅಪರಾಧಿಯು ಸಂತ್ರಸ್ತೆ ಇದ್ದ ಗುಡಿಸಲಿನ ಬಳಿ ಟೆಂಟ್‌ನಲ್ಲಿ ವಾಸಿಸುತ್ತಿದ್ದನು. ಮಗುವಿಗೆ ಒಂದು ರೂಪಾಯಿ ಕೊಡುವ ನೆಪದಲ್ಲಿ ಸಂತ್ರಸ್ತೆಯನ್ನು ಆರೋಪಿ ಟೆಂಟ್‌ಗೆ ಕರೆದಿದ್ದಾನೆ. ಅಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಸಂತ್ರಸ್ತೆ ಕೂಗು ಕೇಳಿ ಆಕೆಯ ತಂದೆ ಹಾಗೂ ಅಜ್ಜಿ ಸಹಾಯಕ್ಕೆ ಧಾವಿಸಿದ್ದಾರೆ. ಟೆಂಟ್ ಪ್ರವೇಶಿಸಿದಾಗ ಮಗು ರಕ್ತಸ್ರಾವವಾಗಿ ಬಿದ್ದಿರುವುದು ಹಾಗೂ ಅಪರಾಧಿ ಬೆತ್ತಲೆಯಾಗಿರುವುದನ್ನು ಕಂಡಿದ್ದಾರೆ. ಬಳಿಕ ಆತ ಓಡಿಹೋಗಿದ್ದಾನೆ. ನಂತರ ಬಾಲಕಿ ಇಡೀ ಘಟನೆಯ ಬಗ್ಗೆ ತಂದೆಗೆ ತಿಳಿಸಿದ್ದು, ಆಕೆಯನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ (Hospital) ಕರೆದೊಯ್ದಾಗ, ವೈದ್ಯರು ಅತ್ಯಾಚಾರ ಆಗಿರುವುದನ್ನು ಖಚಿತಪಡಿಸಿದ್ದರು.

12 ವರ್ಷದೊಳಗಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ತನ್ನನ್ನು ದೋಷಿ ಎಂದು ಇಂದೋರ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿದಾರ ರಾಮು ಅಲಿಯಾಸ್ ರಾಮ್‌ಸಿಂಗ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ತೀರ್ಪು ನೀಡಿದೆ.

ಬಳಿಕ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ನಂತರ ಆರೋಪಿಯನ್ನು ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

Leave A Reply

Your email address will not be published.