ಅಂತ್ಯಸಂಸ್ಕಾರ ಸಹಾಯಧನ ಸದ್ದಿಲ್ಲದೇ ಸ್ಥಗಿತಗೊಳಿಸಿದ ರಾಜ್ಯ ಸರಕಾರ

ಸರಕಾರವು ಬಡತನ ರೇಖೆಗಿಂತ ಕೆಳಗಿರುವವರು ಮೃತಹೊಂದಿದರೆ ಅಂತ್ಯಸಂಸ್ಕಾರಕ್ಕೆಂದು ನೀಡುವ 5 ಸಾವಿರ ರೂ. ಮೊತ್ತ ಕೈ ಸೇರುವಾಗ ವಿಳಂಬವಾಗುತ್ತಿದೆ  ಎಂಬ ಆರೋಪದ ಮಧ್ಯೆಯೇ ರಾಜ್ಯ ಸರಕಾರ ಈ ಸದ್ದಿಲ್ಲದೆ ಯೋಜನೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

2021-22 ನೇ ಸಾಲಿನ ಆಯ್ಯವ್ಯಯದಲ್ಲಿ ಅಂತ್ಯ ಸಂಸ್ಕಾರ ಯೋಜನೆಯ ಅನುಷ್ಠಾನಕ್ಕೆ ಯಾವುದೇ ಅನುದಾನ ಲಭ್ಯವಿಲ್ಲದ ಕಾರಣ ಅಂತ್ಯ ಸಂಸ್ಕಾರ ಯೋಜನೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಅಂತ್ಯಸಂಸ್ಕಾರ ಯೋಜನೆಯಡಿ 2021ರ ಆಗಸ್ಟ್ ಅಂತ್ಯಕ್ಕೆ ರಾಜ್ಯದ ಜಿಲ್ಲೆಗಳಲ್ಲಿ ಸ್ವೀಕೃತಗೊಂಡ ಅರ್ಜಿಗಳಿಗೆ ಮಾತ್ರ ಸೌಲಭ್ಯ ವಿತರಿಸಲು ಆರ್ಥಿಕ ಇಲಾಖೆ ಸೂಚನೆ ನೀಡಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಅಂತ್ಯಸಂಸ್ಕಾರ ಯೋಜನೆಯಡಿ ಒಟ್ಟು 36,622 ಅರ್ಜಿಗಳು ಸಲ್ಲಿಕೆಯಾಗಿವೆ.ಇದರಲ್ಲಿ ಪರಿಶಿಷ್ಟ ಪಂಗಡದ 5,003, ಪರಿಶಿಷ್ಟ ಜಾತಿಯ 7,589 ಹಾಗೂ ಇತರ ಸಮುದಾ ಯದ 24,030 ಅರ್ಜಿಗಳಿವೆ. ಜಿಲ್ಲೆಗೆ ಒಟ್ಟು 1.35 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ವಿತರಣೆಯಾಗಿದೆ. ಸಲ್ಲಿಕೆಯಾದ 36,622 ಅರ್ಜಿಗಳಲ್ಲಿ 909 ಅರ್ಜಿಗಳಿಗೆ ಪರಿಹಾರ ವಿತರಣೆ ಬಾಕಿಯಿದ್ದು, 45.45 ಲಕ್ಷ ರೂ. ಅನುದಾನಕ್ಕೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ.

ಆರ್ಥಿಕ ಇಲಾಖೆಯ ಟಿಪ್ಪಣಿಯಲ್ಲಿ 2021ರ ಆಗಸ್ಟ್ ತಿಂಗಳ ಅಂತ್ಯಕ್ಕೆ ಬಾಕಿ ಇದ್ದ ಅರ್ಜಿಗಳಿಗೆ 17.92 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ, ಫಲಾನುಭವಿಗಳಿಗೆ ಮೂರು ತಿಂಗಳೊಳಗಾಗಿ ಷರತ್ತಿಗೊಳಪಟ್ಟು ವಿತರಿಸಲು ರಾಜ್ಯದ ಆಯಾ ಜಿಲ್ಲಾಧಿ ಕಾರಿಗಳ ಪಿಡಿಪಿ ಖಾತೆಯಲ್ಲಿರಿಸಿ ಸರಕಾರದ ಕಂದಾಯ ಇಲಾಖೆ ಕಾರ್ಯದರ್ಶಿ ಜಯಲಕ್ಷ್ಮೀ ಆದೇಶ ಹೊರಡಿಸಿದ್ದಾರೆ.

ಬಡವರಿಗೆ ನೆರವಾಗಬೇಕಾದ ಯೋಜನೆಗೆ ಹಣಕಾಸಿನ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಸರಕಾರ ಅಂತ್ಯಸಂಸ್ಕಾರ ಯೋಜನೆಗೆ ನಿಲ್ಲಿಸಿದೆ. ಸರಕಾರದ ಈ ನಡೆಗೆ ಬಡವರ್ಗದ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಬಡತನ ರೇಖೆಯಲ್ಲಿರುವ ಕುಟುಂಬಸ್ಥರಲ್ಲಿ ಯಾರಾದರೂ ಮೃತಪಟ್ಟರೆ ಅವರ ಅಂತ್ಯಸಂಸ್ಕಾರಕ್ಕೆ ಹಣ ನೀಡುವುದೇ ಈ ಯೋಜನೆಯ ಉದ್ದೇಶವಾಗಿದೆ. ಮೃತರ ಅಂತ್ಯಸಂಸ್ಕಾರ ಮಾಡಿದವರು ಅಥವಾ ಅವರ ಕುಟುಂಬದವರು ಫಲಾನುಭವಿಗಳಾಗಿರುತ್ತಾರೆ. ಕಂದಾಯ ಇಲಾಖೆ ತಹಶೀಲ್ದಾರರ ಮೂಲಕ ಯೋಜನೆಯ ಪರಿಹಾರವನ್ನು ನೀಡುತ್ತದೆ. ಯೋಜನೆ ಪ್ರಾರಂಭದಲ್ಲಿ ಪರಿಹಾರ ರೂಪದಲ್ಲಿ 1 ಸಾವಿರ ರೂ. ನೀಡಲಾಗುತ್ತಿತ್ತು. ಈಗ 5 ಸಾವಿರ ಹಣವನ್ನು ಪರಿಹಾರದ ರೂಪದಲ್ಲಿ ನೀಡಲಾಗುತ್ತದೆ.

Leave A Reply

Your email address will not be published.