ಕೆರೆಗೆ ಹಾರಿ ಸಾವಿನಲ್ಲಿ ಒಂದಾದ ಪ್ರೇಮಿಗಳು!

ಪ್ರೀತಿಗೆ ಮನೆಯವರು ಒಪ್ಪದ ಕಾರಣದಿಂದ ಬೇಸತ್ತ ಪ್ರೇಮಿಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯ ಚನ್ನಗಿರಿ ತಾಲ್ಲೂಕು ಬೆಂಕಿಕೆರೆ ಗ್ರಾಮದಲ್ಲಿ ನಡೆದಿದೆ.

ಚರಣ್‌ ಹಾಗೂ ನಾಗವೇಣಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು ಎಂದು ತಿಳಿದುಬಂದಿದೆ.

ಬುಧವಾರ ಚರಣ್‌ ಮತ್ತು ನಾಗವೇಣಿ ಇಬ್ಬರೂ ಬೈಕ್‌ನಲ್ಲಿ ಬೆಂಕಿಕೆರೆ ಬಳಿಯ ಕೆರೆ ಬಳಿ ಬಂದಿದ್ದರು. ಅಲ್ಲಿಂದ ಬೆಂಗಳೂರಿನಲ್ಲಿರುವ ತಂದೆ ಹಾಗೂ ಸ್ನೇಹಿತರಿಗೆ ಚರಣ್‌ ಕರೆ ಮಾಡಿ, ತಾವಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದ. ಕೂಡಲೇ ಚರಣ್‌ ಅವರ ಅಪ್ಪ, ಚನ್ನಗಿರಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆ ಇಬ್ಬರೂ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದರು. ಕೆರೆ ದಡದಲ್ಲಿ ಬೈಕ್‌ ಹಾಗೂ ಚಪ್ಪಲಿಗಳು ಸಿಕ್ಕಿದ್ದವು. ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಕೆರೆಯಲ್ಲಿ ಯುವಕ ಮತ್ತು ಯುವತಿಯ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ನಡೆಸಿದ್ದು ಇಬ್ಬರ ಮೃತದೇಹಗಳು ಪತ್ತೆಯಾಗಿವೆ.

ಇಬ್ಬರೂ ಬೆಂಗಳೂರು ಮೂಲದವರಾಗಿದ್ದು, ಇವರ ಪ್ರೀತಿಗೆ ಮನೆಯವರು ಒಪ್ಪದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

Leave A Reply

Your email address will not be published.