“ಕ್ರೇಜಿ” ಕುಟುಂಬದಲ್ಲಿ ಅದ್ಧೂರಿ ಮದುವೆಗೆ ದಿನಗಣನೆ | ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ಕೈ ಹಿಡಿಯೋ ಕನ್ಯೆ ಇವರೇ ನೋಡಿ!!!

ಚಿರಯೌವ್ವನದ ಚಿಲುಮೆ, ಹೆಂಗಳೆಯರ ಫೆವರೇಟ್, ರಸಿಕರ ರಾಜ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಇಷ್ಟೊಂದು ವಯಸ್ಸಾಯಿತೇ ಎಂದರೆ ನಂಬಲಸಾಧ್ಯ. ಏಕೆಂದರೆ ಕ್ರೇಜಿ ಕುಟುಂಬದಲ್ಲಿ ಮಂಗಳವಾದ್ಯ ಮೊಳಗಲು ವೇದಿಕೆ ಸಜ್ಜಾಗಿದೆ. ರವಿಚಂದ್ರನ್ ಅವರ ಮಗ ಮದುವೆಯಾಗುತ್ತಿದ್ದಾರೆ.

ಕನ್ನಡ ಚಿತ್ರರಂಗದ ರಸಿಕ, ನಿನ್ನೆ ಮೊನ್ನೆಯವರೆಗೆ ನಾಯಕಿ ನಟಿಯರ ಸೊಂಟದ ಮೇಲೆ, ಹೊಕ್ಕುಳ ಕೆಳಗೆ ಬುಗುರಿ ಬಿಡುತ್ತ, ಕನ್ನಡತಿಯರ ಕನಸಲ್ಲಿ ಅಚಾನಕ್ಕಾಗಿ ಬಂದು ಕಚುಗುಳಿ ಇಡುತ್ತಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಗೆ ಮದುವೆ ವಯಸ್ಸಿಗೆ ಬಂದ ಮಗನಿದ್ದಾನೆಯೇ ಎಂಬ ಆಶ್ಚರ್ಯ ಮೂಡುತ್ತಿದೆ.

ನಿನ್ನೆ ಮೊನ್ನೆ ತನಕ ರಂಭಾ, ರವಳಿ, ಬಿಂದಿಯಾ ಮುಂತಾದ ಹಲವು ನಟಿಯರ ಹೊಕ್ಕುಳಲ್ಲಿ ಬುಗುರಿಯಾಡುತ್ತಿದ್ದ ಮಲ್ಲರ ಮಲ್ಲ, ಈ ಹುಡುಗಾಟದ ಹುಡುಗನ ಹುಡುಗನಿಗೆ ಮದುವೆಯಾಗುತ್ತಿದೆಯೇ ?

‘ಕ್ರೇಜಿ ಸ್ಟಾರ್’ ರವಿಚಂದ್ರನ್ ಮನೆಯಲ್ಲಿ ಈಗ ಮತ್ತೊಮ್ಮೆ ಮಂಗಳವಾದ್ಯ ಮೊಳಗಲಿದೆ. ಮೂರು ವರ್ಷದ ಹಿಂದೆ ಕ್ರೇಜಿ ಸ್ಟಾರ್ ಅವರ ಮನೆಯಲ್ಲಿ ಅದ್ದೂರಿ ಮದುವೆ ನಡೆದಿತ್ತು. ಪುತ್ರಿ ಗೀತಾಂಜಲಿ ಅವರ ಮದುವೆಯನ್ನು 2019ರಲ್ಲಿ ರವಿಚಂದ್ರನ್ ಅದ್ಧೂರಿಯಾಗಿಯೇ ಮಾಡಿದ್ದರು. ಮಗಳ ಮದುವೆ ನಂತರ ಈಗ ರವಿಚಂದ್ರನ್ ಅವರು ಮಗನ ಮದುವೆ ಮಾಡಲು ಸಜ್ಜಾಗಿದ್ದಾರೆ. ರವಿಚಂದ್ರನ್ ಮೊದಲ ಮಗ ಮದುವೆ ನಿಶ್ಚಯವಾಗಿದೆ. ಹಾಗಾದರೆ ಮದುವೆ ಯಾವಾಗ? ಯಾರು ಹುಡುಗಿ? ಮುಂದೆ ಓದಿ.

ರವಿಚಂದ್ರನ್‌ಗೆ 3 ಜನ ಮಕ್ಕಳು. ಅದರಲ್ಲಿ ಮಗಳಿಗೆ ಈಗಾಗಲೇ ಮದುವೆ ಕೊಟ್ಟಿದ್ದಾರೆ. ಸದ್ಯ ಹಿರಿಯ ಮಗ ಮನೋರಂಜನ್ ಮದುವೆಗೆ ಸಜ್ಜಾಗಿದ್ದಾರೆ. ಕಿರಿಯ ಪುತ್ರ ವಿಕ್ರಂ ಮೊದಲ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಈಗತಾನೇ ಮದುವೆ ಕುರಿತು ಮಾಹಿತಿ ಹೊರಬಿದ್ದಿದೆಯಾದರೂ, ಹುಡುಗಿ ಯಾರು ಅನ್ನೋ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ. ಆದರೆ ವಧು ವೈದ್ಯಕೀಯ ಹಿನ್ನೆಲೆಯವರು ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ಮದುವೆ ಆಗಸ್ಟ್ 21 ಹಾಗೂ 22ರಂದು ನಡೆಯಲಿದೆ. ಇದೇ ದಿನಾಂಕದಲ್ಲಿ ಮನೋರಂಜನ್ ಹಸೆಮಣೆ ಏರುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇತ್ತ ಕಡೆ ‘ಕ್ರೇಜಿ ಸ್ಟಾರ್’ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸೋ ಕೆಲಸ ಶುರು ಮಾಡಿದ್ದಾರೆ. ಆದರೆ ಮನೋರಂಜನ್ ಮದುವೆ ಕುರಿತಂತೆ ಈವರೆಗೂ ಯಾರೊಬ್ಬರು ಕೂಡ ಅಧಿಕೃತ ಹೇಳಿಕೆ ನೀಡಿಲ್ಲ.

ಮನೋರಂಜನ್ ವರಿಸಲಿರುವ ಹುಡುಗಿ, ಸಿನಿಮಾರಂಗಕ್ಕೆ ಸಂಬಂಧ ಪಟ್ಟ ಹುಡುಗಿಯೇ ಎನ್ನುವ ಬಗ್ಗೆ ಹಲವರಲ್ಲಿ ಕುತೂಹಲ ಇದೆ. ಆದರೆ ರವಿಚಂದ್ರನ್ ಹಿರಿಯ ಸೊಸೆ ಯಾರು ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಮನೋರಂಜನ್ ಕೈ ಹಿಡಿಯುತ್ತಿರುವ ಹುಡುಗಿ ಬೆಂಗಳೂರಿನವರೇ ಅಂತೆ. ವಿಲ್ಸನ್ ಗಾರ್ಡನ್ ನಿವಾಸಿಯಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಮಾತ್ರವೇ ತಿಳಿದು ಬಂದಿದೆ.

ಇದು ಅರೇಂಜ್ ಮ್ಯಾರೇಜ್ ಅಂತ ಮಾಹಿತಿ ಇದೆ. ಅಪ್ಪ, ಅಮ್ಮ ಹುಡುಕಿದ ಹುಡುಗಿಯನ್ನೇ ಮನೋರಂಜನ್ ಮದುವೆಯಾಗುತ್ತಿದ್ದಾರೆ. ಆದರೆ ಈ ಬಗ್ಗೆ ಕ್ರೇಜಿ ಸ್ಟಾರ್ ಕುಟುಂಬ ಎಲ್ಲಿಯೂ ಮಾಹಿತಿ ರಿವೀಲ್ ಮಾಡಿಲ್ಲ. ಮುಂದಿನ ತಿಂಗಳೇ ಮದುವೆಯಾಗಿದ್ದರಿಂದ ಸದ್ಯದಲ್ಲೇ ಕ್ರೇಜಿ ಕುಟುಂಬ ಮಗನ ಮದುವೆ ಸಂಭ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುವ ಸಾಧ್ಯತೆ ಇದೆ.

ಮನೋರಂಜನ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟದ್ದು, ಭರತ್ ನಿರ್ದೇಶನ ಮಾಡಿದ್ದ ‘ಸಾಹೇಬ’ ಸಿನಿಮಾದ ಮೂಲಕ. ಅನಂತರ ‘ಬೃಹಸ್ಪತಿ’ ಸಿನಿಮಾ. ತಮಿಳಿನ ‘ವೆಲೈಯಿ ಪಟ್ಟಧಾರಿ’ ಸಿನಿಮಾದ ರಿಮೇಕ್ ಆಗಿತ್ತು. ಈಚೆಗೆ ಅವರ ನಟನೆಯ ಮುಗಿಲ್‌ಪೇಟೆ, ಪ್ರಾರಂಭ ಸಿನಿಮಾಗಳು ಕೂಡ ತೆರೆಕಂಡಿವೆ. ಒಂದೊಳ್ಳೆಯ ಬ್ರೇಕ್‌ಗಾಗಿ ಮನೋರಂಜನ್ ಕಾದಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ರವಿಚಂದ್ರನ್ ನಿರ್ದೇಶನದಲ್ಲಿಯೇ ಮನೋರಂಜನ್ ಚಿತ್ರರಂಗ ಪ್ರವೇಶ ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಈಗ ರವಿಚಂದ್ರನ್ ಅವರ ಹೊಸ ಸಿನಿಮಾದಲ್ಲಿ ಮನೋರಂಜನ್ ನಟಿಸಲಿದ್ದಾರೆ.

Leave A Reply

Your email address will not be published.