ಬಾಹುಬಲಿ ಬಿಜ್ಜಳದೇವನಿಗೆ ಶೂಟಿಂಗ್ ವೇಳೆ ಪೆಟ್ಟು | ಆಸ್ಪತ್ರೆಗೆ ದಾಖಲು

ಖ್ಯಾತ ನಟ ನಾಸಿರ್ ಅವರಿಗೆ ಸಿನಿಮಾ ಶೂಟಿಂಗ್ ವೇಳೆ ಪೆಟ್ಟು ಮಾಡಿಕೊಂಡ ಘಟನೆಯೊಂದು ನಡೆದಿದೆ. ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಮೆಟ್ಟಿಲುಗಳ ಮೇಲಿಂದ ಬಿದ್ದು, ಅವರಿಗೆ ಕಣ್ಣಿನ ಭಾಗಕ್ಕೆ ಪೆಟ್ಟಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಈ ವಿಷಯ ತಿಳಿದು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಗೆ ಆತಂಕ ಆಗಿದೆ. ನಾಸಿರ್ ಹೆಲ್ತ್ ಅಪ್‌ಡೇಟ್ ತಿಳಿಯಲು ಎಲ್ಲರೂ ಕಾದಿದ್ದಾರೆ. ಆದಷ್ಟು ಬೇಗ ಅವರು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಲಾಗುತ್ತಿದೆ.

ನಾಸಿರ್ ಅವರು ಬಹುಭಾಷೆಯಲ್ಲಿ ಖ್ಯಾತಿ ಪಡೆದ ನಟ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಸಿನಿಮಾಗಳಲ್ಲಿ ನಟಿಸಿದ ಅನುಭವ ನಾಸಿರ್ ಅವರಿಗಿದೆ. ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಬಹಳ ಬೇಡಿಕೆ ಇರುವ ನಟ. ಬಣ್ಣದ ಲೋಕದಲ್ಲಿ ಅವರು ಹೊಂದಿರುವ ಅನುಭವ ಅಪಾರ. ಮೂಲತಃ ಚೆನ್ನೈನವರಾದ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ.

ವರದಿಗಳ ಪ್ರಕಾರ, ತೆಲಂಗಾಣ ಪೊಲೀಸ್ ಅಕಾಡೆಮಿಯಲ್ಲಿ ನಾಸರ್ ಅವರು ಸಿನಿಮಾ ಶೂಟಿಂಗ್ ಮಾಡುತ್ತಿದ್ದರು. ಅವರ ಜೊತೆ ಸುಹಾಸಿನಿ ಮಣಿರತ್ನಂ, ಮೆಕ್ರೀನ್ ಪೀರ್ಜಾದಾ, ಸಯ್ಯಾಜಿ ಶಿಂಧೆ ಮುಂತಾದ ಕಲಾವಿದರು ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಈ ಸಂದರ್ಭದಲ್ಲಿ ನಾಸಿರ್ ಅವರು ಮೆಟ್ಟಿಲುಗಳ ಮೇಲಿಂದ ಬಿದ್ದಿದ್ದಾರೆ. ನಾಸಿರ್ ಅವರ ಕಣ್ಣಿನ ಭಾಗಕ್ಕೆ ಪೆಟ್ಟಾಗಿದೆ. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ. ಈ ಘಟನೆ ಬಗ್ಗೆ ಚಿತ್ರತಂಡದವರು ಅಥವಾ ನಾಸರ್ ಕುಟುಂಬದವರು ಇನ್ನಷ್ಟೇ ಅಧಿಕೃತ ಹೇಳಿಕೆ ನೀಡಬೇಕಿದೆ.

ಶಸ್ತ್ರ ಚಿಕಿತ್ಸೆ ಬಳಿಕ ನಾಸರ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಆತಂಕಕ್ಕೆ ಒಳಗಾಗಬೇಕಾದ ಅವಶ್ಯಕತೆ ಇಲ್ಲ. ಶೀಘ್ರದಲ್ಲೇ ಹೆಲ್ತ್ ಅಪ್‌ಡೇಟ್ ನೀಡಲಾಗುವುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ‘ಬಾಹುಬಲಿ’ ಸಿನಿಮಾದಲ್ಲಿ ನಾಸರ್ ಮಾಡಿದ ಬಿಜ್ಜಳದೇವನ ಪಾತ್ರ ತುಂಬ ಜನಪ್ರಿಯ ತಂದಿತ್ತು ಎಂದೇ ಹೇಳಬಹುದು. ನಟನೆಯ ಜೊತೆಗೆ ನಾಸಿರ್ ಅವರು ಕೆಲವು ಸಿನಿಮಾಗಳಿಗೆ ಡೈರಕ್ಷನ್ ಕೂಡಾ ಮಾಡಿದ್ದಾರೆ. ನಾಸಿರ್ ಅವರ ನಟನೆಗೆ ಅನೇಕ ಪ್ರಶಸ್ತಿಗಳು ಸಂದಿವೆ. ತಮಿಳುನಾಡು ಸರ್ಕಾರ ನೀಡುವ ರಾಜ್ಯ ಚಲನಚಿತ್ರ ಪ್ರಶಸ್ತಿಗೆ 6 ಬಾರಿ ಅವರು ಭಾಜನರಾಗಿದ್ದಾರೆ. ವಿಲನ್ ಪಾತ್ರಕ್ಕೆ ‘ನಂದಿ ಪ್ರಶಸ್ತಿ’ ಪಡೆದಿದ್ದಾರೆ. ನಿರ್ದೇಶಕನಾಗಿಯೂ ಅವರು ಕೆಲಸ ಮಾಡಿದ್ದಾರೆ.

Leave A Reply

Your email address will not be published.