ಮಗನ ಜೀವ ಉಳಿಸಲು ತನ್ನ ಪ್ರಾಣವನ್ನೇ ನೀಡಿದ ತಂದೆ!

ಅಮ್ಮ ಹೆತ್ತು ಹೊತ್ತು ಸಲಹಿದರೆ, ಅಪ್ಪ ಬೆನ್ನ ಹಿಂದೆ ನಿಂತು ಅರಿಯದೇ ತನ್ನ ಮಗುವಿಗಾಗಿ ಕಷ್ಟ ಪಡುತ್ತಾನೆ. ಅದರಂತೆ ಈ ಘಟನೆ ಅಪ್ಪನ ಜವಾಬ್ದಾರಿಯನ್ನು ಎದ್ದು ತೋರಿಸುತ್ತಿದೆ. ಇನ್ನೇನು ಜೀವ ಹೋಗುತ್ತದೆ ಎಂದು ಅರಿತ್ತಿದ್ದ ತಂದೆ, ‘ನಾನು ಸತ್ತರೂ ಪರವಾಗಿಲ್ಲ ನನ್ನ ಮಗ ಬದುಕಬೇಕು’ ಎಂಬ ನಿಸ್ವಾರ್ಥ ಭಾವನೆಯಿಂದ ಮಗನ ಜೀವವನ್ನು ಉಳಿಸಿದ ಹೃದಯವಿದ್ರಾಯಕ ಘಟನೆ ಮಂಡ್ಯದಲ್ಲಿ ನಡೆದಿದೆ.

ಪಾಂಡವಪುರ ತಾಲೂಕು ನ್ಯಾಮನಹಳ್ಳಿ ಸಮೀಪ ಲಾರಿ ಡಿಕ್ಕಿ ಹೊಡೆಯುವುದನ್ನು ಗಮನಿಸಿ ಆಟೋದಲ್ಲಿದ್ದ ತಂದೆ, ತನ್ನ ಮಗನನ್ನು ಕೆಳಗೆ ತಳ್ಳಿ ಅಪಘಾತಕ್ಕೆ ಬಲಿಯಾಗಿದ್ದಾರೆ.

ಮೃತ ತಂದೆ ತಾಲೂಕಿನ ಮುದಗಂದೂರು ಗ್ರಾಮದ ಶ್ರೀನಿವಾಸ್(43) . ಇವರ ಮಗ ವಿಶ್ವಾಸ್ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡಿರುವ ಹಿನ್ನೆಲೆಯಲ್ಲಿ ಪಾಂಡವಪುರ ಪಟ್ಟಣದ ಚಿಕಿತ್ಸೆ ಪಡೆಯುತ್ತಿದ್ದಾನೆ.

ಶ್ರೀನಿವಾಸ್ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದದ್ದು, ತರಕಾರಿ ತರಲೆಂದು ತಂದೆ ಮತ್ತು ಮಗ ತಮ್ಮ ಆಫೆ ಆಟೋದಲ್ಲಿ ಮೈಸೂರಿಗೆ ತೆರಳಿದ್ದರು. ಕೆಲಸ ಮುಗಿಸಿ ಊರಿಗೆ ವಾಪಸಾಗುತ್ತಿದ್ದ ವೇಳೆ, ನ್ಯಾಮನಹಳ್ಳಿಯ ಸಮೀಪ ಲಾರಿಯೊಂದು ಅಡ್ಡಾದಿಡ್ಡಿಯಾಗಿ ಬಂದಿದೆ. ಇದನ್ನು ಗಮನಿಸಿದ ಶ್ರೀನಿವಾಸ್, ವಿಶ್ವಾಸ್‌ನನ್ನು ಆಟೋದಿಂದ ಕೆಳಗೆ ತಳ್ಳಿದ್ದಾರೆ. ಕ್ಷಣಾರ್ಧದಲ್ಲಿಯೇ ಆಟೋ ಡಿಕ್ಕಿ ಹೊಡೆದು ಲಾರಿಯೊಂದಿಗೆ ಚಾಲಕ ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ. ಅಪಘಾತದಲ್ಲಿ ಶ್ರೀನಿವಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇತ್ತ ಚಿಕಿತ್ಸೆ ಪಡೆಯುತ್ತಿರುವ ವಿಶ್ವಾಸ್‌ಗೆ ತಂದೆ ಮೃತಪಟ್ಟಿರುವ ಮಾಹಿತಿ ನೀಡಲು ಕುಟುಂಬಸ್ಥರು ಹಿಂದೇಟು ಹಾಕುತ್ತಿದ್ದಾರೆ. ಘಟನೆ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.