900 ಪಿಎಸ್‌ಐ ಹುದ್ದೆಗಳ ನೇಮಕಕ್ಕೆ ಶೀಘ್ರವೇ ಅರ್ಜಿ ಆಹ್ವಾನ – ಆರಗ ಜ್ಞಾನೇಂದ್ರ

ರಾಜ್ಯದಲ್ಲಿ ಖಾಲಿ ಇರುವಂತ 900 ಪಿಎಸ್‌ಐ ಹುದ್ದೆಗಳ ನೇಮಕಕ್ಕೆ ಶೀಘ್ರವೇ ಅರ್ಜಿಯನ್ನು ಕರೆಯಲಾಗುತ್ತದೆ ಎಂಬುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ( Home Minister Araga Jnanendra ) ಘೋಷಣೆ ಮಾಡಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಎಂಟು ತಿಂಗಳ ಹಿಂದೆಯಷ್ಟೇ ಶಂಕುಸ್ಥಾಪನೆ ನೆರವೇರಿಸಿದ್ದ ಎರಡು ಪೊಲೀಸ್ ಠಾಣೆಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಉದ್ಘಾಟಿಸಿರುವುದು‌ ಅನುಕರಣೀಯ ಸಂಗತಿಯಾಗಿದೆ. ಈ ಹಿಂದೆ ವರ್ಷಕ್ಕೆ ರಾಜ್ಯದಲ್ಲಿ 2 ರಿಂದ 3 ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗುತ್ತಿತ್ತು .ಈಗ ವಾರ್ಷಿಕ‌ 100 ಕ್ಕೂ ಹೆಚ್ಚು ಠಾಣೆಗಳನ್ನು ನಿರ್ಮಿಸಲಾಗುತ್ತಿದೆ. ಶೇ.35 ರಷ್ಟಿದ್ದ ಖಾಲಿ ಹುದ್ದೆಗಳ ಪ್ರಮಾಣವನ್ನು ಶೇ.12 ಕ್ಕೆ ಇಳಿಕೆ ಮಾಡಲಾಗಿದೆ ಎಂದರು.

ಶೀಘ್ರದಲ್ಲಿಯೇ 900 ಪಿಎಸ್‌ಐಗಳ ನೇಮಕಾತಿ ನಡೆಯಲಿದೆ. ನೇಮಕಾತಿಯಲ್ಲಿ ಶೇ.20 ರಷ್ಟು ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.ಪೊಲೀಸ್ ಇಲಾಖೆಗೆ ಈ ವರ್ಷ ಅತ್ಯಂತ ಸವಾಲಿನದಾಗಿತ್ತು.ಹುಬ್ಬಳ್ಳಿ ಗಲಭೆಯನ್ನು ಇಲ್ಲಿನ ಪೊಲೀಸ್ ಆಯುಕ್ತ ಲಾಭೂರಾಮ್ ನೇತೃತ್ವದ ತಂಡ ಅತ್ಯಂತ ಸಮರ್ಥವಾಗಿ ಹಾಗೂ ಕ್ಷಿಪ್ರವಾಗಿ ತಹಬಂದಿಗೆ ತರುವ ಮೂಲಕ ಇಲ್ಲಿನ ಪೊಲೀಸರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು‌.

ಈಗಾಗಲೇ 545 ಪಿಎಸ್‌ಐ ನೇಮಕಾತಿಯಲ್ಲಿನ ಅಕ್ರಮದಿಂದಾಗಿ ( PSI Recruitment Scam ) ನೇಮಕಾತಿ ರದ್ದಾಗಿದೆ. ಈ ಬೆನ್ನಲ್ಲೇ ಶ್ರೀಘ್ರ ನೇಮಕಾತಿ ಬಗ್ಗೆ ತಿಳಿಸಿದ್ದು, ಅಭ್ಯರ್ಥಿಗಳಿಗೆ ಖುಷಿ ತಂದಿದೆ.

Leave A Reply

Your email address will not be published.