ಪತಿ ಪಕ್ಕದಲ್ಲೇ ಬೀಚ್ ನಲ್ಲಿ ಕುಳಿತಿದ್ದ ಪತ್ನಿ ಮಿಸ್ಸಿಂಗ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಪತಿ ಮೊಬೈಲ್ ನೋಡುತ್ತಿದ್ದಾಗ ಪಕ್ಕದಲ್ಲೇ ಇದ್ದ ಪತ್ನಿ ನಾಪತ್ತೆಯಾಗಿರುವ ಘಟನೆ ಸೋಮವಾರ ನಡೆದಿತ್ತು.ಇದೀಗ, ಬೀಚ್​​ನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ ಎಂದು ಭಾವಿಸಲಾಗಿದ್ದ ಮಹಿಳೆ ಎರಡು ದಿನಗಳ ನಂತರ ಯುವಕನೊಬ್ಬನ ಜೊತೆ ಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಶ್ರೀನಿವಾಸ್ – ಸಾಯಿ ಪ್ರಿಯಾ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಹೀಗಾಗಿ, 2ನೇ ಮದುವೆ ವಾರ್ಷಿಕ ದಿನವಾದ್ದರಿಂದ ವಿಶಾಖಪಟ್ಟಣ ಬೀಚ್​ಗೆ ಹೋಗಿದ್ದರು. ಬೆಳಗ್ಗೆ ಸಿಂಹಾಚಲಂ ದೇವಸ್ಥಾನಕ್ಕೆ ಹೋಗಿ, ಮಧ್ಯಾಹ್ನದ ವೇಳೆಗೆ ಮನೆಗೆ ಹೋದೆ. ಅಲ್ಲಿಯೇ ಊಟ ಮಾಡಿ ಸಂಜೆ ಬೀಚ್‌ಗೆ ಹೋಗಿದ್ದರು. ಇಬ್ಬರೂ ಸಮುದ್ರತೀರದಲ್ಲಿ ಫೋಟೋ, ಸೆಲ್ಫೀಗಳನ್ನು ತೆಗೆಯುತ್ತಾ ದಂಪತಿ ಕಾಲ ಕಳೆದಿದ್ದಾರೆ. ಆದರೆ ಶ್ರೀನಿವಾಸ್ ತಮ್ಮ ಮೊಬೈಲ್​ ಫೋನ್ ನಲ್ಲಿ ಮೆಸೇಜ್​​ಗಳನ್ನು ಪರಿಶೀಲಿಸುತ್ತಿದ್ದಾಗ ಪಕ್ಕದಲ್ಲಿಯೇ ಇದ್ದ ಸಾಯಿಪ್ರಿಯಾ ನಾಪತ್ತೆಯಾಗಿದ್ದಾರೆ. ಪತ್ನಿ ಕಾಣದಿದ್ದಾಗ ಆತಂಕಗೊಂಡ ಪತಿ ಸುತ್ತಮುತ್ತ ಜಾಲಾಡಿದ್ದಾರೆ. ಯಾವುದೇ ಪ್ರಯೋಜನವಾಗದೆ, ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಸಾಯಿಪ್ರಿಯಾ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪತಿ ಶ್ರೀನಿವಾಸ ರಾವ್ ಪೊಲೀಸರಿಗೆ ದೂರು ನೀಡಿದ್ದರು. ಅಂತೆಯೇ, ಪೊಲೀಸರು, ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ಸ್ ಸಿಬ್ಬಂದಿ ಎರಡು ದಿನಗಳ ಕಾಲ ಸ್ಪೀಡ್ ಬೋಟ್​ಗಳು ಹಾಗೂ ನೌಕಾಪಡೆಯ ಹೆಲಿಕಾಪ್ಟರ್ ಬಳಸಿ ಶೋಧ ಕಾರ್ಯದಲ್ಲಿ ತೊಡಗಿದ್ದರು. ಎರಡು ದಿನಗಳ ಕಳೆದರೂ ಸಾಯಿ ಪ್ರಿಯಾ ಪತ್ತೆಯಾಗದ ಕಾರಣ ನಾಪತ್ತೆಯಾಗಿದ್ದಾರೆ ಅಥವಾ ಇನ್ನೇನಾದರೂ ಸಂಭವಿಸಿದೆಯೇ ಎಂಬ ಅನುಮಾನಗಳು ಕೂಡ ಹುಟ್ಟಿಕೊಂಡಿದ್ದವು. ಆದರೆ, ಇದೀಗ ಬೀಚ್ ನಲ್ಲಿ ಕೊಚ್ಚಿಹೋಗಿದ್ದಾರೆ ಎಂಬ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಾಯಿಪ್ರಿಯಾ ನೆಲ್ಲೂರಿನಲ್ಲಿ ಬೇರೆ ಯುವಕನೊಂದಿಗೆ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹೌದು. ಇಂದು ಆಕೆ ನೆಲ್ಲೂರಿನಲ್ಲಿ ಯುವಕನೊಬ್ಬನ ಜೊತೆ ಇದ್ದಾಳೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ಅವರ ಫೋಟೋಗಳು ಮತ್ತು ವಿಡಿಯೋಗಳು ಅಧಿಕೃತವಾಗಿ ನಮಗೆ ಇನ್ನೂ ಬಂದಿಲ್ಲ ಎಂದು ವಿಶಾಖಪಟ್ಟಣಂ ಉಪಮೇಯರ್ ಶ್ರೀಧರ್ ತಿಳಿಸಿದ್ದಾರೆ. ಇನ್ನು, ಪತಿ – ಪತ್ನಿಯರ ನಡುವೆ ಕೆಲ ಕಲಹ ಇತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.

ಯುವಕನ ಜೊತೆ ನೆಲ್ಲೂರಿಗೆ ಹೋಗಿದ್ದಾಳೆ ಎಂದೂ ಹೇಳಲಾಗುತ್ತಿರುವ ಮಾಹಿತಿಯಂತೆ ಪೊಲೀಸರು ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆಕೆ ನಿಜವಾಗ್ಲೂ ಯುವಕನ ಜೊತೆಗೆ ತೆರಳಿದ್ದಾಳಾ? ಎಂಬುದು ತನಿಖೆ ಬಳಿಕ ಹೊರಬೀಳಲಿದೆ.

Leave A Reply

Your email address will not be published.