ಥ್ರಿಲ್ಲರ್ ಮರ್ಡರ್ ಕೇಸ್ ಟ್ವಿಸ್ಟ್ | ಸುಟ್ಟು ಕರಕಲಾಗಿ ಪೊದೆಯಲ್ಲಿ ಎಸೆದು ಹೋದ ಶವದ ಕೊಲೆ ರಹಸ್ಯ ಭೇದಿಸಿದ ಆ ಒಂದು ಕ್ಲೂ…ಏನದು?

ಕೆಲವೊಮ್ಮೆ ಕೆಲವೊಂದು ಕೇಸ್ ಗಳು ಎಷ್ಟಯ ಕಗ್ಗಂಟಾಗಿ ಇರುತ್ತದೆ ಎಂದರೆ ಬಿಡಿಸಲಾಗದ ಸಂಘರ್ಷಕ್ಕೆ ಉಂಟು ಮಾಡುತ್ತದೆ. ಆದರೆ ಇಲ್ಲೊಂದು ಘಟನೆಯಲ್ಲಿ ಪೊಲೀಸರು ಒಂದು ಅನಾಥವಾಗಿ ಬಿದ್ದಿದ್ದ ಮೃತದೇಹದ ಜಾಡನ್ನು ಪತ್ತೆ ಹಚ್ಚಿದ ರೋಚಕ ಕಥ ಇಲ್ಲಿದೆ. ಅದೇನು ತಿಳಿಯೋಣ ಬನ್ನಿ.

ಮೃತ ದೇಹ ಮುಕ್ಕಾಲು ಭಾಗ ಸುಟ್ಟು ಹೋಗಿದ್ದರೂ, ಕೊಲೆ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಭಾರೀ ಕುತೂಹಲದ ವಿಷಯವಾಗಿದೆ. ಪೊಲೀಸರ ಈ ನಡೆಗೆ ಶಹಬ್ಬಾಶ್ ಎನ್ನಲೇಬೇಕು. ಅಷ್ಟಕ್ಕೂ ಸುಟ್ಟು ಹೋದ ದೇಹ ಮುಕ್ಕಾಲು ಭಾಗ ಕಾಣದೇ ಹೋದರೂ, ಆ ಹೆಣದ ಕೈ ಬೆರಳಿನಲ್ಲಿ ಉಳಿದು ಕೊಂಡಿದ್ದ ಸಣ್ಣ ಉಂಗುರವೊಂದು ಕೊಲೆಯ ಕೃತ್ಯವನ್ನು ಬಯಲಿಗೆ ಎಳೆಯುವಲ್ಲಿ ಪೊಲೀಸರಿಗೆ ನೆರವಾಗಿದೆ.

ಈ ಘಟನೆ ನಡೆದಿರುವುದು ಬೆಂಗಳೂರಿನ ಕೆಂಗೇರಿಯ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ. ಇಲ್ಲಿ ಪೊದೆಯೊಂದರಲ್ಲಿ ಜುಲೈ 3 ರಂದು ಸುಟ್ಟು ಹೋಗಿದ್ದ ಮಹಿಳೆಯ ಮೃತ ದೇಹ ಪತ್ತೆಯಾಗಿತ್ತು. ಈ ಮೃತದೇಹದ ಬಗ್ಗೆ ಇದು ಕೊಲೆಯೊ ಅಥವಾ ಏನು ಎಂದು ಪತ್ತೆ ಹಚ್ಚುವ ಕೆಲಸ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಆದರೆ ಒಂದು ಸಾಕ್ಷಿ ಪೊಲೀಸರಿಗೆ ದೊರಕಿತ್ತು. ಕೊಲೆಗಾರ ಎಷ್ಟೇ ಚಾಣಾಕ್ಷನಾಗಿದ್ದರೂ, ಒಂದು ಸಾಕ್ಷಿ ಬಿಟ್ಟೇ ಬಿಡುತ್ತಾನೆಂಬ ಮಾತಿದೆ. ಅದರಂತರ, ಮೃತ ದೇಹದ ಕೈ ಬೆರಳಿನಲ್ಲಿದ್ದ ಸಣ್ಣ ಉಂಗುರದ ಮಾಹಿತಿ ಪಡೆದ ಇನ್ಸ್‌ಪೆಕ್ಟರ್ ಸಿ. ವಸಂತ್ ನೇತೃತ್ವದ ತನಿಖಾ ತಂಡ, ಅದನ್ನು ಸಾಕ್ಷ್ಯವನ್ನಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿತ್ತು.

ಮೃತ ಮಹಿಳೆಯ ಸುಳಿವು ಪತ್ತೆ ಹಚ್ಚುವ ಸಲುವಾಗಿ ಪೊಲೀಸರು ಹೌಸ್ ಕೀಪಿಂಗ್ ಕೆಲಸ ಮಾಡುವ ಏಜೆನ್ಸಿಗಳ ವಿಚಾರಣೆ ನಡೆಸುತ್ತಿದ್ದಾಗ ಮೃತ ದೇಹದಲ್ಲಿ ಸಿಕ್ಕಿದ್ದ ಉಂಗುರವನ್ನು ಒಬ್ಬ ಮಹಿಳೆಗೆ ತೋರಿಸಲಾಯಿತು. ಅದರಲ್ಲಿ ಐ ಲವ್ ಹಿಮ್ ಎಂದು ಬರೆಯಲಾಗಿತ್ತು. ಅದನ್ನು ನೋಡಿದ ಮಹಿಳೆ, ಇದು ನಗೀನಾ ಧರಿಸುತ್ತಿದ್ದಳು ಎಂಬ ಮಾಹಿತಿ ನೀಡಿದಳು. ಅದರಂತೆ ನಗೀನಾ ಪೋಷಕರನ್ನು ಪತ್ತೆ ಹಚ್ಚಿದಾಗ ಅವರು ಮೃತ ದೇಹ ನಗೀನಾಳದ್ದೇ ಎಂದು ಗುರುತು ಹಿಡಿದರು.

ಆ ಉಂಗುರ ಕಡೆಗೆ ಸುಟ್ಟು ಹೋಗಿದ್ದ ಮಹಿಳೆ ನಗೀನಾಳದ್ದು ಎಂದು ಕಂಡು ಹಿಡಿಯಲು ನೆರವಾಗಿದೆ. ಈ ಮಾಹಿತಿ ಖಚಿತಪಡಿಸಿಕೊಂಡ ತನಿಖಾ ತಂಡ, ನಗೀನಾಳ ಪತಿ ಮೊಹಮದ್ ರಫೀಕ್, ಆತನ ಸ್ನೇಹಿತ ಎಚ್. ಪ್ರಜ್ವಲ್‌ನನ್ನು ಬಂಧಿಸಿದೆ.

ತುಮಕೂರು ಮೂಲದ ನಗೀನಾ ಹಾಗೂ ಯಾದಗಿರಿ ಮೂಲದ ರಫೀಕ್, ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು.ಇವರು ಸನ್ ಸಿಟಿಯಲ್ಲಿ ವಾಸಿಸುತ್ತಿದ್ದರು. ಇಬ್ಬರಿಗೂ ಇದು ಎರಡನೇ ಮದುವೆ. ನಗೀನಾ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರೆ, ರಫೀಕ್ ಜೆಸಿಬಿ ಚಾಲಕನಾಗಿದ್ದ.

ಇವರ ಈ ಸುಖ ಸಂಸಾರಕ್ಕೆ ಎಂಟ್ರಿ ಕೊಟ್ಟದ್ದೇ ” ಸಂಶಯ” ಎಂಬ ಭೂತ. ಹೌದು ನಗೀನಾ ಪತಿಗೆ
ನಗೀನಾ ಇತ್ತೀಚೆಗೆ ಮತ್ತೊಬ್ಬ ಯುವಕನ ಜತೆ ಅನೈತಿಕ ಸಂಬಂಧ ಹೊಂದಿರುವ ಅನುಮಾನ ಬಂತು. ಈ ವಿಚಾರಕ್ಕೆ ಇಬ್ಬರ ನಡುವೆ ಹಲವು ಬಾರಿ ಜಗಳ ನಡೆದಿತ್ತು. ಜಗಳ ಕೊನೆಗೆ ಕೊಲೆಯ ಹಾದಿ ಹಿಡಿದದೆ.

ನಗೀನಾಳನ್ನೇ ಕೊಲೆ ಮಾಡುವ ನಿರ್ಧಾರಕ್ಕೆ ಬಂದ ರಫೀಕ್, ಸ್ನೇಹಿತ ಪ್ರಜ್ವಲ್ ಜತೆ ಸೇರಿ ಹತ್ಯೆಯ ಸಂಚು ರೂಪಿಸಿದ್ದ.

ಜುಲೈ 1 ರಂದು ರಾತ್ರಿ 8.30 ರ ಸುಮಾರಿಗೆ ನಗೀನಾಳಿಗೆ ಕರೆ ಮಾಡಿದ್ದ ರಫೀಕ್, ತಾನು ಕುಡಿದು ಧನನಾಯಕನ ಹಳ್ಳಿ ಬಳಿ ಬಿದ್ದು ಹೋಗಿದ್ದೇನೆ, ಬಂದು ಮನೆಗೆ ಕರೆದುಕೊಂಡು ಹೋಗು ಎಂದಿದ್ದ. ಆತನ ಮಾತನ್ನು ನಂಬಿದ ನಗೀನಾ, ತನ್ನ ದ್ವಿ ಚಕ್ರ ವಾಹನದಲ್ಲಿ ಬಂದಿದ್ದಳು. ಈ ವೇಳೆ ಆಕೆಯನ್ನು ಸ್ನೇಹಿತ ಪ್ರಜ್ವಲ್ ಜತೆ ಸೇರಿ ಕತ್ತು ಬಿಗಿದು ಕೊಲೆ ಮಾಡಿದ್ದ ರಫೀಕ್, ಮೃತ ದೇಹವನ್ನು ಪೆಟ್ರೋಲ್ ಸುರಿದು ಸುಟ್ಟು ಹಾಕಿ ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಪಿ ಕೊಲೆಗಾರ ಆತನೇ ಚಾಣಾಕ್ಷ ಎಂದು ತಿಳಿದುಕೊಂಡರೂ, ಪೊಲೀಸರ ಕಣ್ಣಿಂದ ತಪ್ಪಿಸುವಲ್ಲಿ ಅಸಮರ್ಥನಾಗಿದ್ದಾನೆ. ಆತ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾನೆ. ತನ್ನ ಸಂಶಯದ ಭೂತಕ್ಕೆ ನಿರ್ದಾಕ್ಷಿಣ್ಯವಾಗಿ ಹೆಂಡತಿಯನ್ನು ಕೊಂದ ಪತಿ ಈಗ ಪೊಲೀಸರ ವಶದಲ್ಲಿದ್ದಾನೆ.

Leave A Reply

Your email address will not be published.