ಉರ್ಫಿ ಜಾವೇದ್ ಬ್ಲೇಡ್ ರಾಣಿಯಾಗಿ ಪ್ರತ್ಯಕ್ಷ । ಜಾಗ್ರತೆ ಮಾರಾಯ್ತಿ, ವಾಸ್ತು ಜಾಗಕ್ಕೆ ಗೀರಿಕೊಂಡೀತು ಹುಷಾರ್ ಎಂದ ಅಭಿಮಾನಿ !

ರಸಿಕರ ರವಳಿ, ನಮ್ಮ ಜವಳಿ ಖಾತೆಯ ಕೇಂದ್ರ ಸಚಿವೆ ಉರ್ಫಿ ಜಾವೇದ್ ಮೊನ್ನೆ ಸಾರಿ ಉಟ್ಟು ಸುದ್ದಿಯಾದದ್ದು ನೀವು ಕಂಡು ಕೇಳಿರಬಹುದು. ರವಳಿಯ ಭುಜದಲ್ಲಿ ರವಿಕೆ ನಿಲ್ಲಲು ರೊಳ್ಳೆ ತೆಗೆಯುತ್ತಿತ್ತು. ಅದಕ್ಕಾಗಿಯೇ, ಕುಬುಸ ಸಾವಾಸ ಬೇಡ ಎಂದು ಆಕೆ ಕೇವಲ ಒಳ ಬಟ್ಟೆಯಲ್ಲಿ ಬಂದಿದ್ದಳು. ಸೀರೆಯ ಬಹುಭಾಗ ಸೋರಿ ಹೋಗಿ ಕೆಲವೇ ಎಳೆಗಳು ಪೀಚಲಾಗಿ ಉಳಿದಿದ್ದವು. ಇರೋದ್ರಲ್ಲೇ ತೃಪ್ತಿ ಪಟ್ಟುಕೊಂಡು ಬರುವುದು ಉರ್ಫಿಯ ದೊಡ್ಡಸ್ತಿಕೆ. ಹೇಗೇಗೋ ಬಂದರೂ ಬರಮಾಡಿಕೊಳ್ಳುವುದು ಆಕೆಯ ಅಭಿಮಾನಿಗಳ ಇಂದಿನ ಮತ್ತು ಎಂದೆಂದಿನ ಅನಿವಾರ್ಯತೆ !

ಅದೆಲ್ಲ ಹಳೆಯದಾಯ್ತು. ಉರ್ಫಿ ಜಾವೇದ್ ಈ ಬಾರಿ ಬ್ಲೇಡ್ ರಾಣಿಯಾಗಿ ಪ್ರತ್ಯಕ್ಷ. ತನ್ನ ತರಹೇವಾರಿ ಫ್ಯಾಷನ್ ಲುಕ್ ಪ್ರದರ್ಶನದ ಭಾಗವಾಗಿ ಈ ಸಾರಿ ಬ್ಲೇಡ್ ನಿಂದ ಮೈ ಮುಚ್ಚಿಕೊಂಡು ಬಂದಿದ್ದಾಳೆ. ಆಕೆಯ ಕೆಲಸ ನೋಡಿ ಆಕೆಯ ಹಿತೈಷಿಗಳು ಗಾಬರಿ ಆಗಿದ್ದಾರೆ. ಆಕೆ ಹರಿತವಾದ 7 ಓ ಕ್ಲಾಕ್ ಬ್ಲೇಡ್ ಅನ್ನೆ ಬಟ್ಟೆಯಾಗಿ ಧರಿಸಿ ಬಂದಿದ್ದಾಳೆ. ‘ನಾವು ಬಟ್ಟೆಯನ್ನು ಧರಿಸುವುದು ಸುರಕ್ಷತೆಗಾಗಿ. ನೀನು ನೋಡಿದ್ರೆ, ಬ್ಲೇಡ್ ಅನ್ನೇ ವಸ್ತ್ರ ವಿನ್ಯಾಸ ಮಾಡಿಕೊಂಡು ಬಂದಿದ್ದೀಯಾ. ಸ್ವಲ್ಪ ಜಾಗ್ರತೆ ಮಾರಾಯ್ತಿ. ಆಯಕಟ್ಟಿನ ವಾಸ್ತು ಜಾಗಕ್ಕೆ ಗೀರಿಕೊಂಡೀತು ಹುಷಾರ್ ‘ ಅಂತ ಅಭಿಮಾನಿಗಳು ಎಚ್ಚರಿಕೆಯ ಮಾತಾಡಿದ್ದಾರೆ.

ಜನ ಮಾತಾಡಿದ್ದು ಆಕೆಗೆ ಕೇಳಿಸೋದು ಕಷ್ಟ. ಎಲ್ಲರ ಮಾತು ಕೇಳಿಕೊಂಡು ಬಂದು ಪ್ರತ್ಯಕ್ಷ ಆಗಲು ಆಕೆಗೆ ಸಮಯವೂ ಇಲ್ಲ, ಬಹುಶ: ಮನಸ್ಸೂ ಇರಲಿಕ್ಕಿಲ್ಲ. ಸಾಧಕರು ಯಾರನ್ನೂ ಕೇಳಿಕೊಂಡು ಹೋಗೋದಿಲ್ಲ. ಯಾರ ಅಭಿಪ್ರಾಯ ಕೇಳದೆ, ಕೇವಲ ಮಾಡುತ್ತಾ ಸಾಗುತ್ತಾರೆ. ಅದೇ ಒಂದಿನ ಟ್ರೆಂಡ್ ಆಗುತ್ತದೆ ಅನ್ನುವುದು ಆಕೆಯ ಪಾಲಿಸಿ.

Leave A Reply

Your email address will not be published.