ಗಣೇಶೋತ್ಸವದಲ್ಲಿ ಹನುಮ ವೇಷಧಾರಿ ನೃತ್ಯ ಮಾಡುತ್ತಲೇ ಸಾವು | ದಿಗ್ಭ್ರಮೆಗೊಂಡ ಜನ, ವೀಡಿಯೋ ವೈರಲ್

ಗಣೇಶೋತ್ಸವ ಕಲಾವಿದರೊಬ್ಬರು ಹನುಮನ ವೇಷ ಧರಿಸಿ ಕುಣಿಯುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದ ಘಟನೆಯೊಂದು ನಡೆದಿದೆ. ಈ ಘಟನೆ ಉತ್ತರಪ್ರದೇಶದ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆದಿದೆ.

ಮೃತ ಕಲಾವಿದನನ್ನು ರವಿ ಶರ್ಮಾ ಎಂದು ಗುರುತಿಸಲಾಗಿದೆ.

ಹನುಮನ ವೇಷ ಧರಿಸಿ ನೃತ್ಯ ಮಾಡುತ್ತಿದ್ದಾಗ, ಈ ಘಟನೆ ನಡೆದಿದೆ. ಉತ್ತರಪ್ರದೇಶದ ಮಣಿಪುರದ (Manipura) ಕೊತ್ವಾಲಿ ಪ್ರದೇಶದಲ್ಲಿ ಆಯೋಜಿಸಿದ್ದ ಗಣೇಶೋತ್ಸವ ಸಂದರ್ಭ ಈ ಘಟನೆ ನಡೆದಿದೆ. ಕುಣಿಯುತ್ತಿರುವಾಗಲೇ ದಿಢೀರನೆ ಕುಸಿದು ಬಿದ್ದಿದ್ದನ್ನು ಕಂಡ ಜನ ಹಾಗೂ ಸಂಘಟಕರು ಇದು ನೃತ್ಯದ ಒಂದು ಭಾಗವೆಂದು ನಂಬಿದ್ದಾರೆ. ಹಾಗಾಗಿ ಕೆಲ ನಿಮಿಷ ಅಲ್ಲೇ ಬಿದ್ದುಕೊಂಡೇ ಇದ್ದರೂ ಯಾರೂ ಸಹಾಯಕ್ಕೆ ಧಾವಿಸಿರಲಿಲ್ಲ.

ಆದರೆ ತುಂಬಾ ಹೊತ್ತಾದರೂ ಅವರು ಮೇಲೆಳದೇ ಇದ್ದಾಗ ಅಲ್ಲಿ ಸೇರಿದ ಜನರಿಗೆ ಏನೋ ಅವಘಡವಾಗಿರುವುದು ಗಮನಕ್ಕೆ ಬಂದಿದೆ. ನಂತರ ಓಡಿ ಬಂದ ಅನೇಕರು ಅವರನ್ನು ಮೇಲೆಳಿಸುವ ಪ್ರಯತ್ನ ಮಾಡಿ ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ. ಹೃದಯಾಘಾತದಿಂದ ರವಿ ಶರ್ಮಾ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ರವಿಶರ್ಮಾ ಅವರು ಕುಸಿದು ಬಿದ್ದ ಹಾಗೂ ನಂತರ ಕೆಲ ಕ್ಷಣಗಳ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನ ನಿಜಕ್ಕೂ ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ. ಚಿರಂಜೀವಿ ಹನುಮನ ವೇಷ ಧರಿಸಿದ ವ್ಯಕ್ತಿ ವೇದಿಕೆಯಲ್ಲೇ ಚಿರನಿದ್ರೆಗೆ ಜಾರಿರುವುದು ನಿಜಕ್ಕೂ ದುರದೃಷ್ಟಕರ ಎಂದೇ ಹೇಳಬಹುದು.

Leave A Reply

Your email address will not be published.