ಬೆಳ್ತಂಗಡಿ : ಹಾಡಹಗಲೇ ದರೋಡೆ ಮಾಡಿ ನಡೆಯಿತು ವೃದ್ಧೆಯ ಕೊಲೆ!

ಬೆಳ್ತಂಗಡಿ : ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿನ ವೃದ್ಧೆಯೋರ್ವರ ಮೇಲೆ ಯಾರೋ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆಗೈದು ಚಿನ್ನಾಭರಣವನ್ನು ದರೋಡೆಗೈದ ಘಟನೆ ಇಂದು ಮಧ್ಯಾಹ್ನದ ವೇಳೆ ನಡೆದಿದೆ.

ಮೃತರನ್ನು ಡೀಕಯ್ಯ ಅವರ ತಾಯಿ ಅಕ್ಕು (85ವ) ಎಂದು ಗುರುತಿಸಲಾಗಿದೆ.

ಇಂದು ಮಧ್ಯಾಹ್ನದ ವೇಳೆ ಅಕ್ಕು ಅವರು ಮನೆಯಲ್ಲಿ ಒಬ್ಬರೇ ಇದ್ದರು. ಇದನ್ನು ಗುರಿಯಾಗಿಸಿಕೊಂಡ ಯಾರೋ ಕಿಡಿಗೇಡಿಗಳು ಮನೆಗೆ ನುಗ್ಗಿ ವೃದ್ಧೆ ಮೇಲೆ ಹಲ್ಲೆ ನಡೆಸಿದ್ದಾರೆ. ಮನೆಯಲ್ಲಿದ್ದ ನಗದು ಸಹಿತ ಅವರು ಹಾಕಿಕೊಂಡಿದ್ದ ಚಿನ್ನವನ್ನು ಕಿತ್ತುಕೊಂಡು ಹೋಗಿದ್ದಾರೆ. ತೀವ್ರವಾದ ಪೆಟ್ಟುಗಳಾದ ಕಾರಣ ವೃದ್ಧೆ ಮೃತಪಟ್ಟಿದ್ದಾರೆ.

ಸೊಸೆ ಮತ್ತು ಮಗ ಕೆಲಸಕ್ಕೆಂದು ಹೊರಗೆ ಹೋಗಿದ್ದರು. ಮಧ್ಯಾಹ್ನದ ವೇಳೆ ಮೃತರ ಮೊಮ್ಮಗಳು ಮನೆಗೆ ಬಂದಾಗ, ಊಟದ ಬಟ್ಟಲು ಬಿದ್ದು ಎಲ್ಲಾ ಚೆಲ್ಲಾಪಿಲ್ಲಿಯಾಗಿತ್ತು. ಮನೆಯಲ್ಲಿ ಅಜ್ಜಿ ಇಲ್ಲದನ್ನು ಗಮನಿಸಿ ಹುಡುಕಾಡಿದಾಗ, ಮನೆಯ ಹೊರಗೆ ಹಟ್ಟಿಯ ಬಳಿ ಬಿದ್ದಿದ್ದರು. ವೃದ್ಧೆಯ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಕಿವಿ ಹರಿದು ಹೋಗಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಜ್ಜಿಯನ್ನು ಕಂಡು ಭಯಭೀತಳಾದ ಆಕೆ ಪೋಷಕರಿಗೆ ಮಾಹಿತಿ ನೀಡಿದ್ದಾಳೆ.

ಬಳಿಕ ಅವರು ಬಂದು ನೋಡಿದಾಗ ಅಕ್ಕು ಅವರು ಮೃತಪಟ್ಟಿದ್ದರು. ಅವರ ಕಿವಿಯಲ್ಲಿದ್ದ ಚಿನ್ನಾಭರಣ ಕಿತ್ತುಕೊಂಡು ಹೋಗಿದ್ದು, ಮನೆಯಲ್ಲಿದ್ದ ನಗದನ್ನು ದರೋಡೆಗೈದಿರುವುದು ಗೊತ್ತಾಗಿದೆ. ತಕ್ಷಣ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಆದರೆ, ಈ ಹತ್ಯೆ ಮಾಡಿದವರು ಯಾರು ಎಂಬ ಬಗ್ಗೆ ಸುಳಿವು ದೊರೆತಿಲ್ಲ, ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.

Leave A Reply

Your email address will not be published.