ಉಡುಪಿ: ಶಾಲೆಯಿಂದ ಮನೆಗೆ ಹೊರಟ ವಿದ್ಯಾರ್ಥಿನಿ ಕಾಲುಸಂಕದಿಂದ ಜಾರಿ ಬಿದ್ದ ಘಟನೆ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬೀಜದಮಕ್ಕಿ ಎಂಬಲ್ಲಿ ನಡೆದಿದೆ.
ನೀರುಪಾಲಾದ ಬಾಲಕಿ ಬೊಳಂಬಳ್ಳಿಯ ಮಕ್ಕಿಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ ಸನ್ನಿಧಿ(7).
ಸನ್ನಿಧಿ ಚಪ್ಪರಿಕೆ ಎಂಬಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಶಾಲೆಯಿಂದ ಸಂಜೆ ಮನೆಗೆ ಬರುವಾಗ ಮಾರ್ಗಮಧ್ಯೆ ಕಾಲುಸಂಕ ದಾಟುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ನೀರಿನಲ್ಲಿ ಕೊಚ್ಚಿ ಹೋಗಿರುವ ಬಾಲಕಿಗಾಗಿ ಊರವರ ಹುಡುಕಾಟ ಮುಂದುವರಿದಿದೆ.
ಸನ್ನಿಧಿಯ ಮನೆಗೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರು ತೆರಳಿ ಮನೆಯವರೊಂದಿಗೆ ಮಾತುಕತೆ ನಡೆಸಿದ್ದು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ, ತಹಶೀಲ್ದಾರ್ ಕಿರಣ್ ಗೋರಯ್ಯ ಸೇರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.