ಉಡುಪಿ : ತಾಯಿ ಊಟ ಬಡಿಸಿಲ್ಲ ಎಂದು ನೇಣಿಗೆ ಕೊರಳೊಡ್ಡಿದ ಬಾಲಕ!

ಉಡುಪಿ: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಘಟನೆಗಳು ಸಾಕಷ್ಟು ವರದಿಯಾಗಿದ್ದು, ಇದೇ ರೀತಿ ಜಿಲ್ಲೆಯ ಕೋಟದಲ್ಲಿ ತಾಯಿಯು ಊಟ ಬಡಿಸಿಲ್ಲ ಎಂಬ ಸಣ್ಣ ಕಾರಣಕ್ಕೆ ಬಾಲಕನೋರ್ವ ನೇಣಿಗೆ ಶರಣಾದ ಘಟನೆ ಸೋಮವಾರದಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಕೋಟ ಸಮೀಪದ ಕಾರ್ಕಡ ನಿವಾಸಿ ಲಕ್ಷ್ಮೀ ಎಂಬವರ ಪುತ್ರ 9ನೇ ತರಗತಿ ವಿದ್ಯಾರ್ಥಿ ನಾಗೇಂದ್ರ (14) ಎಂದು ಗುರುತಿಸಲಾಗಿದೆ.

ನಾಗೇಂದ್ರನ ತಾಯಿ ಲಕ್ಷ್ಮೀ ಅವರು, ಜೀವನೋಪಾಯಕ್ಕಾಗಿ ಕಾರ್ಕಡದ ತನ್ನ ಮನೆಪಕ್ಕದಲ್ಲೇ ವೀರಭದ್ರ ಎಂಬ ಸಣ್ಣ ಕ್ಯಾಂಟೀನ್‌ ನಡೆಸುತ್ತಿದ್ದಾರೆ. ವಿಪರೀತ ಮಳೆ ಹಿನ್ನೆಲೆ ಶಾಲೆಗೆ ರಜೆಯಿದ್ದ ಕಾರಣ ನಾಗೇಂದ್ರ ಕಾರ್ಕಡ ಶಾಲಾ ಮೈದಾನಲ್ಲಿ ಆಡಲು ಹೋಗಿದ್ದು, ಮಧ್ಯಾಹ್ನ ಊಟಕ್ಕೆಂದು ಕ್ಯಾಂಟಿನ್ ಬಳಿ ಬಂದಿದ್ದಾನೆ.

ಬಳಿಕ ಬಾಲಕ ತಾಯಿ ಬಳಿ ಊಟ ಬಡಿಸಲು ಹೇಳಿದ್ದಾನೆ. ಇದೇ ವೇಳೆ ಕ್ಯಾಂಟೀನ್‌ನಲ್ಲಿ ಗ್ರಾಹಕರಿದ್ದುದರಿಂದ ಮಗನಿಗೆ ಮನೆಗೆ ಹೋಗಿ ಊಟ ಬಡಿಸಿಕೊಂಡು ಉಣ್ಣುವಂತೆ ತಾಯಿ ಹೇಳಿದ್ದಾರೆ. ಆದರೆ ಇಷ್ಟಕ್ಕೆ ಸಿಟ್ಟುಗೊಂಡ ಆತ ಮನೆಯಲ್ಲಿ ಬಟ್ಟೆ ಒಣಗಿಸಲು ಸಿಟೌಟ್‌ನಲ್ಲಿ ಕಟ್ಟಿದ ಹಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕ ನಾಗೇಂದ್ರನ ತಂದೆ ಕೃಷ್ಣ ಪೂಜಾರಿ ಎರಡು ವರ್ಷದ ಹಿಂದೆ ಮೃತಪಟ್ಟಿದ್ದು, ಅವರ ಚಿಕಿತ್ಸೆಗಾಗಿ ಸಾಕಷ್ಟು ಸಾಲ ಮಾಡಲಾಗಿತ್ತು. ಗಂಡನ ಸಾವಿನ ನಂತರ ಲಕ್ಷ್ಮಿ ಪೂಜಾರ್ತಿ ಚಿಕ್ಕ ವಯಸ್ಸಿನ ಮಗ ಮಗಳೊಂದಿಗೆ ಪುಟ್ಟ ಕ್ಯಾಂಟೀನ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಮುಂದೆ ಮನೆಗೆ ಆಧಾರವಾಗಬೇಕಾಗಿದ್ದ ಮಗನೂ ಆತ್ಮಹತ್ಯೆ ಶರಣಾಗಿದ್ದರಿಂದ ತಾಯಿಗೆ ದಿಕ್ಕು ತೋಚದಂತಾಗಿದೆ.

Leave A Reply

Your email address will not be published.