ಕಣ್ಣಿನ ದೋಷವನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸುವ ನೆಪ | ವೃದ್ಧನ ನಿಜವಾದ ಕಣ್ಣನ್ನು ತೆಗೆದು ಆ ಜಾಗಕ್ಕೆ ನಕಲಿ ಕಣ್ಣು ಇಟ್ಟ ವೈದ್ಯ

ಆರೋಗ್ಯವೇ ಭಾಗ್ಯ ಎಂದು ದೇಹದಲ್ಲಿ ಸಣ್ಣ ಏರುಪೇರಾದೂ ವೈದ್ಯರನ್ನೂ ಕಾಣುವುದು ವಾಡಿಕೆ. ವೈದ್ಯರನ್ನು ದೇವರ ಪ್ರತಿರೂಪವೆಂದು ನಂಬುವ ಪರಿಪಾಠ ಇಂದಿಗೂ ಹಲವರಲ್ಲಿದೆ. ವೈದ್ಯರು ಏನೇ ಸಲಹೆ ಸೂಚನೆಗಳನ್ನು ನೀಡಿದರು ಕೂಡಾ ಸತ್ಯವೆಂದು ನಂಬಿ ಅದರ ಸತ್ಯಾಸತ್ಯತೆಯ ವಿಮರ್ಶೆ ಕೂಡ ಮಾಡದೆ ಅವರು ಸೂಚಿಸುವ ಚಿಕಿತ್ಸೆ,ಇಲ್ಲವೇ ಔಷಧಿಗಳನ್ನು ಕಣ್ಣು ಮುಚ್ಚಿ ಹೊಟ್ಟೆಗೆ ಹಾಕಿಕೊಳ್ಳುವುದು ಸಾಮಾನ್ಯ.

ಎಲ್ಲರೂ ನಂಬುವ ವೈದ್ಯರಿಂದಲೆ ಅಚಾತುರ್ಯವಾಗಿ ಪ್ರಾಣ ಕಳೆದುಕೊಂಡ ಪ್ರಕರಣಗಳು ಕೂಡ ಬೇಕಾದಷ್ಟಿವೆ. ವೈದ್ಯರ ಬೇಜವಾಬ್ದಾರಿಯ ನಡೆಯಿಂದ ದೊಡ್ಡ ಪ್ರಮಾದ ನಡೆದಿರುವ ಪ್ರಕರಣ ಜಾರ್ಖಂಡ್‌ನಲ್ಲಿ ವರದಿಯಾಗಿದೆ.

ಕಣ್ಣಿನ ದೋಷವನ್ನು ಶಸ್ತ್ರಚಿಕಿತ್ಸೆ ಮಾಡಿ ಸರಿಪಡಿಸುವ ನಿಟ್ಟಿನಲ್ಲಿ ವೃದ್ಧರೊಬ್ಬರ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರೊಬ್ಬರು, ಆತನ ನಿಜವಾದ ಕಣ್ಣನ್ನು ತೆಗೆದು ಆ ಜಾಗಕ್ಕೆ ನಕಲಿ ಕಣ್ಣು ಹಾಕಿರುವ ಘಟನೆ ನಡೆದಿದೆ.

ಜೆಮ್ಶೆಡ್ಪರದಲ್ಲಿ ಆಘಾತಕಾರಿ ಘಟನೆಯು ನಡೆದಿದ್ದು, ನಕಲಿ ಕಣ್ಣನ್ನು ಕೈಯಲ್ಲಿ ಹಿಡಿದುಕೊಂಡು ವೃದ್ಧ ಆಸ್ಪತ್ರೆಗೆ ತಲುಪಿದಾಗ ಅಲ್ಲಿದ್ದವರೆಲ್ಲಾ ಒಮ್ಮೆ ದಿಗ್ಬ್ರಾಂತರಾಗಿದ್ದಾರೆ.

ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಗಂಗಾಧರ್‌ ಸಿಂಗ್‌ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, ಕಳೆದ ಕೆಲವು ಸಮಯಗಳಿಂದ ಗಂಗಾಧರ್‌ ಅವರ ಒಂದು ಕಣ್ಣಿನಿಂದ ವಿಪರೀತ ನೀರು ಬರುತ್ತಿತ್ತು.

ಈ ವೇಳೆ ಇವರ ಗ್ರಾಮಕ್ಕೆ ಬಂದ ಮಹಿಳೆಯೊಬ್ಬರಿಗೆ ತಮ್ಮ ಸಮಸ್ಯೆ ಹೇಳಿಕೊಂಡಿದ್ದು, ಈ ವೇಳೆ ಆ ಮಹಿಳೆ, ತಾನು ಎನ್‌ಜಿಓ (NGO) ಜೊತೆ ಮಾತನಾಡಿ ಕಣ್ಣಿನ ಚಿಕಿತ್ಸೆಗೆ ಸಹಾಯ ಮಾಡುವುದಾಗಿ ಹೇಳಿದ್ದಾಳೆ.

2021ರ ನವೆಂಬರ್‌ 18 ರಂದು, ವೃದ್ಧ ಗಂಗಾಧರ್‌ ಸಿಂಗ್‌ ಅವರನ್ನು ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗಾಗಿ ಕರೆತರಲಾಗಿದೆ. ಇವರೊಂದಿಗೆ ಅದೇ ಗ್ರಾಮದ ದೇವ ಮುರ್ಮು, ಚಿತಾ ಹಂಸ್ದಾ, ಭಾನು ಸಿಂಗ್, ಮಂಜೋಲ್ ಸಿಂಗ್ ಮತ್ತು ಟೆಟೆ ಗಿರಿ ಸೇರಿದಂತೆ ಹಲವರಿಗೂ ಕೂಡ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಮತ್ತೊಂದು ಅಚ್ಚರಿಯ ವಿಚಾರವೆಂದರೆ, ಆಪರೇಷನ್ ಆದ ಎರಡನೇ ದಿನವೇ ಎಲ್ಲರನ್ನೂ ಮನೆಗೂ ಕೂಡ ಕಳುಹಿಸಲಾಗಿದೆ.

ಆಪರೇಶನ್ ಆದ ಕೆಲವು ದಿನಗಳ ಬಳಿಕ ಗಂಗಾಧರ್‌ ಅವರ ಕಣ್ಣುಗಳಲ್ಲಿ ತುರಿಕೆ ಶುರುವಾಗಿದ್ದು, ಹಾಗಾಗಿ ಗಂಗಾಧರ್ ಅವರನ್ನು ಮತ್ತೆ ಜೆಮ್‌ಶೆಡ್‌ಪುರ, ರಾಂಚಿ ಮತ್ತು ಕೋಲ್ಕತ್ತಾಗೆ ಚಿಕಿತ್ಸೆಯ ಸಲುವಾಗಿ ಕರೆದೊಯ್ದರೂ ಕೂಡ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಇದರ ಜೊತೆಗೆ ದಿನದಿಂದ ದಿನಕ್ಕೆ ಅವರ ಸಮಸ್ಯೆ ಉಲ್ಬಣ ವಾಗಿ ಕಣ್ಣುಗಳಲ್ಲಿ (Eye) ತುರಿಕೆ, ಉರಿ ಹೆಚ್ಚಾದ ಬಳಿಕ, ಕೈಗಳಿಂದ ಕಣ್ಣನ್ನು ಉಜ್ಜಿಕೊಳ್ಳಲು ಆರಂಭಿಸಿದ್ದಾರೆ. ಒಂದು ಹಂತದಲ್ಲಿ ಕಣ್ಣುಗಳನ್ನು ಉಜ್ಜಿಕೊಳ್ಳಲುವ ವೇಳೆ, ಕಣ್ಣಲ್ಲಿ ಇಟ್ಟಿದ್ದ ನಕಲಿ ಗಾಜಿನ ಗುಂಡು ಹೊರಬಿದ್ದಿದೆ.

ಇದನ್ನು ಕಂಡೊಡನೆ ಭಯಗೊಂಡ ಗಂಗಾಧರ್ ತಕ್ಷಣವೇ ಕಣ್ಣನ್ನು (Fake Eye) ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ತಲುಪಿದ್ದಾರೆ. ಅಲ್ಲಿ ಸೂಕ್ತ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ, ಅವರಿಗೆ ಹಾಕಿದ್ದ ಕಣ್ಣು ನಕಲಿ ಎಂಬುದು ಬಟ್ಟಾ ಬಯಲಾಗಿದೆ.

ಈ ಸತ್ಯ ಬಹಿರಂಗವಾಗುತ್ತಿದ್ದಂತೆ ಇಡೀ ಆಸ್ಪತ್ರೆ ಆಡಳಿತದಲ್ಲಿ ಸಂಚಲನ ಉಂಟಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಯಲ್ಲಿದ್ದವರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಆಪರೇಶನ್ ನಡೆಸಿದ ಮಹಿಳಾ ವೈದ್ಯೆಗಾಗಿ ಊರಿನ ಜನರು ಶೋಧ ಕಾರ್ಯ ಆರಂಭಿಸಿದ್ದು, ಆದಿವಾಸಿಯಾಗಿರುವ ಗಂಗಾಧರ್‌ ಸಿಂಗ್‌ ಈ ಕುರಿತಾಗಿ ಕೆಸಿಸಿ ಆಸ್ಪತ್ರೆಯ ಮ್ಯಾನೇಜ್‌ಮೆಂಟ್‌ ಹಾಗೂ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ವಿರುದ್ಧ ಪೊಲೀಸ್‌ ದೂರು ದಾಖಲಿಸಿದ್ದಾರೆ.

ಇದೊಂದು ಗಂಭೀರ ಅಪರಾಧವಾಗಿದ್ದು, ವಿಚಾರಣೆಯ ಬಳಿಕ ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ ಎಂದು ಆಸ್ಪತೆಯ ಅಧಿಕಾರಿಗಳು ತಿಳಿಸಿದ್ದಾರೆ. ವೈದ್ಯೆ ಅಸಲಿ ಕಣ್ಣನ್ನು ತೆಗೆದು ನಕಲಿ ಕಣ್ಣು ಹಾಕಿದ್ದು ಸ್ಪಷ್ಟವಾಗಿದ್ದು, ಇದಕ್ಕೆ ಕಾರಣವೇನು, ಇದರ ಹಿಂದಿನ ಉದ್ದೇಶವೇನು ಎನ್ನುವ ಕುರಿತಾದ ಸಮಗ್ರ ವಿಚಾರಣೆ ನಡೆಸಬೇಕಾಗಿದೆ.

ಈ ವೇಳೆ ಗಂಗಾಧರ್‌ ಸಿಂಗ್‌ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಂಗನವಾಡಿ ಕೆಲಸಗಾರ್ತಿ ಸೋಮಾವರಿ ಮಾಲಿ (Somvari Mali) ಎಂದು ಹೇಳಲಾಗಿದ್ದು, ಗಂಗಾಧರ್‌ ಸಿಂಗ್‌ ತುರಿಕೆ ಎಂದು ಹೇಳಿಕೊಂಡು ಆಸ್ಪತ್ರೆಗೆ ಬಂದ ವೇಳೆ 2 ತಿಂಗಳು ಅವರಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗಿದೆ.

ಈ ಸಮಯದಲ್ಲೂ ಇದು ಕಣ್ಣು ನಕಲಿ ಎಂಬ ಸತ್ಯ ತಿಳಿಯದೆ ಇರುವುದು ನಿಜಕ್ಕೂ ಅಚ್ಚರಿಗೆ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರ್ಖಂಡ್‌ ಆರೋಗ್ಯ ಸಚಿವ ಬನ್ನಾ ಗುಪ್ತಾ (Jarkhand Health Minister Banna Gupta) ಉನ್ನತ ಮಟ್ಟದ ತನಿಖೆಗೆ ಸೂಚಿಸಿದ್ದಾರೆ.

ಕಣ್ಣು ಮುಚ್ಚಿ ಯಾರನ್ನೇ ನಂಬುವ ಮೊದಲು ವಾಸ್ತವದಲ್ಲಿ ವಿಚಾರಗಳ ಬಗ್ಗೆ ಪರಾಮರ್ಶೆ ಮಾಡುವುದು ಅನಿವಾರ್ಯ.. ಇಲ್ಲದೇ ಹೋದರೆ ಇಂತಹ ಪ್ರಮಾದ ನಡೆಯುವುದರಲ್ಲಿ ಸಂದೇಹವಿಲ್ಲ.

Leave A Reply

Your email address will not be published.