ಬಂಟ್ವಾಳ : ನರ್ತೆ( ಶಂಕುಹುಳು) ಹೆಕ್ಕಲು ಹೋಗಿ ಯುವಕ ಜಾರಿ ಬಿದ್ದು ಕೆಸರಿನಲ್ಲಿ ಹೂತು ದಾರುಣ ಸಾವು

ಬಂಟ್ವಾಳ : ಯುವಕನೋರ್ವ ಗದ್ದೆಯಲ್ಲಿ ನರ್ತೆ ( ಶಂಕುಹುಳು) ಹೆಕ್ಕುವ ಸಂದರ್ಭದಲ್ಲಿ ನೀರು ಹಾಗೂ ಕೆಸರಿನಲ್ಲಿ ಹೂತು ಮೃತಪಟ್ಟ ದಾರುಣ ಘಟನೆಯೊಂದು ನಡೆದಿದೆ. ಪೊಳಲಿ ಸಮೀಪದ ಕಲ್ಕುಟದ ಗದ್ದೆಯೊಂದರಲ್ಲಿ ಈ ಘಟನೆ ನಡೆದಿದೆ.

ಕರಿಯಂಗಳ ಗ್ರಾಮದ ಸಾಣೂರುಪದವು ನಿವಾಸಿ ದಾಮೋದರ್(31) ಮೃತಪಟ್ಟ ಯುವಕ.

ಗದ್ದೆಯ ಬದುವಿನಲ್ಲಿ ಕೂತು ನರ್ತೆ ಹೆಕ್ಕುತ್ತಿದ್ದ ವೇಳೆ ದಾಮೋದರ್ ಅವರು ಆಯತಪ್ಪಿ ಗದ್ದೆಗೆ ಬಿದ್ದು ಬಿಟ್ಟಿದ್ದಾರೆ. ಆದರೆ ಗದ್ದೆಯಲ್ಲಿ ನೀರಿನ ಜತೆಗೆ ಕೆಸರು ಕೂಡ ತುಂಬಿಕೊಂಡಿದ್ದರಿಂದ, ಅವರು ಕುತ್ತಿಗೆವರೆಗೂ ಹೂತು ಹೋಗಿದ್ದಾರೆ. ಪ್ರಯತ್ನಪಟ್ಟರೂ ಮೇಲಕ್ಕೆ ಬರಲು ಆಗದೆ ಮೃತಪಟ್ಟಿದ್ದಾರೆ.

ಮೇಸ್ತ್ರಿ ಕೆಲಸ ಮಾಡುತ್ತಿದ್ದ ದಾಮೋದರ್ ಅವರು ತಂದೆ-ತಾಯಿ, ಪತ್ನಿ, ಸಣ್ಣ ಮಗು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಈ ಘಟನೆ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.