‘ ಬಿಜೆಪಿಯನ್ನು ನಂಬಿ ಮತ್ತೆ ಹುಟ್ಟಿಬರಬೇಡ ಮೇಸ್ತ – ಅದೆಲ್ಲ ವೇಸ್ಟಾ ! ‘ ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ ಕೊಲೆ ಆರೋಪಿಗೆ ವಕ್ಫ್ ಬೋರ್ಡ್ ಉಪಾಧ್ಯಕ್ಷ ಪಟ್ಟ !

ಇವತ್ತಿಗೆ ಬಿಜೆಪಿ ಪವಿತ್ರವಾಗಿದೆ. ನೀವು ಕಾರಣ ತಿಳಿದುಕೊಳ್ಳಲೇ ಬೇಕಿದೆ. 5 ವರ್ಷಗಳ ಹಿಂದೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಹಿಂದು ಸಂಘಟನೆ ಕಾರ್ಯಕರ್ತ ಉತ್ತರ ಕನ್ನಡ ಜಿಲ್ಲೆಯ ಪರೇಶ್ ಮೇಸ್ತ ಕೊಲೆ ಪ್ರಕರಣದ ಒಂದನೇ ಆರೋಪಿಯಾಗಿದ್ದ ವ್ಯಕ್ತಿಯನ್ನು ಉತ್ತರ ಕನ್ನಡ ಜಿಲ್ಲಾ ವಕ್ಸ್ ಬೋರ್ಡ್‌ ಸಲಹಾ ಸಮಿತಿಗೆ ನೇಮಕ ಮಾಡಲಾಗಿದೆ. ಕೊಲೆ ಆರೋಪಿಯನ್ನು ಬಿಜೆಪಿ ಆಡಳಿತದಲ್ಲಿ ವಕ್ಸ್ ಕಮಿಟಿಗೆ ನೇಮಕ ಮಾಡಿರುವುದು, ಜಾಲತಾಣದಲ್ಲಿ ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ” ಬಿಜೆಪಿಯನ್ನು ನಂಬಿ ಮತ್ತೆ ಹುಟ್ಟಿ ಬರಬೇಡ ಪರೇಶ್ ಮೇಸ್ತ ” ಎಂದು ಬರೆದಿರುವ ಬರಹ ಜಾಲತಾಣದಲ್ಲಿ ವೈರಲ್ ಆಗಿದೆ.

‘ ಬಿಜೆಪಿಯನ್ನು ನಂಬಿ ಮತ್ತೆ ಹುಟ್ಟಿಬರಬೇಡ ಮೇಸ್ತ – ಅದೆಲ್ಲ ವೇಸ್ಟಾ ! ‘ಎಂದು ಬರೆದಿರುವ ಬರಹ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಆಜಾದ್ ಅಣ್ಣಿಗೇರಿ, ಪರೇಶ್ ಪ್ರಕರಣದ ಒಂದನೇ ಆರೋಪಿಯಾಗಿದ್ದು, ಈತನಿಗೆ ಉತ್ತರ ಕನ್ನಡ ಜಿಲ್ಲಾ ವಕ್ಸ್ ಬೋರ್ಡ್ ಸಲಹಾ ಸಮಿತಿಯ ಉಪಾಧ್ಯಕ್ಷನಾಗಿ ನೇಮಕ ಮಾಡಲಾಗಿದೆ. ಇಂಥವನಿಗೆ ಬಿಜೆಪಿ ಸರಕಾರ ಇರುವಾಗಲೇ ಪಟ್ಟ ದೊರಕಿರುವುದು ಹೇಗೆ ? ಅಲ್ಲದೆ, ಮೆಟಾ ಕೊಲೆ ಆರೋಪಿ ಆರೋಪಿ ಆಜಾದ್ ಅಣ್ಣಿಗೇರಿ ಜಾಮೀನಿನಲ್ಲಿ ಹೊರಗಿರುವವನು. ಅಂತವನಿಗೆ ಅಲ್ಲಿ ಉಪಾಧ್ಯಕ್ಷ ಪಟ್ಟ ಸಿಕ್ಕಿದೆ. ಉತ್ತರ ಕನ್ನಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಐವರು ಬಿಜೆಪಿ ಶಾಸಕರಿದ್ದೂ ಸಂಸದ ಅನಂತ ಕುಮಾರ್ ಹೆಗಡೆ ಇದ್ದಾಗಲೂ ಈ ರೀತಿ ಆಗಿರುವುದಕ್ಕೆ ಕಾರ್ಯಕರ್ತರು ಅಸಹಾಯಕತೆ ತೋಡಿಕೊಂಡಿದ್ದಾರೆ.

ಅಲ್ಲಿನ ಜಿಲ್ಲಾ ವಕ್ಸ್ ಬೋರ್ಡ್ ಸಲಹಾ ಸಮಿತಿಗೆ ನೇಮಕ ಆಗಿರುವ ಬಗ್ಗೆ ಸ್ಥಳೀಯ ಪತ್ರಿಕೆಯಲ್ಲಿ ಆಜಾದ್ ಅಣ್ಣಿಗೇರಿಯನ್ನು ಅಭಿನಂದಿಸಿ ಅಭಿಮಾನಿಗಳು ಜಾಹೀರಾತು ನೀಡಿದ್ದರು. ಜಿಲ್ಲಾ ಕಮಿಟಿಗೆ ನೇಮಕ ಮಾಡಿರುವ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ವಕ್ಸ್ ಬೋರ್ಡ್‌ ರಾಜ್ಯಾಧ್ಯಕ್ಷ ಶಾಫಿ ಸಾದಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಜಿ. ನಾಯ್ಕ ಮಾಜಿ ಶಾಸಕರಾದ ಸತೀಶ್ ಸೈಲ್, ಶಾರದಾ ಶೆಟ್ಟಿ, ಮಾಂಕಾಳ ಎಸ್. ವೈದ್ಯ ಅವರಿಗೆ ಕೃತಜ್ಞತೆಗಳು ಎಂದು ಬರೆದು ಅಭಿನಂದನಾ ಜಾಹೀರಾತು ನೀಡಿದ್ದಾರೆ. ಜಾಹೀರಾತು ಪ್ರಕಟದ ಬಳಿಕ ಅದು ಬಿಜೆಪಿ ಕಾರ್ಯಕರ್ತರ ಗಮನಕ್ಕೆ ಬಂದಿದೆ. ಅಲ್ಲಿಂದ ಆಕ್ರೋಶ ದೊಡ್ಡದಾಗಿ ಏಳುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗಲಭೆ ನಡೆದಿತ್ತು. ಅದು 2017ರ ಡಿಸೆಂಬರ್ 6. ಈ ಸಂದರ್ಭ, ಪರೇಶ್‌ ಮೇಸ್ತ ಎಂಬ 21 ವರ್ಷದ ಹುಡುಗ ನಾಪತ್ತೆಯಾಗಿದ್ದ, ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಪರೇಶ್ ಮೇಸ್ತ ಹಾಗೆ ನಾಪತ್ತೆ ಆದವನು, ನಂತರ ಎರಡು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದ.ಆತನ ಶವವು ಹೊನ್ನಾವರದ ಶನಿ ದೇವಸ್ಥಾನದ ಕೆರೆಯಲ್ಲಿ ಮರುದಿನ ಬಿದ್ದಿತ್ತು. ಯಾರೋ ಕೊಲೆಗೈದು ಕೆರೆಗೆ ಎಸೆದಿದ್ದರು.

ಇದರ ಬಗ್ಗೆ ಹೋರಾಟ ನಡೆದು, ಬಿಜೆಪಿ ನಾಯಕರು ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹ ಮಾಡಿದ್ದರು. ಪ್ರಕರಣ ರಾಜಕೀಯ ಸ್ವರೂಪ ಪಡೆಯುತ್ತಿದ್ದಂತೆ ಆಗಿನ ಗೃಹ ಸಚಿವ ರಾಮಲಿಂಗಾರೆಡ್ಡಿ ಪರೇಶ್ ಮೇಸ್ತ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದರು. ಸಿಬಿಐ ಅಧಿಕಾರಿಗಳು ಕುಮಟಾ, ಹೊನ್ನಾವರಕ್ಕೆ ಬಂದು ತನಿಖೆ ನಡೆಸಿದ್ದರೂ, ಇವತ್ತಿಗೂ ಅದು ತಾರ್ಕಿಕ ಅಂತ್ಯ ಆಗಿಲ್ಲ. ಆರೋಪಿಗಳು ಜಾಮೀನಿನಲ್ಲಿ ಹೊರಬಂದು ರಾಜಾರೋಷ ಮಜಾ ಮಾಡುತ್ತಾ ಇದ್ದಾರೆ. ಕರ್ನಾಟಕದ ರಾಜಾಹುಲಿ ಖ್ಯಾತಿಯ ಶಿಕಾರಿ ವೀರ ಯಡಿಯೂರಪ್ಪನವರ ಊರಿನಲ್ಲೇ ಹರ್ಷನ ಕೊಲೆಯಾಗಿತ್ತು. ಆತನ ಕೊಲೆಗಡುಕರು ಬಿಜೆಪಿ ಸರ್ಕಾರದ ರಾಜಾಶ್ರಯದಲ್ಲಿ ಜೈಲಿನಲ್ಲಿ ಸೆಲ್ಫಿ ತೆಗೆದುಕೊಂಡು, ಕಬಾಬ್ ಚೀಪಿಕೊಂಡು, ಬಿರಿಯಾನಿ ಸವಿಯುತ್ತಾ ಮಜಾ ಮಾಡುತ್ತಿದ್ದಾರೆ. ಬಿಜೆಪಿ ಇವತ್ತಿಗೆ ಪರಮ ಪಾವನವಾಗಿದೆ.

Leave A Reply

Your email address will not be published.