ಸುಳ್ಯದಲ್ಲಿ ದಲಿತರ ಕಡೆಗಣನೆ-ಏಳು ವರ್ಷ ಕಳೆದರೂ ಪೂರ್ಣಗೊಳ್ಳದ ಅಂಬೇಡ್ಕರ್ ಭವನ!! ಮನವಿಗಿಲ್ಲ ಸ್ಪಂದನೆ-ಪ್ರತಿಭಟನೆಯ ಎಚ್ಚರಿಕೆ!!

ಸುಳ್ಯ: ಕಳೆದ ಏಳು ವರ್ಷಗಳ ಹಿಂದೆ ತಾಲೂಕಿಗೆ ಮಂಜೂರಾಗಿದ್ದ ಅಂಬೇಡ್ಕರ್ ಭವನ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳು ಕಿಡಿ ಕಾರಿದ್ದು, ಶೀಘ್ರ ಕಾಮಗಾರಿ ನಡೆಸದಿದ್ದಲ್ಲಿ ಪ್ರತಿಭಟನೆಯ ಬಿಸಿ ಎದುರಿಸಬೇಕಾಗುತ್ತದೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪಿ. ಸುಂದರ ಪಾಟಾಜೆ ಹೇಳಿದರು.

ಅವರು ಸುಳ್ಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಈ ವಿಚಾರ ತಿಳಿಸಿದ್ದು, ಸುಳ್ಯದ ಅಂಬೇಡ್ಕರ್ ಭವನದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದೂ,ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ-ಎಸ್.ಸಿ, ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಪ್ರಸ್ತಾಪಿಸಿದ್ದರೂ ಈ ಬಗ್ಗೆ ಯಾರೂ ಕ್ರಮ ಕೈಗೊಂಡಿಲ್ಲ, ಸಭೆಯಲ್ಲಿ ಸುಳ್ಳು ಭರವಸೆ ನೀಡುವ ಅಧಿಕಾರಿ ವರ್ಗ ಆ ಬಳಿಕ ನಿದ್ದೆಗೆ ಜಾರಿದಂತಿದೆ ಎಂದರು.

ಕಳೆದ ಏಳು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಯ ಬಗ್ಗೆ ಜನಪ್ರತಿನಿಧಿಗಳು ಮಾತು ಎತ್ತಿಲ್ಲ. ಸುಮಾರು 30 ವರ್ಷಗಳಿಂದ ಶಾಸಕರಾಗಿರುವ ಮಾನ್ಯ ಎಸ್.ಅಂಗಾರ ಅವರು ಈ ಬಗ್ಗೆ ಗಮನಹರಿಸದೇ ಇರುವುದು ಬೇಸರದ ಸಂಗತಿಯಾಗಿದೆ ಎಂದರು.

ಅಲ್ಲದೇ ಸುಳ್ಯದಲ್ಲಿ ಇತರ ಕಟ್ಟಡ ಕಾಮಗಾರಿಗಳು ಬಿರುಸಿನಿಂದ ನಡೆದು ಒಂದು-ಒಂದೂವರೆ ವರ್ಷದಲ್ಲಿ ಪೂರ್ಣಗೊಂಡಿದ್ದರೂ ಅಂಬೇಡ್ಕರ್ ಭವನ ಇನ್ನೂ ಪೂರ್ಣಗೊಂಡಿರದ ಬಗ್ಗೆ ಹಲವು ಅನುಮಾನಗಳು ಮೂಡಿದ್ದು, ದಲಿತರನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ಹೇಳಿದರು. ತಾಲೂಕಿನ ಕೊಡಿಯಾಲ ಬೈಲು ದಲಿತ ಕಾಲೋನಿಗೆ ಮಂಜೂರಾದ ಇನ್ನಿತರ ಸೌಲಭ್ಯಗಳನ್ನು ಶೀಘ್ರ ಕಾರ್ಯರೂಪಕ್ಕೆ ತರಲು ಮಾಧ್ಯಮದ ಮೂಲಕ ಸಚಿವರನ್ನು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಇತರ ಮುಖಂಡರು,ಸದಸ್ಯರು ಉಪಸ್ಥಿತರಿದ್ದರು.

Leave A Reply

Your email address will not be published.