ಬೆಳ್ತಂಗಡಿ : ಬಾಲಕಿಗೆ ಲೈಂಗಿಕ ಕಿರುಕುಳ – ಆರೋಪಿಗೆ ನ್ಯಾಯಾಂಗ ಬಂಧನ

ಬೆಳ್ತಂಗಡಿ : ಯುವಕನೋರ್ವ ಅಪ್ರಾಪ್ತ ವಯಸ್ಸಿನ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ್ದು, ಆರೋಪಿ ಈಗ ಪೊಲೀಸರ ವಶವಾದ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ.

ಆರೋಪಿ ಮಹಮ್ಮದ್‌ ಸಿರಾಜ್‌ (28) ಎಂದು ತಿಳಿದು ಬಂದಿದೆ.

ಪುಂಜಾಲಕಟ್ಟೆ ಸರಕಾರಿ ಶಾಲಾ ಮೈದಾನದಲ್ಲಿ ಸಂಜೆ ಶಾಲೆ ಬಿಡುವ ಹೊತ್ತಿನಲ್ಲಿ ಆರೋಪಿ ಮದ್ಯ ಸೇವಿಸಿ, ನಿಂತಿದ್ದ ಶಾಲಾ ಬಸ್‌ನ ಒಳಗಡೆ ಅಕ್ರಮವಾಗಿ ಪ್ರವೇಶಿಸಿದ್ದಾನೆ. ಈ ವೇಳೆ ಆರೋಪಿ ಬಾಲಕಿ ಜತೆ ಅಸಭ್ಯವಾಗಿ ವರ್ತಿಸಿದ್ದು, ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.

ಮರುದಿನ ವಿದ್ಯಾರ್ಥಿನಿ ಶಾಲೆಗೆ ಹೋಗಲು ನಿರಾಕರಿಸಿದಾಗ, ಹೆತ್ತವರು ವಿಚಾರಿಸಿದ್ದಾರೆ. ಈ ವೇಳೆ ಸಂಜೆ ನಡೆದ ಘಟನೆಯನ್ನು ತಿಳಿಸಿದ್ದಾಳೆ. ಬಳಿಕ ಹೆತ್ತವರು ಶಾಲೆಗೆ ಬಂದು ಬಸ್‌ ಚಾಲಕ ಇಸುಬು ಎನ್ನುವಾತನಲ್ಲಿ ವಿಚಾರಿಸಿದ್ದಾರೆ.

ಶಾಲಾ ಮುಖ್ಯ ಶಿಕ್ಷಕರಲ್ಲಿ ಈ ಬಗ್ಗೆ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಪುಂಜಾಲಕಟ್ಟೆ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

Leave A Reply

Your email address will not be published.