ಮದ್ಯಮಾರಾಟದಲ್ಲಿ ದ.ಕ ನಂಬರ್ ವನ್ : ಮಂಗಳೂರು ಅಬಕಾರಿ ಡಿಸಿಯಿಂದ ಬಂತು ಶಾಕಿಂಗ್ ಹೇಳಿಕೆ

ನಿನ್ನೆ ಮದ್ಯದ್ದೇ ಮಾತು. ಅದರಲ್ಲೂ ದ.ಕ.ಜಿಲ್ಲೆಯದ್ದೇ ಎಲ್ಲರ ಬಗ್ಗೆ ಮಾತು. ಏಕೆಂದರೆ ಮದ್ಯ ಮಾರಾಟದಲ್ಲಿ ಬುದ್ಧಿವಂತರ ಜಿಲ್ಲೆ ಎಂದೇ ಖ್ಯಾತಿ ಹೊಂದಿದ ದ.ಕ ಜಿಲ್ಲೆಗೆ ಟಾಪ್ ಸ್ಥಾನ ದೊರಕಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಅಷ್ಟೇ ವೇಗದಲ್ಲಿ ಈ ಸಂಚಲನದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಕೂಡಾ.

ಆದರೆ ಈ ಸುದ್ದಿಗೆ ಸಂಬಂಧಿಸಿದಂತೆ ಮಂಗಳೂರು ಅಬಕಾರಿ ಡಿಸಿ ಬಿಂದುಶ್ರೀ ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ಬಹುಶಃ ಈ ಸ್ಪಷ್ಟನೆಯಿಂದಾಗಿ ದ.ಕ. ಜನತೆಗೆ ಸ್ವಲ್ಪ ನಿರಾಳತೆ ಮೂಡಬಹುದೇನೋ?…ಬನ್ನಿ ಅದೇನು ತಿಳಿಯೋಣ.

ಮಂಗಳೂರು ಅಬಕಾರಿ ಡಿಸಿ ಬಿಂದುಶ್ರೀ ಅವರು ಹೇಳಿರುವ ಪ್ರಕಾರ, ಇದೊಂದು ಸುಳ್ಳು ಸುದ್ದಿ. ನಾವು ಯಾರಿಗೂ ವರದಿಯನ್ನು ಕೊಟ್ಟಿಲ್ಲ. ರಾಜ್ಯದಲ್ಲಿ ದ.ಕ ಜಿಲ್ಲೆಯಲ್ಲಿ ಅತೀ ಹೆಚ್ಚು ಮದ್ಯ ಮಾರಾಟ ಎನ್ನುವುದು ತಪ್ಪು ವಿಚಾರ. ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಮಗಿಂತ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟ ಆಗಿದೆ. ಈ ಬಗ್ಗೆ ಯಾವುದೇ ವರದಿಯನ್ನು ನಮ್ಮ ಇಲಾಖೆ ವತಿಯಿಂದ ಕೊಟ್ಟಿಲ್ಲ. ಲೀಟರ್ ಲೆಕ್ಕಾಚಾರದಲ್ಲಿ ಹೇಳಿದರೂ ನಮಗಿಂತ ಬೇರೆ ಜಿಲ್ಲೆಗಳಲ್ಲಿ ಮದ್ಯ ಮಾರಾಟ ಹೆಚ್ಚಾಗಿದೆ. ಆದರೆ ಕೋವಿಡ್ ಬಳಿಕ ನಮ್ಮ ಜಿಲ್ಲೆಯಲ್ಲಿ ಸ್ವಲ್ಪ ಮದ್ಯ ಮಾರಾಟ ಹೆಚ್ಚಾಗಿರುವುದು ನಿಜ. ಹಾಗಂತ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅದು ಕಡಿಮೆ. ಹೀಗಾಗಿ ದ.ಕ ಜಿಲ್ಲೆ ಮದ್ಯ ಮಾರಾಟದಲ್ಲಿ ಟಾಪರ್ ಎಂಬ ಸುದ್ದಿ ಸುಳ್ಳು ಅಂತ ಸ್ಪಷ್ಟನೆ ಕೊಟ್ಟಿದ್ದಾರೆ.

ಅಸಲಿಗೆ ಕೆಎಸ್ ಬಿಸಿಎಲ್ ಮೂಲಕ ಈ ವರ್ಷ ಬರೋಬ್ಬರಿ 25 ಲಕ್ಷ ಬಾಟಲ್ ಮದ್ಯ ಮಾರಾಟವಾಗಿದ್ದು ನಿಜ. ಅದರ ಲೆಕ್ಕಾಚಾರ ಪ್ರಕಾರ ಲೀಟರ್ ಗೆ ಹೋಲಿಸಿದರೆ ಕೋಟಿ ದಾಟಬಹುದು. ಆದರೆ ನಮಗಿಂತಲೂ ಹೆಚ್ಚು ಲೀಟರ್ ಗಳಲ್ಲಿ ಬೇರೆ ಜಿಲ್ಲೆಗಳಲ್ಲಿ ಮದ್ಯ ಮಾರಾಟವಾಗುತ್ತದೆ. ಆದರೆ ಎಲ್ಲೂ ಬೇರೆ ಜಿಲ್ಲೆಗಳ ಮದ್ಯ ಮಾರಾಟದ ವರದಿ ಇಲ್ಲ.

ಕೇವಲ ದ.ಕ ಜಿಲ್ಲೆಯ ಮದ್ಯ ಮಾರಾಟದ ಲೆಕ್ಕಾಚಾರ ಇಟ್ಟುಕೊಂಡು ಅಗ್ರಸ್ಥಾನ ಎನ್ನಲು ಬರಲ್ಲ. ಹಾಗೇನಿದ್ದರೂ ರಾಜ್ಯ ಅಬಕಾರಿ ಇಲಾಖೆ ಮಾಹಿತಿ ನೀಡುತ್ತದೆ. ಇನ್ನು ಕೆಎಸ್ ಬಿಸಿಎಲ್ ಮೂಲಕ ನಾವು ಜಿಲ್ಲೆಯ ಮದ್ಯದಂಗಡಿಗಳಿಗೆ ಮದ್ಯ ಮಾರಾಟ ಮಾಡಿದ್ದೇವೆ ನಿಜ. ಆದರೆ ಅವೆಲ್ಲವೂ ನಮ್ಮ ಮಾರಾಟದ ಲೆಕ್ಕವೇ ಹೊರತು ಗ್ರಾಹಕರಿಗೆ ತಲುಪಿದ ಲೆಕ್ಕವಲ್ಲ ಎಂದಿದ್ದಾರೆ.

Leave A Reply

Your email address will not be published.