ಜನರ ಸಮಸ್ಯೆಗೆ ಮುಕ್ತಿ ನೀಡಿದ ‘ಯುವ ತೇಜಸ್ಸು ಟ್ರಸ್ಟ್ ‘ | ಅಡಿಕೆ ಮರದ ಕಾಲುಸಂಕ ತೆರವುಗೊಳಿಸಿ ಕಬ್ಬಿಣದ ಕಾಲುಸಂಕ ನಿರ್ಮಿಸಿಕೊಟ್ಟ ತಂಡ

ಬೆಳ್ತಂಗಡಿ : ಅಪಾಯದ ಪರಿಸ್ಥಿತಿಯಲ್ಲಿದ್ದ
ಅಡಿಕೆ ಮರದ ಕಾಲುಸಂಕವನ್ನು ತೆಗೆದು ಕಬ್ಬಿಣದ ಕಾಲುಸಂಕವನ್ನು ನಿರ್ಮಿಸಿಕೊಡುವ ಮೂಲಕ ತಾಲೂಕಿನ ಮಿತ್ತ ಬಾಗಿಲು ಗ್ರಾಮದ ಕಲ್ಲಂಡ ಪರಿಸರದ ಜನರಿಗೆ ಯುವ ತೇಜಸ್ಸು ಟ್ರಸ್ಟ್​ ಆಶ್ರಯವಾಗಿದೆ.

ಕಲ್ಲಂಡ ಪ್ರದೇಶದಲ್ಲಿ ಹರಿಯುವ ನೇತ್ರಾವತಿ ನದಿ ಸಂಪರ್ಕದ ಏಳೂವರೆ ಹಳ್ಳಕ್ಕೆ ಅಡಿಕೆ ಮರದ ಕಾಲುಸಂಕವೇ ಪ್ರಮುಖ ಸಂಪರ್ಕವಾಗಿತ್ತು. ಇದೀಗ ಜಿಲ್ಲೆಯ ಯುವ ತೇಜಸ್ಸು ಟ್ರಸ್ಟ್ ಕಬ್ಬಿಣದ ಕಾಲುಸಂಕ ನಿರ್ಮಿಸಿಕೊಟ್ಟಿದೆ.

ಇಲ್ಲಿನ ಗುತ್ತು, ಕಡ್ತಿ ಕುಮೆರು, ಕಕ್ಕೆನೇಜಿ, ಮಕ್ಕಿ, ಪರ್ಲ ಮೊದಲಾದ ಪ್ರದೇಶದ ಸುಮಾರು 28 ಕುಟುಂಬಗಳ ಶಾಲಾ ಮಕ್ಕಳ ಸಹಿತ ಪ್ರದೇಶದ ಜನರು ಹಳ್ಳದಿಂದ ಸುಮಾರು 10 ಮೀ.ಗಿಂತ ಎತ್ತರದಲ್ಲಿರುವ ಅಡಿಕೆ ಮರದ ಕಾಲುಸಂಕವನ್ನು ದಾಟಿಯೇ ಮುಂದುವರಿಯ ಬೇಕಿತ್ತು. ಆಕರ್ಷಕ ಎರ್ಮಾಯಿ ಜಲಪಾತಕ್ಕೆ ಬರುವ ಪ್ರವಾಸಿಗರು ಕೂಡ ಈ ಕಾಲುಸಂಕವನ್ನು ದಾಟಿಯೇ ಪ್ರವೇಶಿಸಬೇಕು.

ಆದರೆ ಅಪಾಯದಲ್ಲಿದ್ದ ಈ ಕಾಲುಸಂಕ ದಾಟುವಾಗ ಒಂದಿಷ್ಟು ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ, ಇಲ್ಲಿ ಸಂಪರ್ಕವನ್ನು ನಿರ್ಮಿಸಲು ಪ್ರದೇಶದ ಜನರು ಜನಪ್ರತಿನಿಧಿಗಳಿಗೆ ಸಾಕಷ್ಟು ಮನವಿಗಳನ್ನು ನೀಡಿದ್ದರೂ ಯಾವುದೇ ಪ್ರಯೋಜನವಿಲ್ಲದೆ ಪ್ರದೇಶ ಸಮಸ್ಯೆ ಮುಂದುವರೆದಿತ್ತು.

ಇದೀಗ ದ.ಕ. ಜಿಲ್ಲೆಯನ್ನು ಕಾಲುಸಂಕ ಮುಕ್ತ ಮಾಡಬೇಕೆಂಬ ಅಭಿಯಾನದಲ್ಲಿ ತೊಡಗಿರುವ ಜಿಲ್ಲೆಯ ಯುವ ತೇಜಸ್ಸು ಟ್ರಸ್ಟ್, ಕಲ್ಲಂಡ ಪ್ರದೇಶದಲ್ಲಿ ಸುಸಜ್ಜಿತ ಕಬ್ಬಿಣದ ಕಾಲುಸಂಕವನ್ನು ಭಾನುವಾರ ನಿರ್ಮಿಸಿ ಕೊಟ್ಟಿದೆ. ಅಧಿಕ ಮೊತ್ತದ ಈ ಯೋಜನೆಯಿಂದ ಕಾಲುಸಂಕ ದಾಟಿ ಹೋಗುತ್ತಿದ್ದ ಪ್ರದೇಶದ ಜನರ ಸಮಸ್ಯೆಗೆ ಮುಕ್ತಿ ದೊರಕಿದೆ.

ಕಲ್ಲಂಡ ಪ್ರದೇಶದಲ್ಲಿ ಅನೇಕ ಅಭಿವೃದ್ಧಿ ಅಗತ್ಯವಿದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಇಲಾಖೆಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ನಮಗೆ ಅತಿ ಅಗತ್ಯವಾಗಿ ಬೇಕಿದ್ದ ಕಿರು ಸೇತುವೆಯನ್ನು ಯುವ ತೇಜಸ್ಸು ಟ್ರಸ್ಟ್ ನಿರ್ಮಿಸಿಕೊಟ್ಟಿದೆ. ಇದರಿಂದ ನಮ್ಮ ಪ್ರದೇಶಕ್ಕೆ ಸಂಪರ್ಕದ ಅನುಕೂಲವಾಗಿದೆ. ಬಹುವರ್ಷದ ಬೇಡಿಕೆಗೆ ತಕ್ಷಣ ಸ್ಪಂದಿಸಿದ ಟ್ರಸ್ಟ್ ಕೆಲಸ ಪ್ರದೇಶದ ಜನರಿಂದ ಅಭಿನಂದನೆಗೊಳಗಾಗಿದೆ ಎಂದು ಸ್ಥಳೀಯ ನಿವಾಸಿ ವೆಂಕಪ್ಪ ಗೌಡ ಕಲ್ಲಂಡ ಅಭಿನಂದಿಸಿದ್ದಾರೆ.

ಸಮಾಜದ ಅಸಹಾಯಕರ ಕಷ್ಟಗಳಿಗೆ ಸಹಾಯ ನೀಡುವ ಯುವ ತೇಜಸ್ಸು ಟ್ರಸ್ಟ್ ಜನಮನ್ನಣೆಗೆ ಪಾತ್ರವಾಗಿದೆ. ದ.ಕ., ಮಡಿಕೇರಿ, ಕಾಸರಗೋಡು, ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ, ಅನಾರೋಗ್ಯ ಪೀಡಿತರಿಗೆ ಸಹಾಯ, ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ಪ್ರಾಕೃತಿಕ ವಿಕೋಪಗಳಿಂದ ಹಾನಿಯಾಗುವ ಪ್ರದೇಶಗಳಲ್ಲಿ ಶ್ರಮದಾನಗಳನ್ನು ನಡೆಸುವ ಜತೆ ಸಾಕಷ್ಟು ಜನ ಸೇವೆಯನ್ನು ನೀಡುತ್ತಿದೆ. ತಂಡದಲ್ಲಿ 20 ಪದಾಧಿಕಾರಿಗಳು 3,000ದಷ್ಟು ಮಂದಿ ದಾನಿಗಳು ಹಾಗೂ ಕೆಲಸಗಳಿಗೆ ಸಹಕಾರ ನೀಡುವವರು ಇದ್ದಾರೆ. ನೇರ ಸಂಪರ್ಕದೊಂದಿಗೆ ಸಮಸ್ಯೆಗಳನ್ನು ತಿಳಿಸುವವರಿಗೆ ಮೊದಲ ಆದ್ಯತೆ ಮೇರೆಗೆ ಸಹಕರಿಸಲಾಗುತ್ತಿದೆ.

Leave A Reply

Your email address will not be published.