Breaking News । ವಂಚನೆಯೆಂಬ ‘ಸ್ವಯಂ ಕೃಷಿ’ । ಕೋಟಿ ಕೋಟಿ ವಂಚಿಸಿದ ಸ್ಯಾಂಡಲ್ ವುಡ್ ನಾಯಕ ನಟನ ಬಂಧನ !

ಬೆಂಗಳೂರು: ಕೋಟಿ ಕೋಟಿ ವಂಚನೆ ಪ್ರಕರಣ ಸಂಬಂಧ ‘ಸ್ವಯಂ ಕೃಷಿ’ ಚಿತ್ರದ ನಟ, ನಿರ್ಮಾಪಕ, ನಿರ್ದೇಶಕರಾಗಿರುವ ವೀರೇಂದ್ರ ಬಾಬುವನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಮುಂದಿನ ಬಾರಿಯ ಚುನಾವಣೆಯಲ್ಲಿ ಶಾಸಕ ಹಾಗೂ ಸಂಸದ ಸ್ಥಾನಕ್ಕೆ ತಮ್ಮದೇ ಪಕ್ಷದಿಂದ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಹೊತ್ತ ಈತನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ರಾಷ್ಟ್ರ ಜನಹಿತ ಪಕ್ಷ ಎಂಬ ಹೆಸರಿನ ಪಕ್ಷವೊಂದನ್ನು ಕಟ್ಟಿಕೊಂಡಿರುವ ವೀರೇಂದ್ರ ಬಾಬು ಅವರು ಎಂಎಲ್‌ಎ, ಎಂಪಿ ಸೀಟಿಗೆ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ. ವೀರೇಂದ್ರ ಅವರ ವಿರುದ್ಧ ಬಸವರಾಜ್ ಘೋಷಾಲ್ ಎನ್ನುವವರು ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ, ಕರ್ನಾಟಕ ರಕ್ಷಣಾ ಪಡೆಯಲ್ಲಿ ತಾಲೂಕು ಮತ್ತು ಜಿಲ್ಲಾಧ್ಯಕ್ಷನ ಸ್ಥಾನ ನೀಡುವುದಾಗಿಯೂ ಹೇಳಿ ಹಲವರಿಗೆ ವಂಚಿಸಿದ್ದಾರೆ. ಸದ್ಯ ಇವರ ವಿರುದ್ಧ 1.8ಕೋಟಿ ರೂಪಾಯಿ ವಂಚನೆ ಆರೋಪವಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮೂರು ವರ್ಷಗಳ ಹಿಂದೆ ‘ಸ್ವಯಂ ಕೃಷಿ’ ಹೆಸರಲ್ಲಿ ಹತ್ತಾರು ಕಂಪೆನಿಗಳನ್ನು ಹುಟ್ಟುಹಾಕಿ, ಅನೇಕ ಜನರಿಗೆ ವಂಚನೆಯನ್ನು ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಆಗ ಹೈದರಾಬಾದ್‌ನಲ್ಲಿ ಪೊಲೀಸರು ವೀರೇಂದ್ರ ಬಾಬು ಅವರನ್ನು ಬಂಧಿಸಿದ್ದರು. ಇದೀಗ ಮತ್ತೆ ಅವರ ಮೇಲೆ ಕೋಟ್ಯಂತರ ರೂ. ಹಣ ವಂಚನೆ ಆರೋಪ ಕೇಳಿಬಂದಿದೆ.

ವೀರೇಂದ್ರ ಬಾಬು ಅವರು, 2011ರಲ್ಲಿ ಸ್ವಯಂ ಕೃಷಿ ಚಿತ್ರವನ್ನು ನಿರ್ಮಿಸಿ ನಟಿಸಿದ್ದಾರೆ. ಈ ವೀರೇಂದ್ರ ಬಾಬು ಜತೆ ತಮನ್ನಾ ಪಾಷಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅಂಬರೀಷ್, ಸುಮನ್ ಜಿಕೆ, ಚರಣ್ ರಾಜ್, ರೇಖಾ ವಿ.ಕುಮಾರ್, ಸತ್ಯಜಿತ್, ಉಮಾಶ್ರೀ, ರಂಘಾಯಣ ರಘು ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.

Leave A Reply

Your email address will not be published.