ರಸ್ತೆ ಅಪಘಾತದಲ್ಲಿ ಯುವತಿ ಸಾವು!! ಪೊಲೀಸರ ತನಿಖಾ ದೃಷ್ಟಿ ಬೊಟ್ಟು ಮಾಡಿದ ‘ಆತ’ನೇ ಕಕ್ಕಿದ ಪ್ರಕರಣದ ಸತ್ಯ!!

ತನ್ನ ಪಾಡಿಗೆ ತಾನು ಕೆಲಸಕ್ಕೆ ತೆರಳುತ್ತಾ ಮನೆ ಮಂದಿಯನ್ನು ಖುಷಿಯಿಂದ ನೋಡಿಕೊಳ್ಳತ್ತಾ ಇನ್ನೇನು ಮನೆಯವರು ನೋಡಿದ ವರನನ್ನೇ ಮದುವೆಯಾಗುವ ಕನಸು ಕಂಡಿದ್ದ ಆಕೆ ಪ್ರೀತಿ ನಿರಾಕರಿಸಿದಳೆನ್ನುವ ಒಂದೇ ಒಂದು ಕಾರಣಕ್ಕೆ ಯುವಕನೊಬ್ಬನ ಕೋಪಕ್ಕೆ ತುತ್ತಾಗಿ ರಸ್ತೆ ಮಧ್ಯೆಯೇ ಕೊಲೆಯಾಗಿ ಹೋಗಿದ್ದು, ಪ್ರಕರಣದ ಸತ್ಯಾಂಶ ಹೊರಬರುತ್ತಲೇ ಆರೋಪಿಯ ಬಂಧನವಾಗಿದೆ.

ಹೌದು. ಆಗಸ್ಟ್ 03ರಂದು ಹಾಸನ ಜಿಲ್ಲೆಯ ಹೊರವಲಯದ ಬೂವನಹಳ್ಳಿ ಬಳಿ ಸರಣಿ ಅಪಘಾತದಲ್ಲಿ ಮೃತಪಟ್ಟ ಯುವತಿ ಶರಣ್ಯಾಳ ಸಾವು ಕೊಲೆ ಎಂದು ಬಹಿರಂಗವಾಗಿದ್ದು, ಭಗ್ನ ಪ್ರೇಮಿಯೊಬ್ಬ ಆಕೆಯನ್ನು ಅಪಘಾತ ನಡೆಸಿ ಕೊಲೆ ಮಾಡಿರುವ ಸತ್ಯ ಒಪ್ಪಿಕೊಂಡಿದ್ದಾನೆ.

ಪ್ರಕರಣದ ವಿವರ:ಕೆಲಸದ ನಿಮಿತ್ತ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶರಣ್ಯಾಳಿಗೆ ಆಕೆಯನ್ನು ಪ್ರೀತಿಸಲು ಬಯಸಿದ್ದ ಯುವಕ ಭರತ್ ಎಂಬಾತ ಕಾರಿನಲ್ಲಿ ಡಿಕ್ಕಿ ಹೊಡೆದು, ಬಳಿಕ ಬಸ್ಸು, ಆಟೋ, ಬೈಕ್ ಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಎಸಗಿ ಪರಾರಿಯಾಗಿದ್ದ.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಶರಣ್ಯ ಆಸ್ಪತ್ರೆಯಲ್ಲಿ ಕೊನೆಯುಸಿರಿಳೆದಿದ್ದು, ಆಕೆಯ ಅಣ್ಣ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಠಾಣೆಯಲ್ಲಿ ದೂರು ದಾಖಲಿಸಿದ್ದ.ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಕಾರು ಚಾಲಕ ಭರತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಈ ವೇಳೆ ಆರೋಪಿ ಎಲ್ಲವನ್ನೂ ಬಾಯ್ಬಿಟ್ಟಿದ್ದಾನೆ.

ಆರೋಪಿ ಯುವತಿಯನ್ನು ಪ್ರೀತಿಸುತ್ತಿದ್ದು, ಈತನ ಪ್ರೀತಿಯನ್ನು ಆಕೆ ನಿರಾಕರಿದ್ದಳು ಎನ್ನಲಾಗಿದೆ. ಇದರಿಂದ ಕೆರಳಿದ ಆತ ಆಕೆಯ ಕೊಲೆಗೆ ಸ್ಕೆಚ್ ನಡೆಸಿದ್ದು, ಅದಕ್ಕಾಗಿಯೇ ಮೈಸೂರಿನಿಂದ ಕಾರೊಂದನ್ನು ಬಾಡಿಗೆ ಪಡೆದು ಅದರಲ್ಲಿ ಅಪಘಾತ ನಡೆಸಿ ಕೊಲೆ ನಡೆಸಿ ಪರಾರಿಯಾಗಿದ್ದ.

ಸದ್ಯ ಆರೋಪಿ ಭರತ್ ನನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತ ಮಗಳನ್ನು ಕಳೆದುಕೊಂಡ ಮನೆಮಂದಿಯ ನೋವು ಹೇಳತೀರದಾಗಿದೆ.

Leave A Reply

Your email address will not be published.