ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅವಘಡಗಳು ಹೆಚ್ಚಾಗುತ್ತಲೇ ಇದ್ದು, ನಿರ್ಮಾಣ ಹಂತದ ಕಟ್ಟಡಗಳು ಕುಸಿಯುತ್ತಿರುವುದು ಕಂಡುಬರುತ್ತಿದೆ. ಕಳಪೆ ಕಾಮಗಾರಿಗಳಿಂದ ನಿರ್ಮಾಣ ಆಗುತ್ತಿರುವ ಕಟ್ಟಡಗಳೇ ಇದಕ್ಕೆ ಕಾರಣವಾಗಿದೆ. ಇದೀಗ ಮತ್ತೆ ಅಪಾರ್ಟ್ಮೆಂಟ್ ಕಾಂಪೌಂಡ್ ಕುಸಿದು ನಾಲ್ವರು ಸಾವನ್ನಪ್ಪಿರುವ ಘಟನೆ ತಿರುಮಲಶೆಟ್ಟಿಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ನಡೆದಿದೆ.
ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಹಳ್ಳಿ ಬಳಿ ಅಪಾರ್ಟ್ಮೆಂಟ್ ಕಾಂಪೌಂಡ್ ಕಾರ್ಮಿಕರ ಶೆಡ್ ಮೇಲೆ ಕುಸಿದಿದೆ. ಘಟನೆ ವೇಳೆ ಶೆಡ್ನಲ್ಲಿ ಒಟ್ಟು 8 ಕಾರ್ಮಿಕರು ಮಲಗಿದ್ದರು ಎನ್ನಲಾಗಿದೆ. ಪರಿಣಾಮ ನಿದ್ದೆ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಚಿರನಿದ್ರೆಗೆ ಜಾರಿದ್ದಾರೆ.
ಕಾಂಪೌಂಡ್ ಕುಸಿಯುತ್ತಿದ್ದಂತೆ ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ದುರಾದೃಷ್ಟವಶಾತ್ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.