ಪ್ರವೀಣ್ ನೆಟ್ಟಾರು ಹತ್ಯೆ : ಜು.28 ಮಧ್ಯ ರಾತ್ರಿಯವರೆಗೆ 144 ಸೆಕ್ಷನ್

ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನಲೆ ಪರಿಸ್ಥಿತಿ ಬಿಗಡಾಯಿಸಿದ್ದ,ಪರಿಣಾಮ ಪುತ್ತೂರಿನಾದ್ಯಂತ 144 ಸೆಕ್ಷನ್ ಜಾರಿಯಾಗಿದ್ದು,ಜು.28ರ ಮಧ್ಯರಾತ್ರಿಯವರೆಗೆ ಜಾರಿಯಲ್ಲಿದೆ.

ಜನೋತ್ಸವ ರದ್ದು

ಪ್ರವೀಣ್ ಹತ್ಯೆಯಾಗುತ್ತಿದ್ದಂತೆ ರಾಜ್ಯಾದ್ಯಂತ ಭಾರಿ ಸಂಚಲನ ಉಂಟಾಗಿದ್ದು, ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಬಿಜೆಪಿ ಯುವ ಪದಾಧಿಕಾರಿಗಳ ರಾಜೀನಾಮೆ ಚಳವಳಿ ಆರಂಭವಾಯಿತು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಧ್ಯರಾತ್ರಿಯಲ್ಲಿ ಸುದ್ದಿಗೋಷ್ಠಿ ಕರೆದರು. ತಡರಾತ್ರಿಯಲ್ಲಿ ಕರೆದಿದ್ದಕ್ಕೆ ಕ್ಷಮೆ ಕೋರುತ್ತಲೇ ಸಿಎಂ ಮಾತು ಆರಂಭಿಸಿದರು.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಹೀಗೆ ಮಧ್ಯರಾತ್ರಿಯಲ್ಲಿ ಯಾವ ಮುಖ್ಯಮಂತ್ರಿ ಕೂಡ ಸುದ್ದಿಗೋಷ್ಠಿ ನಡೆಸಿಲ್ಲ. ಹೀಗಾಗಿ ಈ ಸುದ್ದಿಗೋಷ್ಠಿ ಕರೆಯುತ್ತಿದ್ದಂತೆ ರಾಜ್ಯದ ರಾಜಕೀಯ ವಲಯದಲ್ಲಿ, ಬಿಜೆಪಿ ಕಾರ್ಯಕರ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಭಾರಿ ಕುತೂಹಲ ಸೃಷ್ಟಿಯಾಗಿತ್ತು.

ಒಂದು ಕಡೆ ಕಾರ್ಯಕರ್ತನ ಕೊಲೆಯಾಗಿದೆ. ಇನ್ನೊಂದೆಡೆ ನನ್ನ ಸರ್ಕಾರಕ್ಕೆ ನಾಳೆ ಒಂದು ವರ್ಷ, ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ತುಂಬಲಿದೆ. ಜನೋತ್ಸವ ನಡೆಸಲಿದ್ದುದರ ಉದ್ದೇಶ ಜನಪರವಾಗಿ ಏನು ಕೆಲಸ ಮಾಡಿದ್ದೇವೆ ಅದನ್ನು ಜನತೆಗೆ ತಿಳಿಸುವುದಾಗಿತ್ತು. ಆದರೆ ಈ ಸಂದರ್ಭದಲ್ಲಿ ಜನೋತ್ಸವ ನಡೆಸದಿರಲು ತೀರ್ಮಾನಿಸಿದ್ದೇವೆ ಎಂದು ಸಿಎಂ ಹೇಳಿದರು.

Leave A Reply

Your email address will not be published.