ಅಪ್ಪನ ವಾಹನಕ್ಕೆ ಬಲಿಯಾದ ಪುಟ್ಟ ಕಂದಮ್ಮ!

ವಿಧಿಯು ಯಾರ ಬದುಕಲ್ಲಿ ಹೇಗೆ ಆಟವಾಡುತ್ತದೆ ಎಂಬುದನ್ನು ಊಹಿಸಲು ಅಸಾಧ್ಯ. ಇಂದು ನಮ್ಮೊಂದಿಗೆ ಇದ್ದವರು ನಾಳೆ ಇರುವುದಿಲ್ಲ ಎಂಬಂತಾಗಿದೆ. ಆದರೆ, ಇಲ್ಲೊಂದು ಕಡೆ ವಿಧಿ ತುಂಬಾ ಕ್ರೂರಿಯಾಗಿ ಆಟವಾಡಿದೆ. ಹೌದು. ಆಟವಾಡುತ್ತಿದ್ದ ಪುಟ್ಟ ಕಂದಮ್ಮ ತನ್ನ ಅಪ್ಪನ ವಾಹನದ ಅಡಿಗೆ ಬಿದ್ದು ಮೃತ ಪಟ್ಟಂತಹ ಹೃದಯವಿದ್ರಾವಕ ಘಟನೆ ಆನೇಕಲ್ ಸರ್ಜಾಪುರ ಪೋಲೀಸ್ ಠಾಣಾ ವ್ಯಾಪ್ತಿಯ ಕಾಮನಹಳ್ಳಿಯಲ್ಲಿ ನಡೆದಿದೆ.

ಬಾಲಕೃಷ್ಣ ಎಂಬುವರ ಮಗಳು ಮನಿಶಾ ದೇವಿ ಮೃತ ದುರ್ದೈವಿ.

ಇಂದು ಮಧ್ಯಾಹ್ನದ ವೇಳೆ, ಆಟವಾಡುತ್ತಾ ಕುಳಿತಿದ್ದ ಒಂದೂವರೆ ವರ್ಷದ ಕಂದಮ್ಮ, ಆಕಸ್ಮಿಕವಾಗಿ ತಂದೆ ಚಾಲನೆ ಮಾಡುತ್ತಿದ್ದ ವಾಹನಕ್ಕೇ ಬಲಿಯಾಗಿ ಮೃತಪಟ್ಟಿದ್ದಾಳೆ. ಮೃತ ಮಗುವಿನ ತಂದೆ ಬಾಲಕೃಷ್ಣ, ಇಚರ್ ವಾಹನ ಚಾಲಕರಾಗಿದ್ದರು. ಇವರು ಮನೆ ಬಳಿ ವಾಹನ ರಿವರ್ಸ್ ತೆಗೆದುಕೊಳ್ಳಲು ಹೋದಾಗ, ಆಟವಾಡುತ್ತಿದ್ದ ಮನಿಶಾ ಆಕಸ್ಮಿಕವಾಗಿ ವಾಹನಕ್ಕೆ ಸಿಲುಕಿ ಗಂಭೀರ ಗಾಯಗೊಂಡಿದ್ದಳು.

ಕೂಡಲೇ ಮಗುವನ್ನು ಆಸ್ಪತ್ರೆಗೆ ರವಾನಿಸಿದರೂ, ಚಿಕಿತ್ಸೆ ಫಲಿಸದೆ ಮನಿಶಾ ಆಶ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾಳೆ. ಸರ್ಜಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನ್ನಿಂದಲೇ ಮಗಳ ಪ್ರಾಣ ಹೋಯಿತೇ ಎಂಬ ನೋವಿನಿಂದ ತಂದೆ ಗೋಳಾಡುತ್ತಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.

Leave A Reply

Your email address will not be published.