ವಾರದಲ್ಲಿ ಮೂರು ದಿನ ಮಂಗಳೂರು -ಬೆಂಗಳೂರು ವಿಶೇಷ ರಾತ್ರಿ ರೈಲು ಸೇವೆ ಆರಂಭ

ಮಂಗಳೂರು: ವಾರದಲ್ಲಿ ಮೂರು ದಿನ ಮಂಗಳೂರು -ಬೆಂಗಳೂರು ವಿಶೇಷ ರಾತ್ರಿ ರೈಲು ಸೇವೆಯನ್ನು ಆರಂಭಿಸಲಿದ್ದು, ಹೆದ್ದಾರಿ ಸಂಚಾರ ದುಸ್ತರವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದೆ.

ಜುಲೈ 27 ರಿಂದ ಆಗಸ್ಟ್ 31 ರವರೆಗೆ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಮಂಗಳೂರಿನಿಂದ ಬೆಂಗಳೂರು ನಗರಕ್ಕೆ ರೈಲು ಸಂಚರಿಸಲಿದೆ.

ಭಾರಿ ಮಳೆಯ ಕಾರಣ ಬೆಂಗಳೂರು -ಮಂಗಳೂರು ಹೆದ್ದಾರಿ ಸಂಚಾರ ದುಸ್ತಿರವಾಗಿರುವ ಹಿನ್ನೆಲೆಯಲ್ಲಿ, ರೈಲು ಸಂಚಾರಕ್ಕೆ ಬೇಡಿಕೆ ಬಂದಿದೆ.ಹೀಗಾಗಿ ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಅನುಕೂಲವಾಗುವಂತೆ, ಮಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ಸಿಟಿ ಜಂಕ್ಷನ್ ನಡುವೆ ಮೈಸೂರು ಮಾರ್ಗದಲ್ಲಿ ಮೂರು ದಿನ ವಿಶೇಷ ರಾತ್ರಿ ರೈಲು ಸೇವೆಗೆ ರೈಲ್ವೆ ಮಂಡಳಿಯಿಂದ ಅನುಮೋದನೆ ನೀಡಲಾಗಿದೆ.

ನಿರಂತರ ಮಳೆ ಮತ್ತು ಭೂ ಕುಸಿತ ಪರಿಣಾಮ ರಸ್ತೆ ಸಂಪರ್ಕ ಮಾರ್ಗ ಸಮಸ್ಯೆಯಾಗಿರುವುದರಿಂದ ಮಂಗಳೂರು-ಬೆಂಗಳೂರು ನಡುವೆ ದಿನಂಪ್ರತಿ ಹೆಚ್ಚುವರಿ ರೈಲು ಒದಗಿಸುವಂತೆ, ಪಶ್ಚಿಮ ಕರಾವಳಿ ರೈಲು ಯಾತ್ರಾ ಅಭಿವೃದ್ಧಿ ಸಮಿತಿ ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಮನವಿ ಮಾಡಿದ್ದರು. ಸಂಸದರು ರೈಲ್ವೆ ಸಚಿವರನ್ನು ಭೇಟಿಯಾಗಿ ಹೆಚ್ಚುವರಿ ರೈಲು ಓಡಿಸಲು ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ರೈಲ್ವೆ ಮಂಡಳಿ ಹೆಚ್ಚುವರಿ ವಿಶೇಷ ರೈಲು ಓಡಿಸಲು ಅನುಮೋದನೆ ನೀಡಿದೆ.

ಮಂಗಳೂರಿನಿಂದ ಬೆಂಗಳೂರು ನಗರಕ್ಕೆ ಜು.27ರಿಂದ ಆ.31ರ ತನಕ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ 06548 ನಂಬರ್‌ನ ರೈಲು ಸಂಚರಿಸಲಿದೆ. ಬೆಂಗಳೂರಿನಿಂದ ಮಂಗಳೂರಿಗೆ ಜು.26ರಿಂದ ಆ.30ರ ತನಕ ಪ್ರತಿ ಭಾನುವಾರ, ಮಂಗಳವಾರ ಮತ್ತು ಗುರುವಾರ 06547 ನಂಬರ್‌ನ ರೈಲು ಸಂಚರಿಸಲಿದೆ. ಬೆಂಗಳೂರಿನಿಂದ ಪ್ರತಿ ಶುಕ್ರವಾರ ಮತ್ತು ಮಂಗಳೂರಿನಿಂದ ಪ್ರತಿ ಶನಿವಾರ ಈ ವಿಶೇಷ ರೈಲು ಸಂಚಾರ ಇರುವುದಿಲ್ಲ.

ರಾತ್ರಿ 8.30 ಕ್ಕೆ ಬೆಂಗಳೂರಿನಿಂದ ಹೊರಡಲಿರುವ ರೈಲು ಕೆಂಗೇರಿ, ರಾಮನಗರ, ಚನ್ನರಾಯಪಟ್ಟಣ, ಮಂಡ್ಯ, ಮೈಸೂರು ಜಂಕ್ಷನ್, ಕೃಷ್ಣರಾಜನಗರ, ಹೊಳೆನರಸೀಪುರ, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್, ಕಬಕ ಪುತ್ತೂರು, ಮಂಗಳೂರು ಜಂಕ್ಷನ್ ಹಾಗೂ ಮಂಗಳೂರು ಸೆಂಟ್ರಲ್ ತಲುಪಲಿದೆ. ಮಂಗಳೂರಿನಿಂದ ಸಂಜೆ 6:35ಕ್ಕೆ ಹೊರಡುವ ರೈಲು ಬೆಳಗ್ಗೆ 6.15ಕ್ಕೆ ಬೆಂಗಳೂರು ಸಿಟಿ ಜಂಕ್ಷನ್ ತಲುಪಲಿದೆ.

ಅಲ್ಲದೆ, ರೈಲ್ವೆ ಹೋರಾಟಗಾರು, ಕಣ್ಣೂರು-ಬೆಂಗಳೂರು ರಾತ್ರಿ ರೈಲು ಪ್ರತಿದಿನ ಭರ್ತಿಯಾಗಿ ಸಂಚರಿಸುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವ ರೈಲಿಗೆ ಹೆಚ್ಚುವರಿ ಕೋಚ್ ಅಳವಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಬೇಡಿಕೆಯನ್ನು ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.