ಮಂಗಳೂರು : ಉಸೇನ್ ಬೋಲ್ಟ್ ದಾಖಲೆ ಮುರಿದ ಕಂಬಳ ಖ್ಯಾತಿಯ ಶ್ರೀನಿವಾಸ ಗೌಡ ವಿರುದ್ಧ ಕ್ರಿಮಿನಲ್ ದೂರು ದಾಖಲು

ಮಂಗಳೂರು: ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತಿ ಪಡೆದ ಶ್ರೀನಿವಾಸ ಗೌಡರ ವಿರುದ್ಧ ಕ್ರಿಮಿನಲ್ ದೂರು ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಸದಸ್ಯ ಕೋಣಗಳ ಯಜಮಾನ ಲೋಕೇಶ್ ಶೆಟ್ಟಿ ಎಂಬುವವರು, ಉಸೇನ್ ಬೋಲ್ಟ್ ದಾಖಲೆ ಮುರಿದ ಶ್ರೀನಿವಾಸ ಗೌಡ ವಿರುದ್ಧ ಮಂಗಳೂರಿನ ಮೂಡಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಉಸೇನ್ ಬೋಲ್ಟ್ ದಾಖಲೆ ಮುರಿದ ಹೆಸರಲ್ಲಿ, ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಹಣ ಮತ್ತು ಸಾರ್ವಜನಿಕರಿಗೆ ವಂಚನೆ ಆರೋಪ ಕೇಳಿಬಂದಿದೆ. ಕಂಬಳ ಓಟಗಾರ ಶ್ರೀನಿವಾಸ ಗೌಡ, ಕಂಬಳ ಅಕಾಡೆಮಿ ನಡೆಸುವ ಗುಣಪಾಲ ಕಡಂಬ ಮತ್ತು ಲೇಸರ್ ಬೀಮ್ ಮೂಲಕ ಕಂಬಳದ ಫಲಿತಾಂಶ ಘೋಷಿಸುವ ಸ್ಕೈ ವೀವ್ ಮಾಲೀಕ ರತ್ನಾಕರ ಎಂಬವರ ವಿರುದ್ಧ ಕ್ರಿಮಿನಲ್ ದೂರು ನೀಡಲಾಗಿದೆ.

ಅಧಿಕೃತ ಮಾನ್ಯತೆ ಪಡೆಯದ, ನಂಬಲಾರ್ಹವಲ್ಲದ ಸ್ಕೈ ವೀವ್ ಸಂಸ್ಥೆಯಿಂದ ಸುಳ್ಳು ತೀರ್ಪಿನ ದಾಖಲೆ ನೀಡಲಾಗಿದೆ ಎನ್ನಲಾಗುತ್ತಿದೆ. ಪೊಲೀಸರು ತನಿಖೆ ನಡೆಸದೇ ಇದ್ದರೆ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡುವುದಾಗಿ ಹೇಳಲಾಗಿದೆ. 2020ರ ಫೆ.1ರಂದು ಐಕಳ ಕಂಬಳದಲ್ಲಿ 100 ಮೀ. ದೂರವನ್ನು 9.55 ಸೆಕೆಂಡ್​ನಲ್ಲಿ ಶ್ರೀನಿವಾಸ ಗೌಡ ಕ್ರಮಿಸಿದ್ದರು. 2009ರಲ್ಲಿ ಉಸೇನ್ ಬೋಲ್ಟ್ 100 ಮೀ. ಅನ್ನು 9.58 ಸೆಕೆಂಡ್​ನಲ್ಲಿ ಕ್ರಮಿಸಿದ ದಾಖಲೆ ಉಡೀಸ್ ಮಾಡಿದ್ದರು. ರಾಜ್ಯ ಸರ್ಕಾರ ಸೇರಿ ದೇಶದ ಹಲವು ಸಂಸ್ಥೆಗಳು ಶ್ರೀನಿವಾಸ ಗೌಡಗೆ ನೆರವು ನೀಡಿದ್ದವು.

ದೂರಿನಲ್ಲಿ ದಾಖಲಾಗಿರುವ ಅಂಶಗಳು:

ಮಾನ್ಯರೇ,

ವಿಷಯ:- ಸುಳ್ಳು ದಾಖಲೆ ಸೃಷ್ಟಿಸಿ ಸರಕಾರ ಮತ್ತು ಸಾರ್ವಜನಿಕರಿಗೆ ವಂಚಿಸಿವ ಮೂಲಕ ಕಂಬಳ ಕ್ಷೇತ್ರದ ಖ್ಯಾತಿಗೆ ದಕ್ಕೆ ತಂದಿರುವ ಕುರಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದೂರುದಾರನಾದ ನಾನು (ಲೋಕೇಶ್ ಶೆಟ್ಟಿ) ಜಿಲ್ಲಾ ಕಂಬಳ ಸಮಿತಿಯ ಆವ ಸದಸ್ಯವಾಗಿದ್ದು, ಆರೋಪಿಗಳು ಸಮಿತಿ ಸದಸ್ಯರಾಗಿರುವುದಿಲ್ಲ. ಮೊದಲನೇ ಆರೋಪಿ ಕಂಬಳ ಅಕಾಡೆಮಿಯನ್ನು ನಡೆಸಿಕೊಂಡು ಬರುತ್ತಿದ್ದು, ತನ್ನ ಸ್ವಂತ ಲಾಭಕ್ಕಾಗಿ ಜಿಲ್ಲಾ ಕಂಬಳ ಸಮಿತಿಯಲ್ಲಿ ಅಕ್ರಮ ಪ್ರವೇಶ ಮಾಡಿರುತ್ತಾರೆ. ಮಾತ್ರವಲ್ಲದೆ ಕಂಬಳ ಕೂಟದ ಸಭೆಗಳಲ್ಲಿ ಮೈಕ್ ಹಿಡಿದು ತಾನೊಬ್ಬ ಮಹಾಸಾಧಕ, ನನ್ನಿಂದಲೇ ಕಂಬಳ ಉಳಿದಿದೆ ಎಂದು ಸಾರ್ವಜನಿಕರಲ್ಲಿ ಬಿಂಬಿಸಿ ತನ್ನ ಸ್ವಾರ್ಥ ಸಾಧನೆಗೆ ಕಂಬಳವನ್ನು ದುರುಪಯೋಗಪಡಿಸಿರುತ್ತಾರೆ.

ಅಷ್ಟೇ ಅಲ್ಲದೆ, ಅವರ ಆಕಾಡೆಮಿಯಲ್ಲಿ ತರಬೇತಿ ಪಡೆದಿದ್ದರೆನ್ನಲಾದ ಎರಡನೇ ಆರೋಪಿ ಹೆಸರಲ್ಲಿ ಹಲವು ನಕಲಿ ದಾಖಲೆ ಸೃಷ್ಟಿಸಿದ್ದು, ಮಾಧ್ಯಮಗಳ ಮೂಲಕ ಬೊಗಳೆ ಬಿಟ್ಟು ಕಂಬಳದ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ಮಾಧ್ಯಮ ಮತ್ತು ಜನಪ್ರತಿನಿಧಿಗಳಿಗೆ ನಂಬಿಕೆ ಬರುವಂತೆ ಮೋಸದಿಂದ ಮೊದಲನೇ ಆರೋಪಿ ನಡೆದುಕೊಂಡಿದ್ದಾರೆ. ಈ ಮೂಲಕ ಮೇಲಿನ ಎಲ್ಲಾ ಆರೋಪಿಗಳು ನಕಲಿ ದಾಖಲೆ ಮತ್ತು ದಾಸ್ತಾವೇಜು ಸೃಷ್ಟಿಸುವ ಮೂಲಕ ಸರಕಾರ ಮತ್ತು ಸಾರ್ವಜನಿಕ ವಲಯದಿಂದ ಲಕ್ಷಾಂತರ ರೂಪಾಯಿ ದೇಣಿಗೆ ಪಡೆದು ಯಾವುದೇ ಲೆಕ್ಕಪತ್ರ ಮಂಡನೆ ಮಾಡದೆ ವಂಚಿಸಿರುತ್ತಾರೆ.

ಮಾಧ್ಯಮ ಮತ್ತು ಜನಪ್ರತಿನಿಗಳಿಗೆ ನಂಬಿಕೆ ಬರುವಂತೆ ಮೊದಲನೇ ಆರೋಪಿ ನಡೆದುಕೊಂಡಿದ್ದಾರೆ ಈ ಮೂಲಕ ಮೇಲಿನ ಎಲ್ಲ ಆರೋಪಿಗಳು ನಕಲಿ ದಾಖಲೆ ಮತ್ತು ದಸ್ತಾವೇಜು ಸೃಷ್ಟಿಸುವ ಮೂಲಕ ಸರಕಾರ ಮತ್ತು ಸಾರ್ವಜನಿಕ ವಲಯದಿಂದ ಲಕ್ಷಾಂತರ ರೂಪಾಯಿ ದೇಣಿಗೆ ಲಕರು ಯಾವದೇ ಲೆಕ್ಕಪತ್ರ ಮಂಡನೆ ಮಡದೆ ವಂಚಿಸಿರುತ್ತಾರೆ

ಮೊದಲನೆ ಮತ್ತು ಎರಡನೇ ಆರೋಪಿಗಳ ಎಲ್ಲಾ ಮೋಸದ ಕೃತ್ಯಗಳಿಗೆ ಮೂರನೇ ಆರೋಪಿ ಸಹಕರಿಸಿದ್ದು, ಯಾವುದೇ ಅಧಿಕೃತ ಮಾನ್ಯತೆ ಪಡೆಯದೆ, ನಂಬಲರ್ಹವಾಗಿರದ ತಂತ್ರಜ್ಞಾನದ ಮೂಲಕ ಮನಸಾಇಚ್ಚೆಯಂತೆ ತೀರ್ಪು ನೀಡಿ, ಸುಳ್ಳು, ಮೋಸ, ವಂಚನೆ ಉದ್ದೇಶಪೂರ್ವಕವಾಗಿ ಸಹಕರಿಸಿರುತ್ತಾರೆ.

ಆರೋಪಿಗಳು ಕಂಬಳದ ಖ್ಯಾತಿ ಮತ್ತು ಘನತೆಗೆ ದಕ್ಕೆ ತಂದಿರುತ್ತಾರೆ. ಆರೋಪಿಗಳ ಮೋಸದ ವಿರುದ್ಧ ದನಿ ಎತ್ತಿದವರಿಗೆ ಆರೋಪಿಗಳು ಜೀವ ಬೆದರಿಕೆ ಒಡ್ಡಿರುವುದು ಕೆಲ ತಿಂಗಳ ಹಿಂದೆ ವೈರಲ್ ಆದ ಆಡಿಯೋ ಸಂದೇಶದಿಂದ ದೃಢಪಟ್ಟಿರುತ್ತದೆ. ಈ ಮೂವರಿಂದಾಗಿ ಯುವ ಓಟಗಾರರ ಮನೂಸ್ಥೈರ್ಯ ಕುಂದಿದಂತಾಗಿದೆ.

ಮಾನ್ಯರೆ, ಇದನ್ನು ಕುಲಂಕುಶವಾಗಿ ತನಿಖೆ ನಡೆಸಬೇಕಾಗಿ ತಮ್ಮಲ್ಲಿ ವಿನಂತಿ. ಇದು ದೂರುದಾರರ ದೂರಿನ ವಿವರ.

Leave A Reply

Your email address will not be published.