Breaking | ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ : ಪ್ರಮುಖ ಆರೋಪಿಗಳು ಪೊಲೀಸ್ ಬಲೆಗೆ

ಮಂಗಳೂರು: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳು ಪೊಲೀಸ್ ಬಲೆಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಪ್ರವೀಣ್ ಹತ್ಯಾ ಪ್ರಕರಣದಲ್ಲಿ ಪೋಲೀಸರು ಮಹತ್ವದ ಸಾಧನೆ ತೋರಿಸಿದ್ದಾರೆ.

ಮೂವರು ಪ್ರಮುಖ ಆರೋಪಿಗಳು ಅಂದರೆ, ಅಂದು ಪ್ರವೀಣ್ ನೆಟ್ಟಾರ್ ಮೇಲೆ ತಲವಾಲ್ ಝಳಪಿಸಿದವರು ಎನ್ನಲಾಗಿದೆ. ಇವರೇ ಕೊಲೆಯಲ್ಲಿ ನೇರವಾಗಿ ಭಾಗಿ ಆದವರು. ಮೂವರು ಪ್ರಮುಖ ಆರೋಪಿಗಳನ್ನು ಬುಧವಾರ ರಾತ್ರಿಯೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇದೀಗ ಶಂಕಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ವರದಿಯಾಗಿದೆ.

ಕೇರಳದಲ್ಲಿ ಮೂವರು ಅರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ರಾತ್ರಿ ಬಂಧಿತರಾಗಿರುವ ಆರೋಪಿಗಳನ್ನು ರಿಝಾಝ್,ಶಿಯಾಬ್,ಬಶೀರ್ ಎಂದು ಗುರುತಿಸಲಾಗಿದೆ. ಸದ್ಯ ಮೂವರು ಆರೋಪಿಗಳನ್ನು ಗೌಪ್ಯಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರವೀಣ್ ಹತ್ಯೆ ಮಾಡಿದ್ದ ಆರೋಪಿಗಳು ಬಳಿಕ ಕೇರಳಕ್ಕೆ ಪರಾರಿಯಾಗಿದ್ದಾರು. ಪ್ರಕರಣದ ತನಿಖೆ ಆರಂಭಿಸಿದ್ದ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸಂಬಂಧ ಮಧ್ಯಾಹ್ನ ದ.ಕ.ಪೊಲೀಸ್ ವರಿಷ್ಠಾಧಿಕಾರಿಯವರ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದು, ಇಲ್ಲಿ ಪ್ರಕರಣದ ಎಲ್ಲಾ ವಿವರಗಳನ್ನು ಎಡಿಜಿಪಿ ನೀಡಲಿದ್ದಾರೆ. ಆರೋಪಿಗಳು ಆಧುನಿಕ ನೆಟ್‌ವರ್ಕ್‌ ಬಳಸಿ ಅವರು ಸುರಕ್ಷಿತ ಸ್ಥಳದತ್ತ ತೆರಳುವಲ್ಲಿ ಹಲವು ಕಾಣದ ಕೈಗಳು ನೆರವು ನೀಡಿರುವುದು ಬೆಳಕಿಗೆ ಬಂದಿದೆ.

ದ.ಕ., ಉಡುಪಿ ಭಾಗದಲ್ಲಿ ಓಡಾಡುತ್ತಿದ್ದ ಆರೋಪಿಗಳು ಪೊಲೀಸರ ತನಿಖೆ ತೀವ್ರಗೊಂಡ ಹಿನ್ನೆಲೆಯಲ್ಲಿ ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು ಮೊದಲಾದ ಭಾಗದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಇದೆ. ಅಡಗುತಾಣದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿ ಸ್ಥಳಕ್ಕೆ ತಲುಪುವ ಕೆಲವು ತಾಸುಗಳ ಮೊದಲು ತಪ್ಪಿಸಿಕೊಳ್ಳುತ್ತಿದ್ದಾರೆ ಎನ್ನುವ ಅಂಶವನ್ನು ಕಾರ್ಯಾಚರಣೆ ತಂಡವೇ ದೃಢಪಡಿಸಿತ್ತು.

ಬೆಳ್ಳಾರೆಯಲ್ಲಿ ಉನ್ನತ ಪೊಲೀಸ್‌ ಅಧಿಕಾರಿಗಳ ಸಭೆ

ಪ್ರವೀಣ್‌ ಹತ್ಯೆಗೆ ಸಂಬಂಧಿಸಿ ಮೂವರು ಹಂತಕರನ್ನು ಶೀಘ್ರ ಬಂಧಿಸುವಂತೆ ಕಾರ್ಯಾಚರಣೆ ತಂಡಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಆಲೋಕ್‌ ಕುಮಾರ್‌ ತಿಳಿಸಿದ್ದರು.ಬೆಳ್ಳಾರೆಯಲ್ಲಿ ವಿವಿಧ ಜಿಲ್ಲೆಗಳ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಮಾಧ್ಯಮ ಜತೆ ಮಾತನಾಡಿದರು. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಹಾಗೂ ರಾಜ್ಯ ಪೊಲೀಸ್‌ ತಂಡವು ತನಿಖೆ ನಡೆಸುತ್ತಿದೆ. ಕಾರ್ಯಾಚರಣೆ ಕುರಿತಂತೆ ಮಹತ್ವದ ಸಭೆ ನಡೆಸಿದ್ದೇವೆ. ಹಂತಕರನ್ನು ಶೀಘ್ರ ಬಂಧಿಸಲಿದ್ದೇವೆ ಎಂದು ತಿಳಿಸಿದ್ದರು.

ಈ ಹಿಂದೆ ಡಿಸಿಐಬಿ ತಂಡದಲ್ಲಿ ಸ್ಥಳೀಯರು ಇದ್ದು ಅಪರಾಧ ಪ್ರಕರಣ ನಡೆದ ವೇಳೆ ಪ್ರಕರಣ ಭೇದಿಸಲು ಸಹಕಾರಿಯಾಗುತ್ತಿತ್ತು. ಆದರೆ ಈಗಿನ ತಂಡದಲ್ಲಿ ಹೊರ ಜಿಲ್ಲೆಯವರು ಇರುವುದರಿಂದ ಅಪರಾಧ ಪ್ರಕರಣ ಭೇದಿಸಲು ತಡವಾಗುತ್ತಿದೆಯ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಆಲೋಕ್‌, ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ. ಈಗ ಇರುವ ಸಿಇಎನ್‌(ಸೆನ್‌) ಅನ್ನು ಇನ್ನಷ್ಟು ಚುರುಕು ಮಾಡಲು ಕ್ರಮ ಕೈಗೊಳ್ಳಲಾಗುವುದು. ಕಾನೂನು ಮತ್ತು ಸುವ್ಯವಸ್ಥೆಗೆ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸೂಕ್ಷ್ಮ ಪ್ರದೇಶ ಎಚ್ಚರಿಕೆಗೆ ಕ್ರಮ
ಪುತ್ತೂರು, ಸುಳ್ಯ, ಬೆಳ್ಳಾರೆ ಜಿಲ್ಲಾ ಕೇಂದ್ರದಿಂದ ದೂರವಿದ್ದು ಇದು ಸೂಕ್ಷ್ಮ ಪ್ರದೇಶವಾಗಿದೆ. ಕೇರಳ ಗಡಿ ಪ್ರದೇಶವು ಹತ್ತಿರದಲ್ಲಿದೆ. ಅರಣ್ಯ ಪ್ರದೇಶವು ಆಗಿರುವುದರಿಂದ ಇಲ್ಲಿ ಬೇರೆಯದ್ದೆ ರೀತಿಯ ಸನ್ನಿವೇಶಗಳಿವೆ. ಇಲ್ಲಿನ ಅಧಿಕಾರಿಗಳು ಸುರಕ್ಷಿತವಾಗಿ ಕೆಲಸ ನಿರ್ವಹಿಸಲು ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ ಎಂದರು.

ಅಧಿಕಾರಿಗಳ ದಂಡು
ಸಭೆಯಲ್ಲಿ ಪೊಲೀಸ್‌ ಅಧಿಕಾರಿಗಳ ದಂಡೇ ಭಾಗವಹಿಸಿತ್ತು. ದ.ಕ., ಹಾಸನ, ಮೈಸೂರು, ಮಡಿಕೇರಿ, ಸೇರಿದಂತೆ ವಿವಿಧ ಜಿಲ್ಲೆಗಳ ಪೊಲೀಸ್‌ ಅಧಿಕಾರಿಗಳು ಭಾಗವಹಿಸಿದ್ದರು. ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ದ.ಕ. ಎಸ್ಪಿ ಹೃಷಿಕೇಶಿ ಭಗವಾನ್‌ ಸೋನಾವಣೆ ಸೇರಿದಂತೆ ಉನ್ನತ ಮಟ್ಟದ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

ಆರೋಪಿ ಕಬೀರ್‌ಗೆ ನ್ಯಾಯಾಂಗ ಬಂಧನ
ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಸುಳ್ಯ ಜಟ್ಟಿಪಳ್ಳದಿಂದ ಬಂಧಿಸಲಾದ ಆರೋಪಿ ಸಿ.ಎ. ಕಬೀರ್‌ನನ್ನು ಬುಧವಾರ ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಸುಳ್ಯ ನ್ಯಾಯಾಲಯ ಆಗಸ್ಟ್‌ 12ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.

Leave A Reply

Your email address will not be published.