ರೈತರೇ ನಿಮಗೊಂದು ಗುಡ್ ನ್ಯೂಸ್ : ‘ಸ್ವಾವಲಂಬಿ ಯೋಜನೆ’ ಮೂಲಕ ಏಳೇ ದಿನದಲ್ಲಿ ಹಿಸ್ಸಾ, ನಕಾಶೆ, ಪೋಡಿ ದಾಖಲೆಗಳು ನಿಮ್ಮ ಮನೆಬಾಗಿಲಿಗೆ!

ರೈತರೇ ನಿಮಗೊಂದು ಸಿಹಿ ಸುದ್ದಿ . ಹೌದು ರೈತ ಸಮುದಾಯಕ್ಕೆ ರಾಜ್ಯ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದೆ. ಅದೇನೆಂದರೆ, ಭೂಮಿಯ ಮಾಲೀಕರು ಜಮೀನಿನ 11 ಇ ಹಿಸ್ಸಾ, ನಕಾಶೆ, ತತ್ಕಾಲ್ ಪೋಡಿ, ಭೂಪರಿವರ್ತನಾ ನಕ್ಷೆ ಇತ್ಯಾದಿ ಪಡೆಯಲು ಅರ್ಜಿ ಸಲ್ಲಿಸಿದ ಏಳೇ ದಿನಗಳಲ್ಲಿ ದಾಖಲೆಗಳು ಕೈ ಸೇರಲಿವೆ.

ಹೌದು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಗಳಿಂದ ಸಾರ್ವಜನಿಕರಿಗೆ ವಿಳಂಬವಿಲ್ಲದೇ ಸೇವೆ ಕಲ್ಪಿಸಲು ಸ್ವಾವಲಂಬಿ ವೆಬ್ ಸೈಟ್ ಜಾರಿಗೆ ತಂದಿದೆ. ಈ ಮೂಲಕ ಹಿಸ್ಸಾ, ನಕಾಶೆ, ತತ್ಕಾಲ್ ಪೋಡಿ, ಭೂ ಪರಿವರ್ತನಾ ನಕ್ಷೆ ಅರ್ಜಿ ಸಲ್ಲಿಸಿದ ಏಳೇ ದಿನಗಳಲ್ಲಿ ದಾಖಲೆಗಳು ಜನರ ಕೈಗೆ ಬರಲಿವೆ.

ಈ ಆಯಪ್ ಮುಖಾಂತರ ಜನರೇ ಆಧಾರ್ ನಂಬರ್ ಹಾಗೂ ಮೊಬೈಲ್ ನಂಬರ್ ಬಳಸಿ ನಿಮ್ಮ ದಾಖಲೆಗಳನ್ನು ಪಡೆಯಬಹುದು. ಸ್ವಾವಲಂಬಿ ಅಂದರೇ 11 ಇ ಸ್ಕೆಚ್ ಹಾಗೂ ಪೋಡಿ ವಿಧಾನವನ್ನು ಮಾಡುವುದು. ಈ ಹಿಂದೆ ಸರ್ವೆಯರ್ ಬಂದು ಅಪ್ರೂವಲ್ ಮಾಡಲು ತುಂಬಾ ತಡವಾಗುತ್ತಿತ್ತು. ಆದರೆ, ಈಗ ಅವರೇ ಭೂ ಪರಿವರ್ತನೆ ಮಾಡಿಕೊಳ್ಳಬಹುದು. ಸ್ವಾವಲಂಬಿ, ಸರಳ ಸುರಕ್ಷಿತ ನಾಗರಿಕ ಸ್ನೇಹಿ ಯೋಜನೆ. ಇದರಿಂದ ಮಧ್ಯವರ್ತಿಗಳ ಹಾವಳಿಗೆ ತಡೆ ಬೀಳುವುದರಲ್ಲಿ ಸಂಶಯವಿಲ್ಲ.

ಹಿಸ್ಸಾ ನಕಾಶೆ, ಆರ್‌ಟಿಸಿ ಹಾಗೂ ನೋಂದಾಯಿತ ಮೊಬೈಲ್ ನಂಬರ್ ಇರುವ ಆಧಾರ್ ಕಾರ್ಡ್ ತಾಳೆಯಾದರೆ ಮಾತ್ರ ಈ ವೆಬ್‌ಸೈಟ್‌ನಲ್ಲಿ ಅರ್ಜಿಗಳು ಸ್ವೀಕೃತವಾಗುತ್ತವೆ. ಕಡ್ಡಾಯವಾಗಿ ಜಮೀನಿನ ಆರ್‌ಟಿಸಿ ನಂಬರ್ ಇದ್ದರೆ ಮಾತ್ರ ಅರ್ಜಿ ಮಾನ್ಯವಾಗುತ್ತದೆ. rdservices.karnataka.gov.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿ ಸೇವೆ ಪಡೆಯಬಹುದು.

ಈ ಮೊದಲು ನಾಡ ಕಚೇರಿಗೆ ಹೋಗಿ ಜಮೀನಿನ 11ಇ, ಪೋಡಿ ಸೇರಿ ಇತ್ಯಾದಿ ಕಾರ್ಯಗಳಿಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಆ ಅರ್ಜಿಯು ನಾಡಕಚೇರಿಯಲ್ಲಿ ಪರಿಶೀಲನೆಗೊಳಪಟ್ಟು ಸರತಿಯಲ್ಲಿ ಬೀಳುತಿತ್ತು. ಸರತಿಯಿಂದ ಭೂಮಾಪಕರ ಬಳಿ ಹೋಗುತ್ತಿತ್ತು. ಭೂಮಾಪಕರು ಜಮೀನನ್ನು ಪರಿಶೀಲಿಸಿ, ನಕ್ಷೆ ಗುರುತಿಸಿ ಅಪ್‌ಲೋಡ್ ಮಾಡುತ್ತಿದ್ದರು. ಅಪ್‌ಲೋಡ್ ಆದ ದಾಖಲೆಯನ್ನು ತಪಾಸಕರ ಮೂಲಕ ಪರಿಶೀಲಿಸಿದ ಬಳಿಕ ಅಂತಿಮ ಅನುಮೋದನೆಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಕಳುಹಿಸಲಾಗುತ್ತಿತ್ತು. ಈ ಎಲ್ಲ ಪ್ರಕ್ರಿಯೆಗೆ ಸುಮಾರು ಎರಡು ತಿಂಗಳು ಸಮಯ ಬೇಕಾಗಿತ್ತು. ಆದರೆ ಇದೀಗ ಭೂಮಾಪನ ಕಂದಾಯ ಇಲಾಖೆ ‘ಸ್ವಾವಲಂಬಿ’ ವೆಬ್‌ಸೈಟ್ ಮೂಲಕ ಸಲ್ಲಿಕೆಯಾಗುವ ಅರ್ಜಿಗಳನ್ನು 7 ದಿನಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ.

Leave A Reply

Your email address will not be published.