ಇದೆಂಥ ಹೇಯ ಕೃತ್ಯ | ದೇವರ ವಿಗ್ರಹ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಕೊಲೆ!!!

ಈ ಕಾಲಕ್ಕೆ ದುರುಳತೆ ಇನ್ನೂ ಕಾಡುತ್ತಿದೆ ಎಂದು ಈ ಘಟನೆಯ ಮೂಲಕ ನಮಗೆ ಗೋಚರಿಸುತ್ತದೆ. ದಲಿತ ವ್ಯಕ್ತಿಯೊಬ್ಬರು ತಾನು ಆರಾಧಿಸುವ ದೇವರ ವಿಗ್ರಹವೊಂದನ್ನು ಮುಟ್ಟಿದ್ದಕ್ಕೆ , ಆ ವ್ಯಕ್ತಿಯನ್ನೇ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಪ್ರತಾಪ್ಗಢ್ ಜಿಲ್ಲೆಯ ಉಧಾ ಗ್ರಾಮದಲ್ಲಿ ದಲಿತ ವ್ಯಕ್ತಿಯೊಬ್ಬರು ದುರ್ಗಾ ಪೂಜೆಯ ಸಂದರ್ಭದಲ್ಲಿ ವಿಗ್ರಹವನ್ನು ಮುಟ್ಟಿದರೆಂದು ಆರೋಪಿಸಿ ಕೊಲೆ ಮಾಡಿದ್ದಾರೆ. ಕೊಲೆಯಾದ ವ್ಯಕ್ತಿಯ ಕುಟುಂಬ ಸದಸ್ಯರ ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.

ಸೆಪ್ಟೆಂಬರ್ 30 ರಂದು ಸಂಭವಿಸಿದ ಈ ದಾರುಣ ಘಟನೆಯನ್ನು ‘ಬೋಲ್ಟಾ ಹಿಂದೂಸ್ತಾನ್’ ಸುದ್ದಿ ಸಂಸ್ಥೆಯು ಅಕ್ಟೋಬರ್ 4ರಂದು ಮೊದಲು ಟ್ವೀಟ್ ಮಾಡಿದೆ. ನಂತರ ಅದನ್ನು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಸೇರಿದಂತೆ ಹಲವರು ರೀಟ್ವೀಟ್ ಮಾಡಿದ್ದಾರೆ.

ಜಗ್ರೂಪ್ ಎಂಬ ದಲಿತ ವ್ಯಕ್ತಿ ವಿಗ್ರಹದ ಪಾದಗಳನ್ನು ಮುಟ್ಟಿದ ತಕ್ಷಣ ಜೀವ ಹೋಗುವಂತೆ ದಾಳಿ ನಡೆಯಿತು. ಜಗ್ರೂಪ್ ಅವರನ್ನು ದಾಳಿಕೋರರು ಮನೆಗೆ ಕರೆತಂದಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ‘ದಿ ವೈರ್’ ವರದಿ ಮಾಡಿದೆ.

ಈ ಘಟನೆಗೆ ಕಾರಣವಾದ ಮೂವರು ಆರೋಪಿಗಳಾದ ಸಂದೀಪ್ ಮಿಶ್ರಾ, ಕುಲದೀಪ್ ಮಿಶ್ರಾ ಮತ್ತು ಮುನ್ನಾ ಲಾಲ್ ತಲೆಮರೆಸಿಕೊಂಡಿದ್ದಾರೆ ಎಂದು ಸ್ಥಳೀಯ ಎಎಸ್ಪಿ ಹೇಳಿದ್ದಾರೆ.

ಹಲವು ಸುದ್ದಿ ತಾಣದ ವಿಡಿಯೋಗಳು ಇದು ಜಾತಿ ಕಾರಣದಿಂದ ನಡೆದ ಕೊಲೆ ಎಂದು ಬಿಂಬಿಸಿದರೆ ಪೊಲೀಸರು ಮಾತ್ರ ಜಾತಿ ಕಾರಣಕ್ಕಾಗಿ ಕೊಲೆಯಾಗಿದೆ ಎಂಬುದನ್ನು ತಳ್ಳಿಹಾಕಿದ್ದಾರೆ. ಈ ಕುರಿತು ಸಂಪೂರ್ಣ ತನಿಖೆಯನ್ನು ನಡೆಸಲಾಗುವುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ಧಾರೆ.

Leave A Reply

Your email address will not be published.