ಪೆರುವಾಜೆ : ನವರಾತ್ರಿ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ | ಭಾರತವು ಧರ್ಮ, ಕರ್ಮ, ಪುಣ್ಯ ಭೂಮಿ‌ : ಸಚಿವ ಎಸ್.ಅಂಗಾರ

ಪೆರುವಾಜೆ : ಭಾರತವು ಧರ್ಮ, ಕರ್ಮ, ಪುಣ್ಯ ಭೂಮಿ. ಈ ಮೂರು ಅಂಶಗಳು ಮೂರು ಯುಗದಲ್ಲಿಯು ಹಲವು ವಿಧಗಳಲ್ಲಿ ಪ್ರಕಟವಾಗಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ನವರಾತ್ರಿ ಉತ್ಸವದ ಪ್ರಯುಕ್ತ ಸೆ.25 ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಧರ್ಮದ ಹಾದಿಯಲ್ಲಿ ಸಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಭಕ್ತಿ ಮಾರ್ಗ ಶ್ರೇಷ್ಟ ಮಾರ್ಗ ಎಂದ ಅವರು ಅಂತಹ ಮನಸ್ಥಿತಿಗೆ ಆಲಯಗಳು ಪ್ರೇರಕ ಶಕ್ತಿ ಎಂದರು.

ದೀಪ ಪ್ರಜ್ವಲನೆಗೈದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಮಾತನಾಡಿ, ಧರ್ಮವನ್ನು ರಕ್ಷಣೆ ಮಾಡಿದವರನ್ನು ಧರ್ಮ ರಕ್ಷಣೆ ಮಾಡುತ್ತದೆ. ಹಾಗಾಗಿ ಧರ್ಮ ಕಾರ್ಯ ನಿರಂತರವಾಗಿ ನಡೆದು ಧರ್ಮ ಮಾರ್ಗ ಜೀವನದ ಕೊಂಡಿಯಾಗಬೇಕು ಎಂದರು.

ಕ್ರೋಧ, ಮತ್ಸರ ಮೊದಲಾದವುಗಳನ್ನು ತೊಡೆದು ಸಾಧನಾ ಶೀಲತೆಯನ್ನು ರೂಢಿಸಿಕೊಳ್ಳಬೇಕು. ಅದು ಧರ್ಮ ಕ್ಷೇತ್ರದಲ್ಲಿ ಸಾಧ್ಯವಾಗುತ್ತದೆ.ಹೆತ್ತ ತಾಯಿಗಿಂತ ದೇವರು, ದೇಶಕ್ಕಿಂತ ಮಿಗಿಲಾದದು ಬೇರೊಂದಿಲ್ಲ ಎಂದ ಅವರು ಪೆರುವಾಜೆ ಕ್ಷೇತ್ರದ ಸ್ವಚ್ಚತೆಯ ಬಗ್ಗೆ ಶ್ಲಾಘಿಸಿದರು.

ಸಭಾ ಅಧ್ಯಕ್ಷತೆ ವಹಿಸಿದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಮಾತನಾಡಿ, ಪ್ರತಿ ಮನೆಯಲ್ಲಿಯು ಭಜನೆ ಮಾಡಬೇಕು. ತನ್ಮೂಲಕ ಸಂಘಟಿತ ಸಮಾಜದ ನಿರ್ಮಾಣ ಮನೆಯಿಂದ ಆರಂಭವಾಗಬೇಕು‌ ಎಂದ ಅವರು ಕ್ಷೇತ್ರದ ಸರ್ವತೋಮುಖ ಬೆಳವಣಿಗೆಗೆ ಭಕ್ತರ ಸಹಕಾರ ಅತಿ ಮುಖ್ಯವಾದುದು ಎಂದರು.

ವೇದಿಕೆಯಲ್ಲಿ ಪೆರುವಾಜೆ ಶ್ರೀ ಕ್ಷೇತ್ರದ ಪವಿತ್ರಪಾಣಿ ಸುಬ್ರಹ್ಮಣ್ಯ, ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಿರಾಜ್‌ ಪಾಂಬಾರ್, ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ, ಬೆಳ್ಳಾರೆ ಗೌರಿಪುರಂ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪೆರುವಾಜೆ ಕುಣಿತ ಭಜನ ತಂಡದ ತರಬೇತುದಾರ ಕಾಣಿಯೂರು ಸದಾನಂದ ಆಚಾರ್ಯ ಅವರನ್ನು ಗೌರವಿಸಲಾಯಿತು.

ಅಂಕಿತಾ ಹಾಗೂ ಅಭಿಜ್ಞಾ ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ಕೊಂಡೆಪ್ಪಾಡಿ ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿ‌ವಸದಸ್ಯ ಜಯಪ್ರಕಾಶ್ ರೈ ಪೆರುವಾಜೆ ವಂದಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ನಿರೂಪಿಸಿದರು.

ಭಜನೆ,‌ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆ ಶ್ರೀ ಜಲದುರ್ಗಾದೇವಿ ಕುಣಿತ ಭಜನ ಮಂಡಳಿ ಪೆರುವಾಜೆ ವತಿಯಿಂದ ಕುಣಿತ ಭಜನೆ, ವೈಷ್ಣವೀ ನಾಟ್ಯಾಲಯ(ರಿ) ಪುತ್ತೂರು ಇದರ ಬೆಳ್ಳಾರೆ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಾರ್ಪಣಂ ಪ್ರದರ್ಶನಗೊಂಡಿತು.

Leave A Reply

Your email address will not be published.