ಮುಸ್ಲಿಂ ಪಿಎಸೈನಿಂದ ಪೊಲೀಸ್ ಠಾಣೆಯಲ್ಲಿ ಪೂಜೆ | ಮದುಮಗಳಂತೆ ಕಂಗೊಳಿಸಿದ ಪೊಲೀಸ್ ಠಾಣೆ

ಹಿಂದೂ..ಮುಸಲ್ಮಾನ..ಕ್ರೈಸ್ತ ..ಎಂಬ ಜಾತಿ ..ಎಂಬ ಕಟ್ಟುಪಾಡಿನ ನಡುವೆ ನಾವೆಲ್ಲರೂ ಒಂದೆ.. ಒಂದೇ ತಾಯಿಯ ಮಕ್ಕಳು ಎಂಬ ಸಂದೇಶವನ್ನು ಸಾರುವ ಘಟನೆಯೊಂದು ಮುದ್ದೇಬಿಹಾಳ ಪೋಲಿಸ್ ಠಾಣೆಯಲ್ಲಿ ನಡೆದಿದೆ.

ಇತ್ತೀಚಿನ ದಿನಗಳಲ್ಲಿ ಜಾತಿ ಎಂಬ ವಿಷಯವನ್ನೇ ಕೇಂದ್ರವಾಗಿಸಿ ಕೊಲೆ, ಗಲಾಟೆ ವೈಷಮ್ಯಗಳೇ ಪಾರುಪತ್ಯ ಕಾಯ್ದುಕೊಳ್ಳುವ ಘಟನೆಗಳೇ ಹೆಚ್ಚು ವರದಿಯಾಗುತ್ತಿವೆ. ಇದರ ನಡುವೆಯೂ ಇದಕ್ಕೆ ತದ್ವಿರದ್ಧವಾದ ಘಟನೆಯೊಂದು ನಡೆದಿದೆ.
ಮುದ್ದೇಬಿಹಾಳದ ಪೊಲೀಸ್ ಠಾಣೆಯ ನೂತನ ಪಿಎಸೈ ಆರೀಫ ಮುಷಾಪುರಿ ಅವರು ವಿಜಯದಶಮಿಯ ಆಯುಧ ಪೂಜೆಯ ಹಿನ್ನೆಲೆಯಲ್ಲಿ ತಾವೇ ಸ್ವತಃ ಶ್ವೇತ ವಸ್ತ್ರಧಾರಿಯಾಗಿ, ಹಣೆಗೆ ಕುಂಕುಮ ತಿಲಕ ಇಟ್ಟುಕೊಂಡು, ಕುಂಬಳಕಾಯಿ ಒಡೆದು, ನಾಡದೇವಿಗೆ ಮಂಗಳಾರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿಶೇಷತೆ ಮೆರೆದಿರುವುದಲ್ಲದೆ, ಏಕತೆಯ ಸಂದೇಶ ರವಾನಿಸಿದ್ದಾರೆ.
ಇಷ್ಟೇ ಅಲ್ಲದೆ, ಠಾಣೆಯ ಬಂದೂಕುಗಳು, ವೈರಲೆಸ್ ಯಂತ್ರಗಳು, ಸಿಸಿ ಕ್ಯಾಮರಾ ಸಲಕರಣೆ, ಪೊಲೀಸ್ ವಾಹನಗಳು ಮುಂತಾದವುಗಳನ್ನು ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಿದ್ದು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ದೇವಸ್ಥಾನದಂತೆ ಬಿಂಬಿಸುವ ರೀತಿಯಲ್ಲಿ ಠಾಣೆಯ ಮುಂದೆ ಸುಂದರವಾದ ರಂಗೋಲಿ ಬಿಡಿಸಿ, ಬಲೂನುಗಳಿಂದ ಅಲಂಕರಿಸಿ ತಳಿರು ತೋರಣ ಕಟ್ಟಿದ್ದು ನೋಡುಗರಿಗೆ ಪೂಜ್ಯನೀಯ, ಗೌರವದ ಭಾವನೆ ತರಿಸಿರುವುದರಲ್ಲಿ ಸಂಶಯವಿಲ್ಲ.

ಮುಸ್ಲಿಂ ಪಿಎಸೈ ಅವರೊಬ್ಬರ ಈ ವಿಶೇಷ ಕಾಳಜಿ, ನೋಡುಗರಿಗೆ ಹೆಮ್ಮೆಯ ಜೊತೆಗೆ ಒಳ್ಳೆಯ ಸಂದೇಶ ರವಾನಿಸಿದ್ದು ಶ್ಲಾಘನೀಯ ಸಂಗತಿ. ಈ ಆಚರಣೆ ಸಾಕಷ್ಟು ಜನರ ಗಮನ ಸೆಳೆದಿದೆ.
ಪಿಎಸೈ ಅವರ ನಡೆಗೆ ಸಿಬ್ಬಂದಿ ವರ್ಗ ಕೂಡ ಸಾಥ್ ನೀಡಿ, ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಮವಸ್ತ್ರದಲ್ಲಿ, ಕರ್ತವ್ಯದಲ್ಲಿರದ ಸಿಬ್ಬಂದಿ ಶ್ವೇತವಸ್ತ್ರದಲ್ಲಿ, ಮಹಿಳಾ ಪೊಲೀಸ್, ಪುರುಷ ಪೊಲೀಸರ ಪತ್ನಿಯರು ಇಲಕಲ್ಲ ಸೀರೆ ತೊಟ್ಟು ಪಾಲ್ಗೊಂಡಿದ್ದು ವಿಶೇಷವಾಗಿತ್ತು . ಪೂಜೆಗೆ ಯಾವುದೇ ಲೋಪವಾಗದಂತೆ ಸಿಪಿಐ ಆನಂದ ವಾಘ್ಮೋಡೆ, ಎಸೈಗಳು ಎಲ್ಲ ರೀತಿಯ ಸಹಕಾರ ನೀಡಿ ಆಯುಧ ಪೂಜೆ ಸಂಪ್ರದಾಯಕ್ಕನುಗುಣವಾಗಿ ನಡೆಯುವಂತೆ ನೋಡಿಕೊಂಡಿದ್ದಾರೆ.

Leave A Reply

Your email address will not be published.