ಹಿಜಾಬ್ ಹೋರಾಟಗಾರರ ವಿರುದ್ಧ ಪೊಲೀಸರ ಫೈರಿಂಗ್, ಮುಸ್ಲಿಂ ಸ್ತ್ರೀಯರು ಸೇರಿ ಒಟ್ಟು 8 ಬಲಿ

ತೆಹ್ರಾನ್: ಹಿಜಾಬ್ ವಿರೋಧಿ ಚಳವಳಿ ತಾರಕಕ್ಕೆ ಏರುತ್ತಿದೆ. ಕಟ್ಟರ್‌ವಾದಿ ಮುಸ್ಲಿಮ್ ದೇಶ ಇರಾನ್‍ನಲ್ಲಿ ಇದೀಗ ಕ್ರಾಂತಿಯೊಂದು ನಡೆಯುತ್ತಿದೆ. ಮಹ್ಸಾ ಅಮಿನಿ ಲಾಕಪ್ ಡೆತ್ ನಂತರ ಹಿಜಬ್ ವಿರುದ್ಧ ಸಿಡಿದಿರುವ ಮಹಿಳೆಯರು ಅಲ್ಲಿನ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದ್ದು, ಈವರೆಗೆ ಹಿಜಾಬ್ ಹೋರಾಟಗಾರನ್ನು ಗುಂಡು ಹಾರಿಸಿ ಒಟ್ಟು 8 ಜನರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ.

ಇರಾನ್‍ನ ಬಹುತೇಕ ನಗರ, ಪಟ್ಟಣಗಳಲ್ಲಿ ಮಹಿಳೆಯರ ಪ್ರತಿಭಟನೆಗಳು ಮುಂದುವರಿದಿವೆ. ಸತತ ಆರನೇ ದಿನ ಇಲ್ಲಿ ಪ್ರತಿಭಟನೆ ನಡೆಯುತ್ತಿರುವುದು. ಸಾವಿರಾರು ಮಂದಿ ಮಹಿಳೆಯರು ಹಗಲು ರಾತ್ರಿ ಎನ್ನದೇ ಕೆರ್ಮಾನ್‍ನ ಆಜಾದಿ ವೃತ್ತದಲ್ಲಿ, ಸರ್ವಾಧಿಕಾರ ನಶಿಸಲಿ. ಹಿಜಬ್ ಕಟ್ಟುಪಾಡು ನಶಿಸಲಿ ಎಂದು ಘೋಷಣೆ ಕೂಗುತ್ತಿದ್ದಾರೆ. ಅಲ್ಲದೆ ಅಲ್ಲಿನ ಕತ್ತರಿ ಹಿಡಿದು ಕೂದಲು ಕತ್ತರಿಸಿಕೊಳ್ಳುವ ಅಭಿಯಾನವನ್ನು ಮುಂದುವರಿಸಿದ್ದಾರೆ. ಹಿಜಬ್ ಸುಟ್ಟು ಆಕ್ರೋಶ ಹೊರಹಾಕುತ್ತಿದ್ದಾರೆ. ನಾವು ಯುದ್ಧ ಭೂಮಿಯಲ್ಲಿ ಹುಟ್ಟಿದವರು, ಬನ್ನಿ ನಮ್ಮನ್ನು ಎದುರಿಸಿ ಎಂದು ಸರ್ಕಾರಕ್ಕೆ ಸವಾಲು ಹಾಕುತ್ತಿದ್ದಾರೆ. ಪ್ರತಿಭಟನೆ ದಮನಿಸಲು ರೈಸಿ ಸರ್ಕಾರ ಬಲಪ್ರಯೋಗ ಮಾಡುತ್ತಿದೆ. ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದೆ. ಈವರೆಗೂ ಪೊಲೀಸರ ಗುಂಡಿಗೆ ದೇಶದ ವಿವಿಧೆಡೆ 8 ಮಂದಿ ಬಲಿ ಆಗಿದ್ದಾರೆ.

ಅಲ್ಲಿ ಸರ್ಕಾರದ ವಿರುದ್ಧ ಸೆಡ್ಡು ಹೊಡೆದು ನಿಂತಿರುವ ಪ್ರತಿಭಟನಾಕಾರರು ಮಾತ್ರ ಹಿಂದೆ ಸರಿಯಲು ಸಿದ್ಧರಿಲ್ಲ. ಈಗ ಇದು ಇರಾನ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅಂತಹ ಕಟ್ಟರ್ವಾದಿ ಮುಸ್ಲಿಂ ದೇಶದಲ್ಲಿ ಮುಸ್ಲಿಂ ಮಹಿಳೆಯರು ಹಿಜಾಬ್ ವಿರುದ್ಧವಾಗಿ ಜೀವದ ಹಂಗು ತೊರೆದು ಹೋರಾಟಕ್ಕೆ ಇಳಿದಿದ್ದಾರೆ. ಇತ್ತ ಭಾರತದಲ್ಲಿ ಭಾರತೀಯ ಮುಸಲ್ಮಾನರು ಮತ್ತು ಮುಸ್ಲಿಂ ಹುಡುಗಿಯರು ಹಿಜಾಬ್ ಬೇಕೆಂದು ಸುಪ್ರೀಂ ಕೋರ್ಟಿನ ಮೆಟ್ಟನ್ನು ಹತ್ತಿದ್ದಾರೆ. ಸುಪ್ರೀಂಕೋರ್ಟ್‍ನಲ್ಲಿ ಇವತ್ತು ಕೂಡ ಹಿಜಬ್ ವಿಚಾರಣೆ ನಡೀತು. ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರೆಲ್ ನಟರಾಜ್, ಶಾಲೆಗಳಲ್ಲಿ ಧರ್ಮದ ಆಧಾರದ ಮೇಲೆ ವರ್ಗೀಕರಿಸಲು ಅನುಮತಿಸಲಾಗುವುದಿಲ್ಲ. ಏಕತೆಯನ್ನು ಉತ್ತೇಜಿಸಲು ಹಿಜಬ್ ನಿಷೇಧಿಸಿ ರಾಜ್ಯ ಸರ್ಕಾರವು ಕ್ರಮ ಕೈಗೊಂಡಿದೆ. ಇದರ ವಿರುದ್ಧ ಯಾರೂ ದೂರು ನೀಡಲು ಸಾಧ್ಯವಿಲ್ಲ ಎಂದರು. ಬಳಿಕ ವಾದಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಹಿಜಬ್ ಕಡ್ಡಾಯ ಅಂತಾ ಕುರಾನ್ ಹೇಳಿಲ್ಲ. ಹಲವರು ಹಿಜಬ್ ಧರಿಸಲ್ಲ, ಹಿಜಬ್ ಧರಿಸುವುದು ಧಾರ್ಮಿಕ ವಿಚಾರವೇ ಆಗಿರಬಹುದು. ಆದ್ರೆ ಅದು ಧರ್ಮಕ್ಕೆ ಅತ್ಯಗತ್ಯವೇ? ಎಂದರೆ ಇಲ್ಲ ಎಂದು ಹೈಕೋರ್ಟ್ ಹೇಳಿದೆ ಎಂದು ವಾದ ಮಂಡನೆ ಆಗಿದೆ. ಈ ಬಗ್ಗೆ ನಾಳೆಯೂ ವಿಚಾರಣೆ ಮುಂದುವರಿಯಲಿದೆ.

Leave A Reply

Your email address will not be published.