ದಕ ಜಿಲ್ಲೆಯಲ್ಲೂ ಕಂಡುಬಂದ ಜಾನುವಾರುಗಳ ಚರ್ಮಗಂಟು ರೋಗ-ಹೈನುಗಾರರಲ್ಲಿ ಆತಂಕ!! ಪಶು ಸಂಗೋಪನ ಇಲಾಖೆ ನೀಡಿದೆ ಸಲಹೆ!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಹಿತ ರಾಜ್ಯದ ಕೆಲವೆಡೆಗಳಲ್ಲಿ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ (ಲಿಂಪ್ ಸ್ಕಿನ್ ಡಿಸೀಸ್)ಕಂಡುಬಂದಿದ್ದು, ಹೈನುಗಾರರು ಎಚ್ಚರ ವಹಿಸುವಂತೆ ಪಶುಸಂಗೋಪನ ಇಲಾಖೆ ಸೂಚಿಸಿದ್ದು, ರೋಗದ ಲಕ್ಷಣಗಳು ಯಾವ ರೀತಿಯಲ್ಲಿದೆ ಹಾಗೂ ಹೇಗೆ ರಕ್ಷಣೆ ಎನ್ನುವುದನ್ನು ತಿಳಿಸಿದೆ.

ಈ ರೋಗದ ಲಕ್ಷಣ ಹೇಗಿದೆ!?

ಚರ್ಮಗಂಟು ರೋಗವು ಸಾಮಾನ್ಯವಾದ ವೈರಸ್ ಆಗಿದ್ದು, ಇವು ದನ ಕರುಗಳಿಗೆ ಕಚ್ಚುವ ಕೀಟ-ಸೊಳ್ಳೆಗಳಿಂದ ಹರಡುತ್ತವೆ. ಬಯಲಿನಲ್ಲಿ ಮೇಯಲು ಬಿಡುವ ಜಾನುವಾರುಗಳ ಸಹಿತ ಕೊಟ್ಟಿಗೆಯಲ್ಲಿ ಸಾಕುವ ದನಕರುಗಳಿಗೂ ಈ ರೋಗ ಹರಡುತ್ತಿದ್ದು, ಕಾಲಗಳ ಮಿತಿ ಇಲ್ಲದೇ ಮಳೆಗಾಲ, ಚಳಿಗಾಲ ಬೇಸಿಗೆಯಲ್ಲೂ ಈ ಖಾಯಿಲೆ ಹರಡುತ್ತದೆ.

ಹೆಚ್ಚಾಗಿ ಈ ಚರ್ಮಗಂಟು ರೋಗದ ವೈರಸ್ ಸಾಧಾರಣ 55% ಬಿಸಿಯಲ್ಲೂ ಸುಮಾರು 4-5 ಗಂಟೆಗಳ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದ್ದೂ, ಕೆಲವೊಂದು ವ್ಯಾಕ್ಸಿನ್ ಗಳನ್ನು ಲೆಕ್ಕಿಸದೆ ಜಾನುವಾರುಗಳ ಮೇಲೆ ಪ್ರಭಾವ ಬೀರುವುದರಿಂದ ಜಾನುವಾರುಗಳ ಸಾವಿಗೂ ಕಾರಣವಾಗುತ್ತದೆ. ಈ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವೊಂದು ಪ್ರಕರಣಗಳು ಬೆಳಕಿಗೆ ಬಂದಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎನ್ನುತ್ತಾರೆ ಕೊಯಿಲ ಪಶುಸಂಗೋಪನ ಇಲಾಖೆಯ ಪಶು ವೈದ್ಯಾಧಿಕಾರಿ ಡಾ. ಧರ್ಮಪಾಲ್.

ರೋಗ ಹರಡುವುದನ್ನು ತಡೆಗಟ್ಟುವುದು ಹೇಗೆ!?

ಚರ್ಮಗಂಟು ರೋಗಕ್ಕೆ ವಿದೇಶಗಳಲ್ಲಿ ಈಗಾಗಲೇ ಮದ್ದು, ಲಸಿಕೆಗಳನ್ನು ಕಂಡುಹಿಡಿಯಲಾಗಿದ್ದು, ಭಾರತದಲ್ಲಿ ನಿರ್ದಿಷ್ಟವಾದ ಲಸಿಕೆ ಈ ವರೆಗೆ ಬಂದಿಲ್ಲ ಎನ್ನಲಾಗಿದೆ. ಅಲ್ಲದೇ ಕುರಿ-ಮೇಕೆಗಳಿಗೆ ನೀಡುವ ಲಸಿಕೆಗಳನ್ನು ಈ ರೋಗಕ್ಕೂ ಕೊಡಲಾಗುತ್ತಿದ್ದೂ ಹೆಚ್ಚಿನವು ಚಿಕಿತ್ಸೆಗೆ ಸ್ಪಂದಿಸುತ್ತಿವೆ.

ಹೈನುಗಾರರು ತಮ್ಮ ಕೊಟ್ಟಿಗೆಯ ಸುತ್ತ ಸೊಳ್ಳೆ ಅಥವಾ ಕೀಟಗಳ ನಾಶಕ್ಕೆ ಕ್ರಮ ಕೈಗೊಳ್ಳುವ ಅವಶ್ಯಕತೆ ಇದ್ದು,ದನ ಕರುಗಳಲ್ಲಿ ರೋಗದ ಲಕ್ಷಣ ಕಂಡು ಬಂದ ಕೂಡಲೇ ವಲಯದ ಪಶು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಉಪಚಾರ ನಡೆಸಬೇಕು. ರೋಗದ ಲಕ್ಷಣ ಇರುವಂತಹ ಜಾನುವಾರುಗಳನ್ನು ವಿಂಗಡಿಸಿ ಪ್ರತ್ಯೇಕವಾಗಿಸಬೇಕು. ಈ ವೈರಸ್ ನಿಮಿಷಗಳಲ್ಲಿ ಅರೋಗ್ಯವಂತ ಜಾನುವಾರುಗಳ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವೈದ್ಯರು ಸಲಹೆ, ಎಚ್ಚರಿಕೆ ನೀಡಿದ್ದಾರೆ.

✒️ದೀಪಕ್ ಹೊಸ್ಮಠ

Leave A Reply

Your email address will not be published.