ಮೂರು ಕೊಲೆಗಳ ಹಿಂದೆ ಯಾವ ಸಂಘಟನೆ ಇದ್ದರೂ ಬಿಡುವುದಿಲ್ಲ-ಪ್ರವೀಣ್ ಸೂದ್

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮೂರು ಹತ್ಯೆಗಳಲ್ಲಿ ಭಾಗಿಯಾದ ಆರೋಪಿಗಳು ಯಾವುದೇ ಸಂಘಟನೆಯವರಾಗಿರಲಿ ಅವರ ವಿರುದ್ಧ ನಿರ್ದಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ವ್ಯಕ್ತಿ, ಸಂಘಟನೆ, ಸಿದ್ಧಾಂತದವರು ಈ ಕೃತ್ಯಗಳ ಹಿಂದಿದ್ದರೂ ಬಿಡುವುದಿಲ್ಲ ಎಂದು ಡಿಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹತ್ಯೆಗಳ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಯಾವುದೇ ಕೊಲೆ ನಡೆದರೂ ಸತ್ತವರು ಹಿಂದೂಗಳೋ, ಮುಸ್ಲಿಮರೋ ಅಥವಾ ಕ್ರೈಸ್ತರೋ ಎಂದು ನೋಡುವುದಿಲ್ಲ. ಅದನ್ನು ನಡೆಸಿದವರ ಧರ್ಮವನ್ನೂ ನೋಡುವುದಿಲ್ಲ. ಮೂರು ಪ್ರಕರಣಗಳ ಆರೋಪಿಗಳ ಶೀಘ್ರ ಬಂಧನವಾಗುವ ನಿರೀಕ್ಷೆ ಇದೆ ಎಂದರು. ಅಪರಾಧದ ಕುರಿತು ಮಾಹಿತಿ ಇದ್ದವರು ಪೊಲೀಸರ ಜೊತೆ ಹಂಚಿಕೊಳ್ಳಬಹುದು. ಮಾಹಿತಿ ಗೊತ್ತಿದ್ದೂ ಪೊಲೀಸರ ಜೊತೆ ಹಂಚಿಕೊಳ್ಳದಿದ್ದರೇ ಅವರ ಕೈವಾಡವೂ ಇದೆ ಎಂದು ಭಾವಿಸಬೇಕಾಗುತ್ತದೆ ಎಂದ ಅವರು ಗಡಿ ಪ್ರದೇಶದಲ್ಲಿ ತಪಾಸಣೆ ಹೆಚ್ಚಿಸಲಾಗಿದೆ. ದ.ಕ ಜಿಲ್ಲೆಯಲ್ಲಿ ಪೊಲೀಸರ ಬಲ ಹೆಚ್ಚಿಸಲು ಕೋರಿದ್ದೇನೆ ಎಂದರು.

ಒಟ್ಟು 11 ಮಂದಿ ಬಂಧನ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ 3 ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಸೂದ್ ಕೊಲೆ ಪ್ರಕರಣದಲ್ಲಿ 8 ಮಂದಿಯನ್ನು ಬಂಧಿಸಲಾಗಿದೆ. ಪ್ರವೀಣ್ ಕೊಲೆ ಪ್ರಕರಣದಲ್ಲಿ ಇಬ್ಬರ ಬಂಧನವಾಗಿದೆ. ಫಾಝಿಲ್ ಪ್ರಕರಣದಲ್ಲಿ ಒಬ್ಬರನ್ನು ಬಂಧಿಸಲಾಗಿದ್ದು, ಅವರು ನೀಡಿದ ಸುಳಿವು ಇತರ ಅಪರಾಧಿಗಳ ಪತ್ತೆಗೆ ನೆರವಾಗಲಿದೆ’ ಎಂದರು.

Leave A Reply

Your email address will not be published.