ಅಡಕೆಗೆ ತಗುಲಿದೆ ಎಲೆಚುಕ್ಕಿ ರೋಗ: ಇದಕ್ಕೆ ಪರಿಹಾರವೇನು?

ಅಡಕೆ ಬೆಳೆಸುವ ರೈತರಿಗೆ ಒಂದರ ಮೇಲೊಂದು ಕಂಟಕ ತಪ್ಪಿದ್ದಲ್ಲ. ಕೊಳೆ, ಬಾಯಿ ಒಡೆ, ಕೀಟ ಸಮಸ್ಯೆಯ ಮಧ್ಯೆ ಈಗ ಮರಗಳಿಗೆ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ. ಹಾಗಾಗಿ ರೈತರು ಅಡಕೆ ತೋಟಗಳೇ ಸಂಪೂರ್ಣ ನಾಶವಾಗುವ ಆತಂಕದಲ್ಲಿದ್ದಾರೆ.

ಒಂದು ಕಡೆ ಭೋ ಎಂದು ಸುರಿಯುತ್ತಿರುವ ಮಳೆಯಿಂದ ಅಡಕೆಗೆ ಕೊಳೆರೋಗ ಕಾಣಿಸಿಕೊಂಡಿದೆ. ಎರಡು-ಮೂರು ಬಾರಿ ಬೋರ್ಡೊ ದ್ರಾವಣ ಸಿಂಪಡಿಸಿದರೂ ಕೊಳೆರೋಗ ಹತೋಟಿಗೆ ಬರುವ ಲಕ್ಷಣ ಕಾಣಿಸುತ್ತಿಲ್ಲ. ಇದರ ಜತೆಗೆ ಬಾಯಿ ಒಡೆ ರೋಗದಿಂದ ಅಡಕೆ ಉದುರುತ್ತಿದೆ. ಜತೆಗೆ ರಸಹೀರುವ ಕೀಟದಿಂದ ಅಡಕೆಯ ಮಿಳ್ಳೆಗಳೇ ಉದುರುತ್ತಿವೆ. ಈ ಎಲ್ಲಾ ಸಮಸ್ಯೆಗಳ ಮಧ್ಯೆ ಈಗ ಅಡಕೆ ಮರಗಳಿಗೆ ಎಲೆಚುಕ್ಕಿ ರೋಗ ಬಂದಿದೆ.

ಈಗ ತಾನೆ ಬೆಳೆಸುತ್ತಿರುವ ಗಿಡಗಳಲ್ಲೂ ಈ ರೋಗ ಕಾಣಿಸಿಕೊಂಡಿದೆ ಕೂಡಾ. ಇದರಿಂದಾಗಿ ಅಡಕೆ ಮರ ಹಾಗೂ ಗಿಡಗಳ ಎಲೆಗಳು ಒಮ್ಮೆಲೇ ಒಣಗುತ್ತಿವೆ. ಸುಳಿ ಒಣಗಿದರೆ ಅಡಕೆ ಮರ ಉಳಿಯೋದಿಲ್ಲ. ಈ ರೋಗವು ಶಿಲೀಂದ್ರದಿಂದ ಬರುತ್ತಿದ್ದು ಗಾಳಿಯ ಮೂಲಕ ಮರದಿಂದ ಮರಕ್ಕೆ ಹರಡುತ್ತದೆ. ಪತ್ರಹರಿತ್ತು ಕಡಿಮೆಯಾಗಿ ಸೋಗೆಯಲ್ಲಿ ಕಂದುಬಣ್ಣದ ಚುಕ್ಕೆ ಕಾಣಿಸಿಕೊಳ್ಳುತ್ತದೆ. ಇದರ ನಂತರ ಸಿಂಗಾರವೂ ಒಣಗುತ್ತದೆ. ಹೀಗಾದರೆ ಬೆಳೆ ಕುಂಠಿತವಾಗುವುದರ ಜತೆಗೆ ಕ್ರಮೇಣ ಅಡಕೆ ಮರ ಒಣಗಿ ನಾಶವಾಗುತ್ತದೆ.

ಇದೇ ರೀತಿ ಮುಂದುವರಿದರೆ, ಬೆಳೆ ನಷ್ಟವಾಗುತ್ತದೆ. ಹಾಗಾಗಿ ಸರಕಾರದಿಂದ ಪರಿಹಾರ ಅತ್ಯಲ್ಪ. ಹವಾಮಾನಾಧಾರಿತ ಬೆಳೆ ವಿಮೆಯಂತೂ ಅದರ ಅವೈಜ್ಞಾನಿಕ ಮಾನದಂಡದಿಂದ ಸಿಗುವುದಿಲ್ಲ. ಹಾಗಾಗಿ ರೈತರು ತಮ್ಮ ಬೆಳೆ ರಕ್ಷಣೆಗೆ ತಾವೇ ಮುಂದಾಗಬೇಕು. ಔಷಧ ಸಿಂಪಡಣೆಯನ್ನು ಸೂಕ್ತ ಸಮಯದಲ್ಲಿ ಸಿಂಪಡಣೆ ಮಾಡುವ ಮೂಲಕ ಬೆಳೆ ಹಾಗೂ ಮರಗಳನ್ನು ರಕ್ಷಿಸಿಕೊಳ್ಳಬೇಕು.

ಇದರ ನಿಯಂತ್ರಣಕ್ಕಾಗಿ ತೋಟಗಾರಿಕಾ ಇಲಾಖೆ ಕೆಲವು ಸಲಹೆ ನೀಡಿದೆ.
• ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಪ್ರೋಪಿಕೊನಝಲ್ – (ಒಂದು ಮೀಲಿ ಪ್ರತಿ ಲೀಟರ್ ನೀರಿಗೆ ) ಎಲೆಗಳಿಗೆ
ಸಿಂಪಡಣೆ ಮಾಡಬೇಕು.
• 30 ದಿನಗಳ ನಂತರ ಎರಡನೇ ಸಿಂಪಡಣೆ ಕಾಬೇಂರ್ಡಜಮ್+ ಮ್ಯಾಂಕೋಜೆಬ್ (2 ಗ್ರಾಂ ಪ್ರತಿ ಲೀಟರ್ ನೀರಿಗೆ) ಮಾಡಬೇಕು.
• ಮಳೆ ಬೀಳುವ ಸಮಯದಲ್ಲಿ ಸಿಂಪಡಣೆ ಸೂಕ್ತವಲ್ಲ.
• ಶಿಫಾರಸು ಮಾಡಿದ ಪ್ರಮಾಣದ ಪೋಷಕಾಂಶಗಳನ್ನು ಹಾಗೂ ಕೃಷಿ ಸುಣ್ಣವನ್ನು ಮಣ್ಣು ಪರೀಕ್ಷೆ ವರದಿಯ ಅನುಸಾರ ಪ್ರತಿ ವರ್ಷ ನೀಡಬೇಕು.
• ಇದರ ನಿಯಂತ್ರಣಕ್ಕಾಗಿ ರೋಗ ಬಾಧಿತ ಎಲೆಗಳನ್ನು ತುಂಡರಿಸಿ ನಾಶ ಮಾಡಬೇಕು.
• ಮಳೆಗಾಲದಲ್ಲಿ ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣ ಸಿಂಪಡಿಸುವಾಗ ಎಲೆಗಳಿಗೂ ಸಿಂಪಡಿಸಬೇಕು.

ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಅರುಣ ಹೆಚ್.ಜಿ. ಹೇಳುವ ಪ್ರಕಾರ, ” ಎಲೆಚುಕ್ಕಿ ರೋಗ ಶಿಲೀಂಧ್ರ ಮೂಲಕ ಬರುತ್ತದೆ. ಏಕೆಂದರೆ, ಕಳೆದ ಬಾರಿ ಅಡಕೆಗೆ ಬೋರ್ಡೋ ಔಷಧವನ್ನು ಸರಿಯಾಗಿ ಸಿಂಪಡಿಸದ ತೋಟಗಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತದೆ. ಹಾಗೆನೇ ಇನ್ನೊಂದು ಮುಖ್ಯವಾದ ವಿಷಯವೇನೆಂದರೆ, ಇದು ಗಾಳಿಯ ಮೂಲಕ ಹರಡುವುದರಿಂದ ಔಷಧ ಹೊಡೆದಿರುವ ತೋಟಗಳಿಗೂ ಹರಡುವ ಸಾಧ್ಯತೆ ಹೆಚ್ಚೇ ಇದೆ. ಆದರೆ ಕೃಷಿಕರು ಆತಂಕಪಡುವುದು ಬೇಡ. ಇದರ ನಿಯಂತ್ರಣಕ್ಕೆ ಔಷಧ ಸಿಂಪಡಣೆ ಮಾಡುವುದೊಂದೇ ಉಪಾಯ ಎಂದು ಹೇಳಿದ್ದಾರೆ.

1 Comment
  1. sklep online says

    Wow, superb blog layout! How lengthy have you been blogging for?
    you made running a blog look easy. The full
    glance of your website is great, let alone the content!

    You can see similar here dobry sklep

Leave A Reply

Your email address will not be published.