ಸರ್ಕಾರಿ ನೌಕರರೇ ಎಚ್ಚರ | ಕನ್ನಡದಲ್ಲಿ ಮುದ್ರಣ ದೋಷವಾದರೆ ಸಂಬಳ ಕಡಿತ, ಭಡ್ತಿ ಮಿಸ್ ಆಗೋ ಸಾಧ್ಯತೆ

ಬೆಂಗಳೂರು: ರಾಜ್ಯ ಸರ್ಕಾರದ ಆದೇಶಗಳು ಅಥವಾ ಸುತ್ತೋಲೆಗಳನ್ನು ಕನ್ನಡದಲ್ಲಿ ರಚಿಸುವಾಗ ತಪ್ಪು ತಪ್ಪಾಗಿ ಟೈಪಿಂಗ್ ಮಾಡಿ ವ್ಯಾಕರಣದಲ್ಲಿ ದೋಷ ಮಾಡಿ ಕಳಿಸಿದ್ರೆ ಸಂಬಳದಲ್ಲಿ ಕಡಿತವಾಗಲಿದೆ. ಅಲ್ಲದೆ ಮುಂಬಡ್ತಿ ಕೂಡಾ ನಿರಾಕರಿಸಲಾಗುತ್ತದೆ. ಈ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಮೊನ್ನೆ ಶುಕ್ರವಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೋ- ವಿಡಿಯೋ ಮಾಡದಂತೆ ಆದೇಶ ಹೊರಡಿಸಿದ್ದನ್ನು. ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಹಿಂಪಡೆದು ಸರ್ಕಾರ ಆದೇಶ ಹೊರಡಿಸಿತ್ತು. ಹಾಗೆ ಹೊರಡಿಸಿದ ಹೊಸ ಆದೇಶದಲ್ಲಿ ಕರ್ನಾಟಕ ಸೇರಿದಂತೆ ಹಲವು ಪದಗಳಲ್ಲಿ ವ್ಯಾಕರಣ ದೋಷಗಳು ಕಂಡುಬಂದಿದ್ದವು. 80 ಪದಗಳ ಪುಟಾಣಿ ಆದೇಶದಲ್ಲಿ 8 ಅಕ್ಷಮ್ಯ ತಪ್ಪುಗಳು ಕಂಡುಬಂದಿದ್ದು, ಕನ್ನಡಿಗರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ಈಗ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಅಧಿಸೂಚನೆ ಹೊರಡಿಸುವ, ಟೈಫಿಂಗ್ ಮಾಡುವ ಅಧಿಕಾರಿಗಳು ಭಾಷೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಈ ಪ್ರಮಾದ ಆಗಿದೆ ಎಂದಿದ್ದಾರೆ.
ಕೆಲವು ವೇಳೆ ಇಂಗ್ಲೀಷ್ ನಲ್ಲಿ ಆದೇಶ ಅಥವಾ ಸುತ್ತೋಲೆ ರಚಿಸುವಾಗ ಅಥವಾ ಗೂಗಲ್ ಟ್ರಾನ್ಸ್ ಲೇಟ್ ನೆರವು ಪಡೆಯುತ್ತಿರುವುದರಿಂದಲೂ ಈ ರೀತಿಯ ತಪ್ಪುಗಳು ಆಗುತ್ತಿವೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದೊಂದಿಗೆ ಕೆಲಸ ಮಾಡುವವರು ರಾಜ್ಯದ ಭಾಷೆಯನ್ನು ಬಲ್ಲವರಾಗಿರಬೇಕು ಎಂದವರು ಹೇಳಿದ್ದಾರೆ ಎಂದು ವರದಿ ಆಗಿದೆ.

ಸರ್ಕಾರಿ ಅಧಿಸೂಚನೆ ಅಥವಾ ಸುತ್ತೋಲೆಗಳನ್ನು ಪ್ರಥಮ ಅಥವಾ ದ್ವಿತೀಯ ದರ್ಜೆ ಸಹಾಯಕರಿಂದ ಟೈಪ್ ಮಾಡಿಸಲಾಗುತ್ತದೆ. ಅವರಿಗೆ ಕನ್ನಡ ಭಾಷೆ ಗೊತ್ತಿರುತ್ತದೆ. ಆದರೆ, ಕೆಲವು ವೇಳೆ, ಅವರು ತಡ ರಾತ್ರಿ ಟೈಪ್ ಮಾಡುವುದು ಮತ್ತಿತರ ಒತ್ತಡಕ್ಕೆ ಸಿಲುಕಿರುತ್ತಾರೆ. ಆದ್ದರಿಂದ ಓದಲು, ತಪ್ಪಿರುವುದನ್ನು ಸರಿಪಡಿಸಲು ಸಾಕಷ್ಟು ಸಮಯವಿರುವುದಿಲ್ಲ ಎಂದು ಡಿಪಿಎಆರ್ ಮೂಲಗಳು ತಿಳಿಸಿವೆ.

ಟೈಪಿಂಗ್ ಮಾಡಿದವರು ಸೇರಿದಂತೆ ಆದೇಶದ ಪತ್ರಕ್ಕೆ ಸಹಿ ಮಾಡಿ ಹೊರಡಿಸಿದ ಅಧಿಕಾರಿಗಳ ಹೆಸರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅಧಿಕಾರಿಗಳಿಗೆ ನಾಗಾಭರಣ ಕಳುಹಿಸುತ್ತಿದ್ದು, ಸರ್ಕಾರಿ ಆದೇಶ ಮತ್ತಿತರ ದಾಖಲಾತಿಗಳಲ್ಲಿ ತಪ್ಪು ಮಾಡಿದವರ ಹೆಸರನ್ನು ಸರ್ವೀಸ್ ರೆಕಾರ್ಡ್ ನಲ್ಲಿ ಸೇರಿಸಬೇಕು, ಆಗ ಈ ರೀತಿ ಆದಾಗ ಅವರ ಸಂಬಳ ಏರಿಕೆಯಾಗಿಲ್ಲ, ಮುಂಬಡ್ತಿ ಸಿಗಲ್ಲ ಎಂದು ನಾಗಾಭರಣ ಅಭಿಪ್ರಾಯ ಪಟ್ಟಿದ್ದಾರೆ ಎಂದು ವರದಿ ಹೇಳಿದೆ.

Leave A Reply

Your email address will not be published.