ಯಡಿಯೂರಪ್ಪನವರು ನಿರಂತರ ಪರಿಶ್ರಮದ ನಾಯಕ, ಅವರಿಗೆ ರಾಜಕೀಯ ಬಿಡುವು ಅನ್ನುವುದೇ ಇಲ್ಲ – ಬೊಮ್ಮಾಯಿ

ನವದೆಹಲಿ : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ತಮ್ಮ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ನಿನ್ನೆ ಚುನಾವಣಾ ಕ್ಷೇತ್ರಕ್ಕೆ ನಿವೃತ್ತಿ ಘೋಷಿಸಿದ್ದಾರೆ. ರಾಜ್ಯ ರಾಜಕೀಯ ಬಿಜೆಪಿಯಲ್ಲಿ ಬಿಎಸ್ ವೈ ಅವರ ಈ ಹೇಳಿಕೆ ತಲ್ಲಣ ಮೂಡಿಸಿದೆ. ಆದರೆ, ಯಡಿಯೂರಪ್ಪ ಅವರಿಗೆ ಸುಸ್ತಾಗಲಿ ನಿವೃತ್ತಿಯಾಗಲಿ ಇಲ್ಲ. ಅವರು ನಿರಂತರ ಹೋರಾಟಗಾರರು ಎಂದು ಬಸವರಾಜ್ ಬೊಮ್ಮಯಿ ಹೇಳಿದ್ದಾರೆ.

ನಿನ್ನೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮ ಪ್ರತಿನಿಧಿಗಳಿಗೆ ಯಡಿಯೂರಪ್ಪ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. “ಯಡಿಯೂರಪ್ಪನವರು ನಿರಂತರ ಪರಿಶ್ರಮದ ನಾಯಕ, ಅವರಿಗೆ ರಾಜಕೀಯ ಬಿಡುವು ಅನ್ನುವುದೇ ಇಲ್ಲ, ರಾಜಕೀಯದಲ್ಲಿ ನಿರಂತರವಾಗಿ ಬಿಎಸ್ ವೈ ಇರುತ್ತಾರೆ, ಹೋರಾಟವೇ ಅವರ ಬದುಕಿನ ಮೂಲಮಂತ್ರ “ಎಂದಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಬಲ ಮಾರ್ಗದರ್ಶನ ಇರಲಿದೆ. ಅವರು ನಿರಂತರ ಹೋರಾಟಗಾರರಾಗಿದ್ದು, ಬಿಜೆಪಿ ಜತೆಗೆ ಸದಾ ಇದ್ದಾರೆ. ಅವರಿಗೆ ತಮ್ಮದೇ ಆದ ಮಹತ್ವವಿದ್ದು, ಪಕ್ಷದ ವರಿಷ್ಠರಿಗೂ ಅವರ ಮಹತ್ವದ ಅರಿವಿದೆ. ಕಳೆದ ಬಾರಿ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಈ ಬಗ್ಗೆ ಏನೂ ಚರ್ಚಿಸಿಲ್ಲ. ಮುಂದಿನ ಬಾರಿ ಭೇಟಿಯಾದಾಗ ಚರ್ಚಿಸಲಾಗುವುದು ಎಂದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಚುನಾವಣಾ ರಾಜಕೀಯಕ್ಕೆ ದಿಢೀರ್ ನಿವೃತ್ತಿ ಘೋಷಿಸಿ ತಾವು ಇಷ್ಟು ವರ್ಷಗಳ ಕಾಲ ಪ್ರತಿನಿಧಿಸಿಕೊಂಡು ಬರುತ್ತಿದ್ದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಬಿ ವೈವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ಘೋಷಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರಬಹುದು, ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳಹುದು ಎಂಬ ವಿಚಾರಗಳು ಚರ್ಚೆಯಾಗುತ್ತಿದೆ.

ಸಹಜವಾಗಿ ಬಿಜೆಪಿಯಲ್ಲಿ ಇಂತಹದೊಂದು ಸಂಪ್ರದಾಯ ಚಾಲ್ತಿಯಲ್ಲಿಲ್ಲ. ಟಿಕೆಟ್‌ ಘೋಷಣೆ ಸಂಪೂರ್ಣವಾಗಿ ಹೈಕಮಾಂಡ್‌ ಕೈಯಲ್ಲಿರುತ್ತದೆ. ಯಾರಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್ ಕೊಡಬೇಕು ಎಂಬುವುದನ್ನು ಹೈಕಮಾಂಡ್‌ ನಿರ್ಧಾರ ಮಾಡುತ್ತದೆ. ಅದರಲ್ಲೂ ಇನ್ನೂ ಚುನಾವಣೆಗೆ ಒಂಬತ್ತು ತಿಂಗಳು ಬಾಕಿ ಇರುವಾಗಲೇ ಯಡಿಯೂರಪ್ಪ ಶಿಕಾರಿಪುರದ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿದ್ದಾರೆ. ಆದರೆ, ಯಡಿಯೂರಪ್ಪ ಅವರ ಈ ನಿರ್ಧಾರವನ್ನು ಹೈಕಮಾಂಡ್‌ ನಿರಾಕರಿಸುವ ಹಾಗಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

Leave A Reply

Your email address will not be published.