ಕುಟುಂಬ ರಕ್ಷಣೆಗೆ ಮತ್ತೆ ಬಂದ ಜಾರ್ಜ್ ಕುಟ್ಟಿ | ಮೋಹನ್ ಲಾಲ್ ಕೈಗೆ ಕೋಳ, ದೃಶ್ಯಂ ಮೂರಕ್ಕೆ ಅಂತ್ಯ ಹಾಡಲಿದೆಯಾ ಸಿನಿಮಾ!!!

ಮಲಯಾಳಂನ ಎವರ್ ಗ್ರೀನ್ ಹೀರೋ ಮೋಹನ್ ಲಾಲ್ ಸಿನಿ ಕೆರಿಯರ್‌ನಲ್ಲೇ ‘ದೃಶ್ಯಂ’ ಸಿಕ್ಕಾಪಟ್ಟೆ ಸ್ಪೆಷಲ್ ಸಿನಿಮಾ ಎಂದೇ ಹೇಳಬಹುದು. ಅಭಿಮಾನಿಗಳು ಈಗಾಗಲೇ ‘ದೃಶ್ಯಂ’ ಸರಣಿಯ 2 ಸಿನಿಮಾಗಳನ್ನು ಮೆಚ್ಚಿಕೊಂಡಿದ್ದಾರೆ. ಈ ಎರಡೂ ಸಿನಿಮಾಗಳು ಸಿನಿರಸಿಕರ ಮನಸ್ಸನ್ನು ಸೂರೆಗೊಂಡಿತೆಂದೇ ಹೇಳಬಹುದು. 9 ವರ್ಷಗಳ ಹಿಂದೆ ಜಿತು ಜೋಸೆಫ್ ನಿರ್ದೇಶನದ ಕೈಂ ಥಿಲ್ಲರ್ ‘ದೃಶ್ಯಂ’ ಸಿನಿಮಾ ದಾಖಲೆ ಬರೆದಿತ್ತು. ಈಗ ಈ ಸಿನಿಮಾದ ಮೂರನೇ ಭಾಗದ ಬಗ್ಗೆ ಚರ್ಚೆ ಶುರುವಾಗಿದೆ.

ಈ ಫಿಲ್ಮ್ ಬೇರೆ ಭಾಷೆಗಳಿಗೂ ರೀಮೇಕ್ ಆಗಿ ಕೂಡಾ ಗೆದ್ದಿತ್ತು. ಇದರ ಎರಡನೇ ಭಾಗವೂ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದು ವಿಶೇಷ. ಶೀಘ್ರದಲ್ಲೇ ಈ ಸರಣಿಯ ಮೂರನೇ ಸಿನಿಮಾ ಸೆಟ್ಟೇರುವ ಬಗ್ಗೆ ಸುಳಿವು ಸಿಕ್ಕಿದ್ದು, ಈಗಾಗಲೇ ಪೋಸ್ಟರ್‌ವೊಂದು ವೈರಲ್ ಆಗಿದೆ.

ಚಿತ್ರದ ನಾಯಕ ತನ್ನ ಬುದ್ಧಿಮತ್ತೆಯಿಂದ ಪೊಲೀಸರ ಕೈಗೆ ಸಿಗದಂತೆ ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳುವ ತಿರುಳನ್ನು ಹೊಂದಿರುವ ಕಥೆಯೇ ಈ ದೃಶ್ಯಂ. ‘ದೃಶ್ಯಂ’-2 ಕ್ಲೈಮ್ಯಾಕ್ಸ್‌ನಲ್ಲಿ ‘ಈ ಕಥೆ ಇನ್ನು ಮುಗಿದಿಲ್ಲ. ಮತ್ತೆ ಯಾವಾಗಾದರೂ ಪೊಲೀಸರು ಬರಬಹುದು. ಹಳೆಯದನ್ನು ಮತ್ತೆ ಕೆದಕಬಹುದು. ಸದಾ ನನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ನಾನು ಸಿದ್ಧನಾಗಿರುತ್ತೀನಿ’ ಎನ್ನುವ ಡೈಲಾಗ್ ಮೂಲಕ ಮತ್ತೊಂದು ಸೀಕ್ವೆಲ್ ಬಗ್ಗೆ ಸುಳಿವು ಕೊಟ್ಟಿದ್ದರು.

ಈಗ ಸೋಶಿಯಲ್ ಮೀಡಿಯಾದಲ್ಲಿ ‘ದೃಶ್ಯಂ’-3 ಪೋಸ್ಟರ್‌ವೊಂದು ಸಖತ್ ವೈರಲ್ ಆಗಿದೆ. ಅಫೀಷಿಯಲ್ ಆಗಿ ‘ದೃಶ್ಯಂ’-3 ಸಿನಿಮಾ ಘೋಷಣೆ ಆಗಿಲ್ಲ. ಈ ಪೋಸ್ಟರ್‌ನಲ್ಲಿ ಜಾರ್ಜ್ ಕುಟ್ಟಿ ಮೋಹನ್ ಲಾಲ್ ಕೈಗೆ ಕೋಳ ಹಾಕಿಕೊಂಡು ಸೀರಿಯಸ್ ಆಗಿ ನೋಡುತ್ತಿರುವ ಫೊಟೋ ಇದೆ. ಹಾಗಾದರೆ ದೃಶ್ಯಂ 3 ನಲ್ಲಿ ಜಾರ್ಜ್ ಕುಟ್ಟಿ , ಜೈಲು ಸೇರುತ್ತಾನಾ ಅನ್ನುವ ಪ್ರಶ್ನೆಯ ಹುಳವೊಂದನ್ನು ಅಭಿಮಾನಿಗಳಲ್ಲಿ ಬಿಟ್ಟಿದೆ ಈ ಪೋಸ್ಟರ್ ಎಂದೇ ಹೇಳಬಹುದು.

ಸದ್ಯ ವೈರಲ್ ಆಗಿರುವ ಪೋಸ್ಟರ್‌ನಲ್ಲಿ ‘ದೃಶ್ಯಂ’-3 ದಿ ಕನ್‌ಷನ್ ಎಂದು ಬರೆಯಲಾಗಿದೆ. ಕಥೆಗೆ ಮೂರನೇ ಭಾಗದಲ್ಲಿ ಅಂತ್ಯ ಹಾಡುವ ಸಾಧ್ಯತೆ ಇದೆ.
‘ದೃಶ್ಯಂ’ ಸರಣಿ ರೀಮೇಕ್ ಚಿತ್ರಗಳು ಹಿಟ್ ಆಗಿದ್ದವು. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಈ ಸಿನಿಮಾದ ಎಷ್ಟೇ ಸರಣಿ ಭಾಗ ಬಂದರೂ ಜನ ನೋಡುವ ಗ್ಯಾರಂಟಿ ಇತ್ತು. ಹಾಗಾಗಿ ಈ ಸಿನಿಮಾದ ಎರಡು ಭಾಗದಲ್ಲೂ ಹೇಗೇ ಸಸ್ಪೆನ್ಸ್ ಥ್ರಿಲ್ಲರ್ ಮೇಂಟೇನ್ ಮಾಡಿದ್ದರೋ, ದೃಶ್ಯಂ 3 ರಲ್ಲೂ ಅದಕ್ಕಿಂತ ಹೆಚ್ಚು ಸಸ್ಪೆನ್ಸ್ ಇರುವುದಂತೂ ಖಂಡಿತ.

2013ರಲ್ಲಿ ಬಂದಿದ್ದ ಮಲಯಾಳಂನ ‘ದೃಶ್ಯಂ’ ಸಿನಿಮಾದಲ್ಲಿ, ಮೀನಾ ಜಾರ್ಜ್ ಕುಟ್ಟಿ ಮಡದಿ ಪಾತ್ರ ಮಾಡಿದರೆ, ಅನ್ಸಿಬಾ ಹಾಸನ್, ಎಸ್ಕೆಲ್ ಅನಿಲ್ ಮಕ್ಕಳ ಪಾತ್ರದಲ್ಲಿ ನಟಿಸಿದ್ದರು. ಮಲಯಾಳಂ ನಲ್ಲಿ ಸೂಪರ್ ಹಿಟ್ ಆದ ಈ ಸಿನಿಮಾ ನಂತರ ಕನ್ನಡ, ತೆಲುಗು, ಹಿಂದಿ, ತಮಿಳು, ಸಿಂಹಳಿ, ಚೈನೀಸ್ ಹಾಗೂ ಇಂಡೋನೇಷಿಯಾ ಭಾಷೆಗಳಿಗೆ ರಿಮೇಕ್ ಆಗಿತ್ತು. ಕನ್ನಡದಲ್ಲಿ ರವಿಚಂದ್ರನ್, ತಮಿಳಿನಲ್ಲಿ ಕಮಲ್ ಹಾಸನ್, ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್, ಹಿಂದಿಯಲ್ಲಿ ಅಜಯ್ ದೇವಗನ್ ಹೀರೋಗಳಾಗಿ ನಟಿಸಿದ್ದರು. ಕಳೆದ ವರ್ಷ ಹಿಟ್ ಆದ ಸರಣಿಯ ಎರಡನೇ ಸಿನಿಮಾ ಕನ್ನಡ, ತೆಲುಗಿನಲ್ಲಿ ರೀಮೇಕ್ ಆಗಿ ರಿಲೀಸ್ ಆಗಿದ್ದು, ಸೂಪರ್ ಹಿಟ್ ಆಗಿತ್ತು.

Leave A Reply

Your email address will not be published.