ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್‌ ಕುಮಾರ್ ಮುಂದುವರಿಕೆ : ಅಮಿತ್ ಶಾ ಸುಳಿವು

ಬೆಂಗಳೂರು : ಕೇಂದ್ರ ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ “ಸಂಕಲ್ಪ್ ಸೆ ಸಿದ್ಧಿ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ ಶಾ, ಗುರುವಾರ ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರೊಂದಿಗೆ ರಾಜಕೀಯ ಬೆಳವಣಿಗೆ, ಆಡಳಿತ, ಸಂಪುಟ ವಿಸ್ತರಣೆ ಮೊದಲಾದ ವಿಚಾರಗಳ ಕುರಿತು ಚರ್ಚಿಸಿದರು.

ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರ 3 ವರ್ಷಗಳ ಅವಧಿ ಆಗಸ್ಟ್‌ ಅಂತ್ಯಕ್ಕೆ ಮುಗಿಯುತ್ತಿದ್ದು, ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸುವ ಕುರಿತು ಅಮಿತ್‌ ಶಾ ಸುಳಿವು ನೀಡಿದ್ದಾರೆ ಎನ್ನಲಾಗಿದೆ.

ಮುಂದಿನ ಚುನಾವಣೆಗೆ ಸಿದ್ದತೆ ನಡೆಸುವಂತೆ ಮತ್ತು ಸಂಘಟನೆಯ ಬೆಳವಣಿಗೆ ಕುರಿತಂತೆ ನಳಿನ್‌ ಕುಮಾರ್ ಕಟೀಲ್ ಅವರಿಗೆ ಸೂಚಿಸಿರುವುದು ಅವರ ಅಧ್ಯಕ್ಷತೆ ಮುಂದುವರಿಸುವ ನಿಟ್ಟಿನಲ್ಲಿ ಪೂರಕ ಬೆಳವಣಿಗೆ ಎನ್ನಲಾಗಿದೆ.

ನೂತನ ಅಧ್ಯಕ್ಷರನ್ನು ನೇಮಿಸಿದರೂ ರಾಜ್ಯಾದ್ಯಂತ ಪ್ರವಾಸ ಕಷ್ಟ ಸಾಧ್ಯ.ನಳಿನ್ ಕುಮಾರ್ ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈ ಗೊಂಡು ಸಂಘಟನೆ ಮಾಡಿದ್ದು,ಚುನಾವಣೆಗೆ 9 ತಿಂಗಳು ಇರುವಾಗ ರಾಜ್ಯಾಧ್ಯಕ್ಷರ ಬದಲಾವಣೆ ಬೇಡ ಎಂಬ ನಿಲುವಿಗೆ ಬರಲಾಗಿದೆ ಎನ್ನಲಾಗಿದೆ.

Leave A Reply

Your email address will not be published.