ದೇವಸ್ಥಾನಗಳಲ್ಲಿ ‘ ಅಂಗಿ ಬನಿಯನ್ ‘ ತೆಗೆಯಲು ಕೊಕ್ಕೆ | ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ ಪರಿಸರ ಸಂರಕ್ಷಣಾ ಒಕ್ಕೂಟ !

ದೇವರ ದರ್ಶನಕ್ಕಾಗಿ ಬರುವಾಗ, ದೇವಸ್ಥಾನದ ಒಳಗೆ ಪ್ರವೇಶಿಸುವಾಗ ಅಂಗಿ ಬನಿಯನ್ ತೆಗೆದು ಹೋಗುವುದು ವಾಡಿಕೆ. ಅದು ಸ್ಥಳದ ಬೇಡಿಕೆ ಕೂಡಾ. ಈಗ,’ ಅಂಗಿ ಬನಿಯನ್ ತೆಗೆದು ಪ್ರವೇಶಿಸುವುದು ಮೂಲಭೂತ ಹಕ್ಕಿನ ಉಲ್ಲಂಘನೆ ‘ ಎಂದು ದೂರು ಸಲ್ಲಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲ್ಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಮತ್ತೆ ಸುದ್ದಿಯಲ್ಲಿದೆ.

ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮುಂತಾದ ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಆಗಮಿಸುವ ಪುರುಷ ಭಕ್ತರು ಅಂಗಿ-ಬನಿಯನ್ ತೆಗೆದು ಬರಬೇಕು ಎಂಬ ಸದ್ಯ ಇರುವ ನಿಯಮವನ್ನು ಬದಲಿಸಲು ಮಂಗಳೂರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು ಮನವಿ ಮಾಡಿದೆ. ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಜೊತೆಗೆ ಉಡುಪಿ ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲೂ ಈ ನಿಯಮ ಬದಲಿಸುವಂತೆ ಒಕ್ಕೂಟ ಮನವಿ ಮಾಡಿದೆ.

ಎಲ್ಲೂ ನಮ್ಮ ಹಿಂದೂ ಸಂಪ್ರದಾಯಗಳಲ್ಲಿ ದೇವಸ್ಥಾನಗಳಲ್ಲಿ ಅಂಗಿ-ಬನಿಯನ್ ತೆಗೆದು ದರ್ಶನ ಪಡೆಯುವ ಪದ್ಧತಿ ಇಲ್ಲ ಎಂದು ಮನವಿಯಲ್ಲಿ ಹೇಳಿದ್ದು, ಸದ್ಯ ಈಗ ಜಾರಿಯಲ್ಲಿರುವ ಅಂಗಿ ಬನಿಯನ್ ತೆಗೆದು ದೇವಸ್ಥಾನ ಪ್ರವೇಶಿಸಬೇಕು ಎಂಬ ನಿಯಮ ಬದಲಿಸುವಂತೆ ಮಂಗಳೂರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಮನವಿ ಮಾಡಿದೆ.

ಅಲ್ಲದೆ, ಈ ರೀತಿ ಅಂಗಿ-ಬನಿಯನ್ ಕಳಚಿ ದರ್ಶನ ಪಡೆಯಲು ಸಾಲಿನಲ್ಲಿ ನಿಂತರೆ ಚರ್ಮ ರೋಗ ಇರುವವರಿಂದ ಆ ರೋಗ ಇತರರಿಗೂ ಹರಡುವ ಸಾಧ್ಯತೆ ಇದೆ ಎಂದು ಒಕ್ಕೂಟವು ತನ್ನ ಆಕ್ಷೇಪ ವ್ಯಕ್ತಪಡಿಸಿದೆ. ಇದರಿಂದ ವಿಶೇಷ ಚೇತನರಿಗೂ ಈ ನಿಯಮ ಸಮಸ್ಯೆ ಉಂಟುಮಾಡುತ್ತಿದೆ. ಆದ್ದರಿಂದ ಮೂಲಭೂತ ಹಕ್ಕಿನ ಉಲ್ಲಂಘನೆ ಆಗುತ್ತಿದೆ ಎಂದು ಒಕ್ಕೂಟ ಮಾಡಿದ ಮನವಿಯಲ್ಲಿ ಆರೋಪಿಸಿ, ಅಂಗಿ ಬನಿಯನ್ ತೆಗೆದು ಹೋಗುವುದನ್ನು ನಿಷೇಧಿಸಬೇಕೆಂದು ಅದು ಕೋರಿದೆ.

Leave A Reply

Your email address will not be published.