ಕೊರಗಜ್ಜನ ಪವಾಡ : ದೈವದ ಪ್ರಾರ್ಥನೆ ಸಮಯದಲ್ಲಿ ಇಟ್ಟ ವೀಳ್ಯದೆಲೆಯಲ್ಲಿ ಮೂಡಿದ ಬೇರು!!!

ತುಳುನಾಡಿನ ಕೊರಗಜ್ಜದೈವ ಅತ್ಯಂತ ಕಾರಣಿಕವಾದ ದೈವ ಎಂದೇ ಹೆಸರುವಾಸಿ. ಈ ದೈವವನ್ನು ನಂಬಿದರೆ ಇಷ್ಟಾರ್ಥ ಸಿದ್ಧಿ ಲಭಿಸುತ್ತದೆ ಎಂಬುದೇ ಎಲ್ಲರ ನಂಬಿಕೆ ಹಾಗೂ ಸತ್ಯ ಕೂಡ. ಕೊರಗಜ್ಜನ ಪವಾಡ ಈಗಲೂ ನಡೆಯುತ್ತಲೇ ಇದೆ. ಇದಕ್ಕೆ ಉದಾಹರಣೆ ಎಂಬಂತೆ, ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಏರಣಗುಡ್ಡೆ ಎಂಬಲ್ಲಿ ಕೊರಗಜ್ಜದೈವಕ್ಕೆ ಪ್ರಾರ್ಥನೆ ಮಾಡಿ ಇಟ್ಟ ವೀಳ್ಯದೆಲೆಯಲ್ಲಿ ಬೇರು ಬರುವ ಮೂಲಕ ಅಚ್ಚರಿ ಹಾಗೂ ಕುತೂಹಲದ ಜೊತೆಗೆ ದೈವದ ಮೇಲಿನ ನಂಬಿಕೆ ಇಮ್ಮಡಿ ಆದ ಘಟನೆ ನಡೆದಿದೆ.

ಸುಳ್ಯದ ಗುತ್ತಿಗಾರು ಬಳಿಯ ಮೊಗ್ರದ ಮಾತ್ರಮಜಲು ಎಂಬಲ್ಲಿ ಶೀನಪ್ಪ ಎಂಬವರ ಮನೆಯ ವಠಾರದಲ್ಲಿ ಕೊರಗಜ್ಜ ದೈವದ ಕಟ್ಟೆ ಇದೆ. ಪ್ರತೀ ತಿಂಗಳು ಸಂಕ್ರಮಣದ ದಿನ ಆರಾಧನೆಯಾಗುತ್ತದೆ. ಕಳೆದ ತಿಂಗಳು ಮಗುವಿಗೆ ಅನಾರೋಗ್ಯ ಇದ್ದಾಗ ಸಮೀಪದವರು ಕೊರಗಜ್ಜ ದೈವಕ್ಕೆ ಹರಿಕೆ ಹೇಳಿದ್ದರು. ಈ ಸಂದರ್ಭ ಕೊರಗಜ್ಜನಿಗೆ ಪ್ರಿಯವಾದ ವೀಳ್ಯದೆಲೆ, ಅಡಿಕೆಯನ್ನು ಕಟ್ಟೆಯ ಮೇಲೆ ಇರಿಸಿ ಪ್ರಾರ್ಥನೆ ಮಾಡಿದ್ದರು.

ನಂತರ ಪವಾಡ ಎಂಬ ರೀತಿಯಲ್ಲಿ ಕೆಲವು ದಿನಗಳವರೆಗೂ ಹಸಿರಾಗಿಯೇ ಇತ್ತು ವೀಳ್ಯದೆಲೆ. ನಂತರ ಬೇರು ಬರಲು ಆರಂಭಿಸಿತು. ತಕ್ಷಣವೇ ಶೀನಪ್ಪ ಅವರು ದೈವಜ್ಞರ ಮೂಲಕವೂ ತಿಳಿದಾಗ ಸತ್ಯದ ಅರಿವಾಯಿತು. ಮಗು ಆರೋಗ್ಯವಾಗಿರುವುದೂ ತಿಳಿಯಿತು. ಹೀಗಾಗಿ ಅದೇ ವೀಳ್ಯದೆಲೆಯನ್ನು ಈಗ ಹೂಕುಂಡದಲ್ಲಿ ಇರಿಸಿದ್ದಾರೆ ಶೀನಪ್ಪ.

ಕೊರಗಜ್ಜ ದೈವ ತುಳುನಾಡಿನ ಜನತೆಯ ಆರಾಧ್ಯ ದೈವ. ಹಾಗೂ ಅತ್ಯಂತ ಕಾರಣಿಕ ದೈವ. ನಂಬಿದವರಿಗೆ ಇಂಬು ನೀಡುವ, ಮಾನಸಿಕ ಧೈರ್ಯ ನೀಡುವ ದೈವವಾಗಿ ಹೆಸರುವಾಸಿಯಾದ ದೈವ. ಆದರೆ ಸಾಮಾನ್ಯವಾಗಿ ವಾರದಲ್ಲಿ ಬಾಡಿ ಹೋಗಿವ ವೀಳ್ಯದೆಲೆಯು, ಇಲ್ಲಿ ಕೊರಗಜ್ಜನ ಕಟ್ಟೆಯಲ್ಲಿ ಇರಿಸಿರುವ ಈ ವೀಳ್ಯದೆಲೆ ಹಸಿರಾಗಿಯೇ ಇದೆ‌. ಅಷ್ಟು ಮಾತ್ರವಲ್ಲದೇ, ಈಗ ಬೇರು ಮೂಡಿರುವುದು ಭಕ್ತರಿಗೆ ನಂಬಿಕೆ ಹಾಗೂ ಭಕ್ತಿ ಹೆಚ್ಚಾಗಿದೆ.

Leave A Reply

Your email address will not be published.