ಮಂಗಳೂರು : ಉಳ್ಳಾಲ ಪೊಲೀಸರು ರೌಡಿಯೊಬ್ಬನ ಮೇಲೆ ಇಂದು ಬೆಳ್ಳಂಬೆಳಗ್ಗೆ ಫೈರಿಂಗ್ ಮಾಡಿದ್ದಾರೆ. ಮಂಗಳೂರಿನ ರೌಡಿ, ತಲೆಮರೆಸಿಕೊಂಡು ಓಡಾಡುತ್ತಿದ್ದ ಮುಕ್ತಾರ್ ಮೇಲೆ ಉಳ್ಳಾಲ ಪೊಲೀಸರು ಗುಂಡು ಹಾರಿಸಿ ಬಂಧನ ಮಾಡಿದ್ದಾರೆ.
ಮಂಗಳೂರು ಹೊರವಲಯದ ಕೊಣಾಜೆ ಠಾಣೆ ವ್ಯಾಪ್ತಿಯ ಅಸೈಗೋಳಿ ಬಳಿ ಈ ಘಟನೆ ನಡೆದಿದೆ. ಗಾಯಗೊಂಡ ರೌಡಿಯನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾವೂರು ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿರುವ ಮುಕ್ತಾರ್ ವಿರುದ್ಧ 15ಕ್ಕೂ ಹೆಚ್ಚು ಕೇಸುಗಳಿವೆ. ಈತನ ವಿರುದ್ಧ 2017 ರಿಂದ ಆರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಆದರೆ ಪೊಲೀಸರ ಕಣ್ತಪ್ಪಿಸಿಕೊಂಡಿದ್ದ.
ಇತ್ತೀಚೆಗೆ ಪ್ರಕರಣವೊಂದಕ್ಕೆ ಬೇಕಾಗಿದ್ದ ಈತನನ್ನು ವಶಕ್ಕೆ ಪಡೆದುಕೊಂಡಿದ್ದ ಉಳ್ಳಾಲ ಪೊಲೀಸರು, ಈತನನ್ನು ಕರೆದುಕೊಂಡು ಹಿಂದಿನ ಪ್ರಕರಣಗಳಲ್ಲಿ ವಾಹನಗಳನ್ನು ಬಳಸಿದ ಬಗ್ಗೆ ಮಹಜರು ನಡೆಸಲು ಇಂದು ಬೆಳಗ್ಗೆ ಅಸೈಗೋಳಿಗೆ ಕರೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ, ಪೊಲೀಸರಿಗೆ ಹಲ್ಲೆಗೈದ ಮುಕ್ತಾರ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಸಂದೀಪ್ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
You must log in to post a comment.