ತಜಂಕ್ ಎಂಬ ಸಾಮಾನ್ಯ ಸೊಪ್ಪಿನ ಅಸಾಮಾನ್ಯ ಗುಣ !!!

ಇದು ಹೆಚ್ಚಾಗಿ ಮಳೆಗಾಲದಲ್ಲಿ ಆಗುವ ಗಿಡವಾಗಿದ್ದು, ಔಷಧಿಯ ಗುಣಗಳನ್ನು ಹೊಂದಿದ್ದು ಆಯುರ್ವೇದದಲ್ಲಿ ಹೆಚ್ಚು ಬಳಕೆಯಲ್ಲಿದೆ. ತಜಂಕ್ (ತಗತೆ/ತಗಚೆ/ತಗಟೆ) ಗಿಡದ ಚಿಗುರು ಪ್ರಯೋಜನಕಾರಿಯಾಗಿದೆ. ಮಳೆಗಾಲದ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಬೆಳೆಯುವ ಈ ಗಿಡವು ಸರ್ವೆ ಸಾಮಾನ್ಯವಾಗಿ ಕಾಣಸಿಗುತ್ತದೆ. ಕಳೆಗಿಡವೆಂದು ಹೆಚ್ಚಿನವರು ಅಂದುಕೊಂಡರೂ ಕೂಡ, ಇದರ ಮಹಿಮೆಯ ಜೊತೆಗೆ ರುಚಿಯನ್ನು ಕಂಡವರು ಬಿಡಲು ಸಾಧ್ಯವೇ ಇಲ್ಲ.

ಬಾಯಲ್ಲಿ ನೀರು ಬರುವಂತೆ ಮಾಡುವ ತಜಂಕ್ ಆರ್ಯುವೇದದಲ್ಲಿಯು ವಿಶಿಷ್ಟ ಸ್ಥಾನವನ್ನು ಪಡೆದಿದೆ. ತಜಂಕ್ ನ ಒಣಬೀಜವನ್ನು ತೆಗೆದುಕೊಂಡು ಪುಡಿಮಾಡಿ ಅದರಿಂದ ಕಾಫಿಯನ್ನು ಮಾಡುತ್ತಾರೆ. ಇದು ದೇಹಕ್ಕೆ ತಂಪು ನೀಡುತ್ತದೆ. ಗಾಯಕ್ಕೆ ಇದರ ರಸವನ್ನು ಹಚ್ಚಿದರೆ ಉರಿ ಕಡಿಮೆಯಾಗುತ್ತದೆ. ರಕ್ತವನ್ನು ಶುಧ್ಧೀಕರಿಸುವ ಗುಣವನ್ನು ಹೊಂದಿರುವ ತಜಂಕ್ ಕಿಬ್ಬೊಟ್ಟೆ ನೋವು, ಉರಿಯೂತ, ಮಲಬಧ್ಧತೆ, ಬೊಜ್ಜು ಕರಗಿಸುವಲ್ಲಿಯು ಪರಿಣಾಮಕಾರಿಯಾಗಿದೆ.

ತಗತೆ ಸೊಪ್ಪನ್ನು ಚರ್ಮದ ರೋಗಗಳಾದ ಉಗುರು ಸುತ್ತು, ತುರಿಕೆ, ಗಾಯ ಈ ಜಾಗಗಳಿಗೆ ಸೊಪ್ಪನ್ನು ಅರೆದು ಹಚ್ಚಿದರೆ ಒಳ್ಳೆಯದು. ಅಲ್ಲದೆ ಆಹಾರದಲ್ಲಿ ಬಳಸಿದರೆ ಇನ್ನೂ ಒಳ್ಳೆಯದು. ಆಯುರ್ವೇದದ ಪ್ರಕಾರ ತಗತೆ ಸೊಪ್ಪು ದೇಹದಲ್ಲಿನ ವಾತ ಮತ್ತು ಕಫ ದೋಷ ವನ್ನು ತೆಗೆದುಹಾಕುತ್ತದೆ.ತಗತೆ ಸೊಪ್ಪನ್ನು ನೀರಲ್ಲಿ ಕುದಿಸಿ ಕುಡಿಸಿದರೆ ಬಂದ ಜ್ವರ ವಾಸಿಯಾಗುತ್ತದೆ. ಅಲ್ಲದೆ ಎಲೆಯ ರಸವನ್ನು ಕೆಮ್ಮು ಇದ್ದಾಗ ಕುಡಿದರೆ ಕೂಡಲೇ ಕೆಮ್ಮು ಕಡಿಮೆಯಾಗುತ್ತದೆ.

ಬ್ಯಾಕ್ಟೀರಿಯಾದಿಂದ ಚರ್ಮದಲ್ಲಾದ ಸೋಂಕಿಗೆ ತಗತೆ ಎಲೆಯನ್ನು ಅರೆದು ಹಚ್ಚಿದರೆ ಉತ್ತಮ ಪರಿಣಾಮ ನೀಡುತ್ತದೆ. ತಗತೆ ಸೊಪ್ಪಿನ ಬಳಕೆಯಿಂದ ಮೂಲವ್ಯಾದಿಯು ಕಡಿಮೆಯಾಗುತ್ತದೆ. ಅಜೀರ್ಣವಾಗಿದ್ದರೆ ಅಥವಾ ಹಸಿವಾಗದಿದ್ದರೆ ತಗತೆ ಸೊಪ್ಪಿನ ಬಳಕೆಯಿಂದ ಉತ್ತಮ ಪರಿಣಾಮ ಬೀರುತ್ತದೆ. ಋತುಚಕ್ರದಲ್ಲಿ ಸಮಸ್ಯೆಗಳಾಗಿದ್ದಲ್ಲಿ ತಗತೆ ಗಿಡವನ್ನು ನೀರಲ್ಲಿ ಕುದಿಸಿ ಶೋಧಿಸಿ ಕುಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಇನ್ನು ತಜಂಕ್ ಅನ್ನು ವಿವಿಧ ರೀತಿಯ ಖಾದ್ಯಗಳಲ್ಲಿ ತಜಂಕ್ ಪತ್ರೋಡೆ, ತಜಂಕ್ ನೀರ್‌ದೋಸೆ, ತಜಂಕ್ ವಡೆ, ತಜಂಕ್ ಸುಕ್ಕ, ಸಾರು ಹೀಗೆ ವಿಭಿನ್ನ ರೀತಿಯಲ್ಲಿ ತಜಂಕ್ ಅನ್ನು ಆಹಾರ ಕ್ರಮದಲ್ಲಿ ಬಳಸಲಾಗುತ್ತದೆ. ರುಚಿಕರ ಆಹಾರದ ಜೊತೆಗೆ ಆರೋಗ್ಯ ರಕ್ಷಣೆ ಮಾಡುವ ತಗತೆ ಸೊಪ್ಪಿನ ಬಳಕೆ ಮಾಡುವುದು ಒಳ್ಳೆಯದು.

Leave A Reply

Your email address will not be published.