ಕರಾವಳಿಯಾದ್ಯಂತ ವರುಣನ ಆರ್ಭಟ,ಅಡಕೆಗೆ ಕೊಳೆರೋಗ | ಕಂಗಾಲಾದ ಕೃಷಿಕರು

ಕರಾವಳಿಯಾದ್ಯಂತ ಸುರಿದ ಭಾರೀ ಮಳೆಗೆ ರೈತರು, ಕೃಷಿಕರು ಕಂಗಾಲಾಗಿದ್ದಾರೆ. ಅದರಲ್ಲೂ ದ.ಕ.ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆ ಭಾರೀ ಮಳೆಯಿಂದ ತತ್ತರಿಸಿದ್ದು, ಕೊಳೆ ರೋಗ ಹರಡುತ್ತಿದೆ. ಇದು ಅಕ್ಷರಶಃ ಕೃಷಿಕರು ಕಂಗಾಲಾಗುವ ಪರಿಸ್ಥಿತಿಯನ್ನು ಸೃಷ್ಟಿಸಿದೆ.

ಶಿಲೀಂಧ್ರಗಳ ಮೂಲಕ ಹರಡುವ ಈ ಕೊಳೆರೋಗ ಆರಂಭವಾದರೆ ನಿಯಂತ್ರಣ ಬಹಳ ಕಷ್ಟ. ಹೀಗಾಗಿ ಈ ಭಾರೀ ಮಳೆ ಹಾಗೂ ಇಂತಹ ಬಿಸಿಲಿನ ವಾತಾವರಣ ನಿಜಕ್ಕೂ ಅಪಾಯ ಎಂದೇ ಹೇಳಬಹುದು. ಆದರೂ ಕಳೆದ ಒಂದು ವಾರದಿಂದ ವಿರಾಮ ನೀಡಿದ ಮಳೆರಾಯ ಈಗ ಮತ್ತೆ ಎಂಟ್ರಿ ಕೊಟ್ಟಿದ್ದು ಔಷಧ ಸಿಂಪಡನೆಗೆ ಅಡ್ಡಿಯಾಗಿದೆ ಎಂದೇ ಹೇಳಬಹುದು.

ಬೆಳ್ತಂಗಡಿ ತಾಲೂಕಿನ ಶಿಬಾಜೆ, ಶಿಶಿಲ, ಹತ್ಯಡ್ಕ, ನಿಡ್ಲೆ, ಕೊಕ್ಕಡ, ಕಲ್ಮಂಜ, ಮುಂಡಾಜೆ, ಕಡಿರುದ್ಯಾವರ ಮೊದಲಾದ ಗ್ರಾಮಗಳಲ್ಲಿ ಕೊಳೆ ರೋಗದ ಅಡಕೆ ಉದುರುತ್ತಿದ್ದು ಕೃಷಿಕರು ಇದರ ನಿಯಂತ್ರಣಕ್ಕೆ ಮಾಡುವುದು ಹೇಗೆ ಎಂಬ ಪರಿಸ್ಥಿತಿಯಲ್ಲಿ ಇದ್ದಾರೆ.

ಮೇ ಮಧ್ಯ ಭಾಗದಿಂದ ಜೂನ್ ತಿಂಗಳ ಆರಂಭದಲ್ಲಿ ಸಣ್ಣ ಅಡಕೆ ಬೆಳೆಯಲು ಆರಂಭವಾಗುತ್ತದೆ. ಈ ಸಮಯದಲ್ಲಿ ಅಡಕೆಗೆ ಬೋರ್ಡೋ ಮಿಶ್ರಣ ಸಿಂಪಡಣೆ ಅತ್ಯಗತ್ಯ. ಅನಂತರ ಒಂದು ತಿಂಗಳು ಅಥವಾ 40 ದಿನಗಳಲ್ಲಿ ಇನ್ನೊಂದು ಸಿಂಪಡಣೆ ಮಾಡಬೇಕು. ಆದರೆ ಈ ಬಾರಿ ಜೂನ್ ತಿಂಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿತ್ತು. ಈ ಸಮಯ ಹಾಗೂ ಮೇ ಅಂತ್ಯದೊಳಗೆ ಪ್ರಥಮ ಸಿಂಪಡಣೆ ಮಾಡಿದವರು ಜುಲೈ ಅಂತ್ಯದೊಳಗೆ ಎರಡನೇ ಸಿಂಪಡಣೆ ಮಾಡಲೇಬೇಕು. ಆದರೆ ಜುಲೈ ತಿಂಗಳಲ್ಲಿ ಎಡೆಬಿಡದೆ ಸುರಿದ ಮಳೆಯಿಂದ ಅನೇಕ ಕಡೆ ಅಡಕೆ ತೋಟಗಳಲ್ಲಿ ದ್ವಿತೀಯ ಹಂತದ ಸಿಂಪಡಣೆಗೆ ಅವಕಾಶ ಸಿಕ್ಕಿಲ್ಲ.

ಅಷ್ಟು ಮಾತ್ರವಲ್ಲದೇ, ಅಡಕೆ ಬೆಳೆಗೆ ಒಂದು ಕಡೆ ಮಳೆ ತೊಂದರೆ ನೀಡುತ್ತಿದ್ದರೆ, ಇನ್ನೊಂದು ಕಡೆ ಔಷಧ ಸಿಂಪಡಿಸಲು ಕಾರ್ಮಿಕರ ಕೊರತೆ ಹೆಚ್ಚೇ ಇದೆ. ಅಡಕೆ ಔಷಧ ಸಿಂಪಡಣೆಗೆ ಯಂತ್ರಗಳ ಆವಿಷ್ಕಾರವಾಗಿದ್ದರೂ ಇವುಗಳ ಅಭಿವೃದ್ಧಿ ಹೊಂದಿದರೆ ಮಾತ್ರ ಪರಿಣಾಮಕಾರಿಯಾಗಬಹುದು.

Leave A Reply

Your email address will not be published.