ಹೃದಯಕ್ಕೆ ಹಾನಿ ಮಾಡಿದ ಗಾಜು ; ನಿಂತಲ್ಲೇ ಸಾವಿಗೀಡಾದ ಟೆಂಪೋ ಚಾಲಕ

ಬೆಂಗಳೂರು: ಟೆಂಪೋದಲ್ಲಿ ತುಂಬಿದ್ದ ಗಾಜು ಅನ್ಲೋಡ್ ಮಾಡುವಾಗ ಹೃದಯಕ್ಕೆ ಹಾನಿಯಾಗಿ ಚಾಲಕ ನಿಂತಲ್ಲೇ ಸಾವಿಗೀಡಾದ ಹೃದಯವಿದ್ರಾಯಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೃತ ಚಾಲಕ ಅಮೃತಹಳ್ಳಿ ನಿವಾಸಿ ಜಿ. ಶಂಕರ್ (38).

ಮಿನಿ ಟೆಂಪೋದ ಮಾಲೀಕನೂ ಆಗಿದ್ದ ಶಂಕರ್, ಸರಕು ಸಾಗಾಣಿಕೆ ಬಾಡಿಗೆಗೆ ಹೋಗುತ್ತಿದ್ದರು. ಬುಧವಾರ ಬೆಳಗ್ಗೆ 10.45ಕ್ಕೆ ಅಮೃತಹಳ್ಳಿಯ ಗೀತಾ ಗ್ಲಾಸ್ ಆಯಂಡ್ ಹಾರ್ಡ್‌ವೇರ್ ಅಂಗಡಿಯಲ್ಲಿ ಗ್ಲಾಸ್ ಲೋಡ್ ಮಾಡಿಕೊಂಡಿದ್ದರು. ಅಲ್ಲಿಂದ ಸುಬ್ರಹ್ಮಣ್ಯಪುರ ಸಮೀಪದ ವಸಂತಪುರದ ಗಣೇಶ್ ಗ್ಲಾಸ್ ಆಯಂಡ್ ಪ್ಲೈವುಡ್ ಅಂಗಡಿಗೆ ತೆಗೆದುಕೊಂಡು ಬರುತ್ತಿದ್ದರು.

ಮಧ್ಯಾಹ್ನ 2.30ಕ್ಕೆ ವಸಂತಪುರದ ಗಣೇಶ್ ಅಂಗಡಿ ಬಳಿಗೆ ಬಂದಿರುವ ಶಂಕರ್, ರಸ್ತೆಬದಿ ವಾಹನ ನಿಲ್ಲಿಸಿ ಗ್ಲಾಸ್ ಅನ್‌ಲೋಡ್ ಮಾಡಲು ಮುಂದಾಗಿದ್ದರು. ಗ್ಲಾಸ್‌ಗೆ ಕಟ್ಟಿದ್ದ ಹಗ್ಗ ಬಿಚ್ಚಿದಾಗ ಗ್ಲಾಸ್ ಲೋಡ್ ಚಾಲಕನ ಮೇಲೆ ವಾಲಿದೆ. ಭಾರಿ ತೂಕ ಇದ್ದ ಕಾರಣ ತಡೆಯಲು ಸಾಧ್ಯವಾಗದೆ ಇದ್ದಾಗ ಗ್ಲಾಸ್​ಗಳು ಎದೆಯ ಮೇಲೆ ಬಿದ್ದಿವೆ.

ಈ ವೇಳೆ ತಕ್ಷಣ ಸ್ಥಳೀಯರು ಸಹಾಯಕ್ಕೆ ಬಂದು ಗ್ಲಾಸ್ ತೆರವು ಮಾಡಿ ಶಂಕರ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಎದೆಯ ಮೇಲೆ ಹೆಚ್ಚು ಭಾರ ಬಿದ್ದ ಕಾರಣ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಚಾಲಕನ ಬಳಿ ಸಿಕ್ಕ ದಾಖಲೆಗಳ ಆಧಾರದ ಮೇಲೆ ವಿಳಾಸ, ಹೆಸರು ಪತ್ತೆಹಚ್ಚಲಾಗಿದೆ. ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಾಲಕನ ರಕ್ಷಣಾ ಕಾರ್ಯಾಚರಣೆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

Leave A Reply

Your email address will not be published.