ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ನನ್ನು ಭಾರತ ದೇಶದಿಂದ ಓಡಿಸುವೆ – ಬಿಜೆಪಿ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ

ಬಾಲಿವುಡ್ ನ ಸ್ಟಾರ್ ನಟ ಹಾಗೂ ನಿರ್ದೇಶಕ ಅಕ್ಷಯ್ ಕುಮಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನೂರಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಆದರೆ, ಇದೀಗ ಖ್ಯಾತ ನಟನ ವಿರುದ್ಧ ಬಿಜೆಪಿ ಪಕ್ಷದ ಫಯರ್ ಬ್ರ್ಯಾಂಡ್ ಎಂದೇ ಖ್ಯಾತರಾಗಿರುವ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ.

ಹೌದು. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರನ್ನು ಈ ದೇಶದಿಂದ ಓಡಿಸುವಂತೆ ಮಾಡುವೆ ಎಂದು ಗುಡುಗಿದ್ದಾರೆ. ಇವರು ಈ ದೇಶದವರಲ್ಲ ,ಅವರನ್ನ ಈ ದೇಶದಿಂದ ಓಡಿಸುವಂತೆ ಮಾಡುವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಷ್ಟಕ್ಕೂ, ಬಿಜೆಪಿ ಜೊತೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿರುವ ಅಕ್ಷಯ್ ಕುಮಾರ್ ಮೇಲೆ ಸುಬ್ರಹ್ಮಣಿಯನ್ ಸ್ವಾಮಿ ಮುಗಿ ಬಿದ್ದಿರುವುದಕ್ಕೆ ಕಾರಣವಾಗಿದೆ ಅಕ್ಷಯ್ ಕುಮಾರ್ ಅವರ ಸಿನಿಮಾ.

ಅಕ್ಷಯ್ ಕುಮಾರ್ ಸದ್ಯ ಸೇತು ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಬಹುತೇಕ ಶೂಟಿಂಗ್ ಕೂಡ ಮುಗಿದಿದ್ದು, ಇನ್ನೇನು ಅದು ತೆರೆಗೆ ಬರಬೇಕು. ಈ ಸಿನಿಮಾದಲ್ಲಿ ‘ರಾಮ ಸೇತು’ ಕುರಿತು ಚಿತ್ರಣವಿದ್ದು, ಈ ಕುರಿತು ತಪ್ಪು ಮಾಹಿತಿಯನ್ನು ಕೊಡುವುದಕ್ಕೆ ಚಿತ್ರತಂಡ ಹೊರಟಿದೆಯೆಂದು ಮಾಜಿ ಸಂಸದ ಗರಂ ಆಗಿದ್ದಾರೆ.

ಅಲ್ಲದೇ, ಸಿನಿಮಾದ ಪೋಸ್ಟರ್ ನಲ್ಲಿ ಸುಪ್ರೀಂ ಕೋರ್ಟ್ ನ 2007ರ ಆದೇಶದ ಪ್ರತಿಯನ್ನು ಬಳಸಿಕೊಳ್ಳಲಾಗಿದ್ದು, ಅನುಮತಿ ಇಲ್ಲದೇ ಅದನ್ನೂ ಬಳಸಿಕೊಂಡಿದ್ದಕ್ಕೆ ಸ್ವಾಮಿ ಅವರು ಪ್ರಕರಣ ಹೂಡಿದ್ದಾರೆ. ಅಷ್ಟೇ ಅಲ್ಲದೆ, ಈ ಕುರಿತು ಟ್ವಿಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ‘ಈ ಸಿನಿಮಾದ ಹಕ್ಕುಗಳಿಗೆ ಸಂಬಂಧಿಸಿದಂತೆ ನಾನು ಅಕ್ಷಯ್ ಕುಮಾರ್ ಮತ್ತು  ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಕಾಮ್ರಾ ಮೀಡಿಯಾ ಮೇಲೆಯೂ ಪ್ರಕರಣ ದಾಖಲಿಸಲು ಸಿದ್ಧತೆ ಮಾಡಿಕೊಂಡಿದ್ದೇನೆ. ರಾಮ ಸೇತುವೆ ಬಗ್ಗೆ ತಪ್ಪು ಮಾಹಿತಿಯನ್ನು ಕೊಡುವುದಕ್ಕೆ ನಾನು ಬಿಡುವುದಿಲ್ಲ’ ಎಂದಿದ್ದಾರೆ.

ಅಲ್ಲದೆ, ‘ಅಕ್ಷಯ್ ಕುಮಾರ್ ಭಾರತದ ಪ್ರಜೆಯಲ್ಲ, ಅವರು ಕೆನಡಾದ ಪೌರತ್ವ ಹೊಂದಿದ್ದಾರೆ. ಹಾಗಾಗಿ ಅವರಿಗೆ ಇತಿಹಾಸದ ಅರಿವಿಲ್ಲ. ಅವರನ್ನು ದೇಶದಿಂದ ಓಡಿಸುವಂತೆ ಮಾಡುವೆ. ಅವರು ಈ ದೇಶದವರು ಅಲ್ಲ’ ಎಂದು ಟ್ವಿಟ್ ಮಾಡಿದ್ದಾರೆ.

Leave A Reply

Your email address will not be published.