ಹುಟ್ಟುಹಬ್ಬದಂದೇ ಬಂತು ಒಂದು ಕರೆ | ಆ ಕರೆ ಹಿಂದೆ ಹೋದ ಬರ್ಬರವಾಗಿ ಹತ್ಯೆಯಾದ | ಕರೆ ಯಾರದು?

ಆತ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ. ಮನೆ ಮಂದಿಯಲ್ಲಿ ತನ್ನ ಸ್ನೇಹಿತರ ಜೊತೆ ಹುಟ್ಟುಹಬ್ಬದ ಆಚರಣೆ ಮಾಡುತ್ತೇನೆಂದು ಹೋದವ ಅದೇ ದಿನ ಬರ್ಬರವಾಗಿ ಹತ್ಯೆಯಾಗಿದ್ದ. ಮಗನ ಹತ್ಯೆ ಸುದ್ದಿ ಕೇಳಿ ಪೋಷಕರಂತೂ ದಿಗ್ಭ್ರಮೆಗೊಳಗಾಗಿದ್ದಾರೆ. ಈ ಆಘಾತಕಾರಿ ಘಟನೆ ನಡೆದಿರುವುದು ಬೆಂಗಳೂರಿನಲ್ಲಿ.
ಸ್ನೇಹಿತರ ಜತೆಗೆ ಹುಟ್ಟು ಹಬ್ಬ ಆಚರಿಸಲು ತೆರಳಿದ್ದ ಯುವಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ದುರ್ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೇಮಂತ್ ಕುಮಾರ್ (26) ಎಂಬಾತನೇ ಮೃತ ಯುವಕ.
ಈತ ಕೆಂಗೇರಿ ಸಮೀಪದ ಎಚ್.ಗೋಲ್ಲಹಳ್ಳಿ ನಿವಾಸಿ

ಭಾನುವಾರ ಬೆಳಗ್ಗೆ 8ರ ಸುಮಾರಿಗೆ ಕೋನಸಂದ್ರ ಕೆರೆ ಸಮೀಪದ ನೈಸ್ ರಸ್ತೆಯ ಅಂಡರ್ ಪಾಸ್‌ನಲ್ಲಿ ಹೇಮಂತ್ ನ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಎಷ್ಟೊಂದು ಬರ್ಬರವಾಗಿ ಹತ್ಯೆ ಮಾಡಿದ್ದಾರೆಂದರೆ ಗುರುತು ಸಿಗದ ಹಾಗೆ ಕಲ್ಲಿನಿಂದ ಮುಖ ಜಜ್ಜಿ ಶವ ಎಸೆದು ಪರಾರಿಯಾಗಿದ್ದಾರೆ.

ಚಾಮರಾಜಪೇಟೆ ಮೂಲದ ಮೃತ ಹೇಮಂತ್ ಕುಟುಂಬ ಕೆಲ ವರ್ಷಗಳ ಹಿಂದೆ ಎಚ್.ಗೋಲ್ಲಹಳ್ಳಿಗೆ ಬಂದಿದ್ದರು. ಪಿಯು ಮುಗಿಸಿದ್ದ ಹೇಮಂತ್, ವಾಹನಗಳಿಗೆ ಸ್ಟಿಕ್ಕರ್ ಅಂಟಿಸುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಶನಿವಾರ ಹೇಮಂತ್ ಹುಟ್ಟುಹಬ್ಬವಿದ್ದ ಕಾರಣ ಮೂವರು ಪರಿಚಿತ ಸ್ನೇಹಿತರು ಹೇಮಂತ್ ಮೊಬೈಲ್‌ಗೆ ಪದೇ ಪದೇ ಕರೆ ಮಾಡುತ್ತಿದ್ದರು. ಹೀಗಾಗಿ ಮಧ್ಯಾಹ್ನ 2.30ರ ಸುಮಾರಿಗೆ ಸ್ನೇಹಿತರನ್ನು ಭೇಟಿಯಾಗುವುದಾಗಿ ಹೇಮಂತ್ ತನ್ನ ಅಕ್ಕನ ಜತೆಗೆ ಸ್ಕೂಟರ್‌ನಲ್ಲೇ ಕೆಂಗೇರಿಗೆ ಡ್ರಾಪ್ ಪಡೆದಿದ್ದ.

ರಾತ್ರಿ ಸುಮಾರು 8 ಗಂಟೆಗೆ ಪೋಷಕರಿಗೆ ಕರೆ ಮಾಡಿ ಮಾತನಾಡಿದ್ದ. ರಾತ್ರಿ 10 ಗಂಟೆಯಾದರೂ ಹೇಮಂತ್ ಮನೆಗೆ ಬಾರದಿದ್ದರಿಂದ ಪೋಷಕರು ಕರೆ ಮಾಡಿದಾಗ ಹೇಮಂತ್ ಮೊಬೈಲ್ ಸ್ವಿಚ್ ಆಫ್ ಬಂದಿದೆ. ಇದರಿಂದ ಗಾಬರಿಗೊಂಡ ಪೋಷಕರು ಆತನ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆದರೂ ಯಾವುದೇ ಸುಳಿವು ಸಿಕ್ಕಿಲ್ಲ.

ಆದರೆ ಭಾನುವಾರ ಬೆಳಗ್ಗೆ 8ರ ಸುಮಾರಿಗೆ ದಾರಿಹೋಕರು ಅಪರಿಚಿತ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಹೇಮಂತ್ ಪೋಷಕರು ಸ್ಥಳಕ್ಕೆ ಬಂದು ಶವದ ಕೈ ಮೇಲಿನ ತ್ರಿಶೂಲ ಮತ್ತು ಡಮರುಗ ಟ್ಯಾಟು ನೋಡಿ, ಇದು ಹೇಮಂತ್ ಶವ ಎಂದು ಗುರುತು ಪತ್ತೆಹಚ್ಚಿದ್ದಾರೆ. ದ್ವೇಷದ ಹಿನ್ನೆಲೆಯಲ್ಲಿ ಪರಿಚಿತರೇ ಹೇಮಂತ್‌ನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಠಾಣೆ ಪೊಲೀಸರು, ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಕೊಂಡಿದ್ದಾರೆ.

ಹೇಮಂತ್‌ಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ. ಆದರೂ ದುಷ್ಕರ್ಮಿಗಳು ಬಹಳ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಪೊಲೀಸರು ಹೇಮಂತ್‌ನ ಸ್ನೇಹಿತರನ್ನು ಕರೆಸಿ ವಿಚಾರಣೆ ಮಾಡುತ್ತಿದ್ದಾರೆ. ಮೊಬೈಲ್ ಕರೆಗಳು ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿರುವ ಪೊಲೀಸರು, ದುಷ್ಕರ್ಮಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Leave A Reply

Your email address will not be published.