ತ್ರಿಕೋನ ಪ್ರೇಮಕಥೆ | ಲವ್ ಮಾಡಿ ಇನ್ನೊಬ್ಬನ ಜೊತೆ ಯುವತಿ ಸುತ್ತಾಟ |

ಪ್ರೀತಿ ಕೆಲವರನ್ನು ಬದುಕಿಸುತ್ತೆ, ಕೆಲವರನ್ನು ಮರಣಶಯ್ಯೆಗೆ ಕೊಂಡೊಯ್ಯುತ್ತೆ. ಈ ಪ್ರೀತಿಗೆ ಅಷ್ಟೊಂದು ಶಕ್ತಿ ಇದೆ. ಎಷ್ಟೋ ಕಡೆ ನೀವು ಕೇಳಿರಬಹುದು ಈ ತ್ರಿಕೋನ ಪ್ರೇಮಕಥೆಯನ್ನು. ಸಿನಿಮಾಗಳಲ್ಲಿ ಕೂಡಾ ನೋಡಿರಬಹುದು. ಹಾಗೆನೇ ನಿಜ ಜೀವನದಲ್ಲೂ ನೀವು ಕಂಡಿರಬಹುದು.

ಇತ್ತೀಚಿನ ದಿನಗಳಲ್ಲಿ ಪ್ರೀತಿ-ಪ್ರೇಮದ ಸ್ವರೂಪವೇ ಬದಲಾಗಿದೆ. ತ್ರಿಕೋನ ಪ್ರೇಮಕಥೆಗಳು ಸಾಮಾನ್ಯವಾಗಿಬಿಟ್ಟಿದೆ. ಇಂಥದ್ದೊಂದು ದುರಂತ ಪ್ರೇಮಕಥೆ ಕೊಡಗಿನಲ್ಲಿ ನಡೆದಿದೆ. ಈ ಪ್ರೀತಿ ಪ್ರೇಮದ ಜಂಜಾಟದ ತ್ರಿಕೋನ ಪ್ರೇಮಕಥೆಯಿಂದ ರೊಚ್ಚಿಗೆದ್ದ ಯುವಕನೋರ್ವ ಇಬ್ಬರಿಗೆ ಚಾಕು ಹಾಕಿದ್ದಾನೆ. ಈ ಘಟನೆ ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ನಡೆದಿದೆ. ಗಾಯಗೊಂಡವರು ಕಾಲೇಜು ವಿದ್ಯಾರ್ಥಿಗಳು ಎನ್ನಲಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.

ಎರಡು ಮನಸ್ಸುಗಳನ್ನು ಬೆಸೆಯುವ ಭಾವಬಂಧ ಈ ಪ್ರೀತಿ. ಆದರೆ ಇಲ್ಲೊಂದು ತ್ರಿಕೋನ ಪ್ರೇಮಕಥೆ ನಡೆದರೆ ಏನಾಗಬಹುದು ಆ ಘಟನೆಯೇ ಇಲ್ಲಿ ನಡೆದಿದೆ. ರೊಚ್ಚಿಗೆದ್ದ ಮತ್ತೊಬ್ಬ ಪ್ರೇಮಿ ಯುವತಿಗೆ ಚಾಕು ಇರಿದಿದ್ದಾನೆ.

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕಾವೇರಿ
ನಿಸರ್ಗಧಾಮದಲ್ಲಿ ಈ ಘಟನೆ ನಡೆದಿದೆ. ಯುವಕ ಮತ್ತು
ಯುವತಿ ಇಬ್ಬರು ಕಾವೇರಿ ನಿಸರ್ಗಧಾಮಕ್ಕೆ ಜೋಡಿಯಾಗಿ ಬಂದಿದ್ದಾರೆ. ಇದೇ ವೇಳೆಗೆ ಸ್ಥಳಕ್ಕೆ ಬಂದ ಮತ್ತೊಬ್ಬ ಯುವಕ ಇಬ್ಬರಿಗೂ ಚಾಕು ಇರಿದಿದ್ದಾನೆ. ಪಾರ್ಕ್ ನಲ್ಲಿ ಸಾರ್ವಜನಿಕರ ಮಧ್ಯೆಯೇ ಈ ಘಟನೆ ನಡೆದಿದ್ದು, ಎಲ್ಲರೂ ಭಯಭೀತಗೊಂಡಿದ್ದಾರೆ.

ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಜೋಡಿ ಕಾವೇರಿ ನಿಸರ್ಗಧಾಮಕ್ಕೆ ತೆರಳಿದೆ. ಈ ಪೈಕಿ ಮಾದಾಪಟ್ಟಣ ನಿವಾಸಿ ವಿದ್ಯಾರ್ಥಿನಿ ಪ್ರಿಯಕರ ಎನ್ನಲಾದ ದೊಡ್ಡಹರವೆ ಗ್ರಾಮದ ವಿಜಯ್ (22) ಈ ಜೋಡಿಯನ್ನು ಹಿಂಬಾಲಿಸಿ ಚಾಕುವಿನಿಂದ ಇರಿಯಲು ಮುಂದಾಗಿದ್ದಾನೆ.

ಘಟನೆಯಿಂದ ಯುವತಿಯ ಭುಜ, ಕೈ, ಕುತ್ತಿಗೆ ಭಾಗದಲ್ಲಿ ಗಾಯ ಉಂಟಾಗಿದೆ. ತಡೆಯಲು ಬಂದ ಈಕೆಯ ಸಹಚರ ಹೆಬ್ಬಾಲೆಯ ಪ್ರವೀಣ್ ಎಂಬಾತನಿಗೂಕೂಡ ಎರಡು ಕೈಗಳಿಗೆ ಗಾಯ ಉಂಟಾಗಿದೆ. ಸ್ಥಳದಲ್ಲಿ ಇದ್ದ ಇತರೆ ಪ್ರವಾಸಿಗರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸಕಾಲದಲ್ಲಿ ಮದ್ಯ ಪ್ರವೇಶಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಚಾಕು ಇರಿತಕ್ಕೊಳಗಾಗಿ ಗಾಯಗೊಂಡ ಯುವಕ ಮತ್ತು ಯುವತಿ ಇಬ್ಬರೂ ಇಲ್ಲಿನ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ಎಂಬ ಮಾಹಿತಿ ಲಭ್ಯವಾಗಿದೆ.

ಚಾಕು ಇರಿದ ಯುವಕ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುವ ವ್ಯಕ್ತಿ ಎನ್ನಲಾಗಿದೆ. ಈತ ನಿಸರ್ಗಧಾಮಕ್ಕೆ ಬಂದು ಜೇಬಿನಲ್ಲಿ ಚಾಕು ಇರಿಸಿಕೊಂಡು ಹೋಗುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿಸರ್ಗಧಾಮಲ್ಲಿ ತುಂಬಾ ಪ್ರವಾಸಿಗರು ಓಡಾಡುತ್ತಿದ್ದರೂ ಎಲ್ಲರೆದುರೇ ಯುವಕ ಈ ಕೃತ್ಯ ಎಸಗಿದ್ದಾನೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.